ಚಂದ್ರಯಾನ-3 ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಅನ್ನು ಮತ್ತೆ ಕಾರ್ಯನಿರ್ವಹಣೆ ಮಾಡುವ ಪ್ರಯತ್ನ ಇನ್ನೂ ನಡೆಯುತ್ತಿದೆ. ಈ ಕುರಿತಾಗಿ ಇಸ್ರೋ ಬಿಗ್‌ ಅಪ್‌ಡೇಟ್‌ ನೀಡಿದೆ. 

ಬೆಂಗಳೂರು (ಸೆ.22): ಚಂದ್ರನ ದಕ್ಷಿಣ ಧ್ರುವದ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಅನ್ನು ಎಬ್ಬಿಸುವ ಪ್ರಯತ್ನವನ್ನು ಇಸ್ರೋ ಮಾಡುತ್ತಿದೆ. ಈ ಕ್ಷಣದವರೆಗೂ ವಿಕ್ರಮ್‌ ಹಾಗೂ ಪ್ರಗ್ಯಾನ್‌ನಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಇಸ್ರೋ ತಿಳಿಸಿದೆ. 'ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅವರನ್ನು ಎಚ್ಚರಿಸಿರುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂವಹನವನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯದ ಮಟ್ಟಿಗೆ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ' ಎಂದು ಇಸ್ರೋ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ಸೆಂಟರ್‌ನಿಂದ ಈಗಾಗಲೇ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಗೆ ತನ್ನ ಕಮಾಂಡ್‌ಅನ್ನು ನೀಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಅವರಿಬ್ಬರಿಗೂ ಕಮಾಂಡ್‌ ತಲುಪಿದೆಯೇ, ಅವರು ಎಚ್ಚರಗೊಂಡ ಸ್ಥಿತಿಯಲ್ಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈವರೆಗೂ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕ ಸಾಧಿಸುವ ಎಲ್ಲಾ ಪ್ರಯತ್ನಗಳು ಮುಂದುವರಿಯಲಿದೆ ಎಂದು ಹೇಳಿದೆ. 14 ದಿನಗಳ ರಾತ್ರಿಯ ನಂತರ, ಸೂರ್ಯನ ಬೆಳಕು ಮತ್ತೊಮ್ಮೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಪ್ರಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಸ್ಲೀಪ್ ಮೋಡ್‌ನಲ್ಲಿ ಇರಿಸಲಾದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಎಚ್ಚರಗೊಳಿಸುವ ಭರವಸೆಯನ್ನು ಇಸ್ರೋ ಹೊಂದಿತ್ತು. ಇಸ್ರೋ ಸೆಪ್ಟೆಂಬರ್ 4 ರಂದು ಲ್ಯಾಂಡರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಿತ್ತು. ಮೊದಲು ಸೆಪ್ಟೆಂಬರ್ 2 ರಂದು ರೋವರ್ ಅನ್ನು ಸ್ಲೀಪ್ ಮೋಡ್‌ಗೆ ಹಾಕಲಾಯಿತು. ಇಸ್ರೋ ಲ್ಯಾಂಡರ್-ರೋವರ್‌ನ ರಿಸೀವರ್‌ಗಳನ್ನು ಆನ್‌ನಲ್ಲಿ ಇರಿಸಿದೆ.

ಚಂದ್ರನ ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯೋದಯ, ನಿದ್ರೆಯಿಂದ ಏಳ್ತಾರಾ ವಿಕ್ರಮ್‌, ಪ್ರಗ್ಯಾನ್‌?

ಹಾಗೇನಾದರೂ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಸಿಗ್ನಲ್‌ ಕಳಿಸದೇ ಇದ್ದಲ್ಲಿ, ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಇಲ್ಲಿಗೆ ಕೊನೆಯಾಗಲಿದೆ ಎಂದು ಇಸ್ರೋ ಈಗಾಗಲೇ ತಿಳಿಸಿತ್ತು. ಚಂದ್ರಯಾನ-3 ಅನ್ನು 14 ಜುಲೈ 2023 ರಂದು ಮಧ್ಯಾಹ್ನ 2:35 ಕ್ಕೆ ಉಡಾವಣೆ ಮಾಡಲಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್ವಿಎಂ3 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಆಗಸ್ಟ್ 23 ರಂದು, ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ಆ ಮೂಲಕ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ಅನ್ನು ಇಳಿಸಿದ ಮೊದಲ ದೇಶ ಎನಿಸಿಕೊಂಡಿತು.

ಸೂರ್ಯಯಾನದ ಪಥ ಆರಂಭ, ಇಂದು ರಾತ್ರಿ ಶಾಶ್ವತವಾಗಿ ಭೂಮಿಯನ್ನು ತೊರೆಯಲಿದೆ ಆದಿತ್ಯ ಎಲ್‌1

Scroll to load tweet…