'ಯಾರಿವನು' ಶೂಟಿಂಗ್ ವೇಳೆ ಡಾ.ರಾಜ್ ಕೊ* ಯತ್ನ! ಬದುಕಿದ್ದೇ ಪವಾಡ- ಸಾ.ರಾ.ಗೋವಿಂದು
ಡಾ.ರಾಜ್ಕುಮಾರ್ ಅವರನ್ನು ಸಾಯಿಸಲು ಯುವಕರ ತಂಡವೊಂದು ಬಂದು ಮಾಡಿದ ಹಲ್ಲೆ ಹಾಗೂ ಅಂದು ಅವರು ಬದುಕಿದ್ದು ಹೇಗೆ ಉಳಿದುಕೊಂಡರು ಎಂಬ ಬಗ್ಗೆ ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದ್ದೇನು?

1984 ರಲ್ಲಿ ಬಿಡುಗಡೆಯಾಗಿದ್ದ ಡಾ.ರಾಜ್ಕುಮಾರ್ ಮತ್ತು ರೂಪಾದೇವಿ ಅಭಿನಯದ ಯಾರಿವನು ಚಿತ್ರ ಬಾಕ್ಸ್ ಆಫೀಸ್ನಲ್ಲಿ ಚಿಂದಿ ಉಡಾಯಿಸಿದ ಚಿತ್ರಗಳಲ್ಲಿ ಒಂದು. ಆದರೆ ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಡಾ.ರಾಜ್ಕುಮಾರ್ ಅವರನ್ನು ಸಾಯಿಸುವ ಉದ್ದೇಶಿದಂದ ಗುಂಪೊಂದು ದಾಳಿ ಮಾಡಿರುವ ವಿಷಯ ಮಾತ್ರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟಿ ರೂಪಾದೇವಿ ಅವರ ಮೇಲೆಯೂ ಹಲ್ಲೆ ನಡೆದಿತ್ತು. ಅವರ ಬಟ್ಟೆಗಳನ್ನೂ ಕಿತ್ತುಹಾಕಲಾಗಿತ್ತು ಎನ್ನಲಾಗಿದೆ. ಅಷ್ಟಕ್ಕೂ ಯಾರ ತಂಟೆಗೂ ಹೋಗದ ಡಾ.ರಾಜ್ ಅವರ ಮೇಲೆ ಹಲ್ಲೆ, ಕೊ* ಯತ್ನ ನಡೆಯಲು ಕಾರಣವಾದರೂ ಏನು? ಅಂದು ಏನಾಗಿತ್ತು? ಆ ಗುಂಪು ಬಂದದ್ದು ಯಾಕೆ? ಶಸ್ತ್ರಸಜ್ಜಿತವಾಗಿ ಬಂದ ಯುವಕರ ಗುಂಪು ಡಾ.ರಾಜ್ ಅವರ ಮೇಲೆ ಅಷ್ಟು ರೊಚ್ಚಿಗೆದ್ದದ್ದು ಯಾಕೆ ಎನ್ನುವ ವಿಷಯವನ್ನು ನಿರ್ಮಾಪಕ, ನಟ ಸಾ.ರಾ.ಗೋವಿಂದು ಮಾತನಾಡಿರುವ ವಿಡಿಯೋ ಒಂದು ಮತ್ತೆ ವೈರಲ್ ಆಗುತ್ತಿದೆ.
ಚಿತ್ರಲೋಕ ಯೂಟ್ಯೂಬ್ ಚಾನೆಲ್ಗೆ ಗೋವಿಂದು ಅವರು ನೀಡಿದ್ದ ಸಂದರ್ಶನ ಇದಾಗಿದೆ. ಅದು 1982 ರ ಸಮಯ. ಗೋಕಾಕ್ ಚಳವಳಿ ಜೋರಾಗಿ ನಡೆದಿತ್ತು. ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ನಡೆದ ಚಳವಳಿ ಇದು. ಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕ್ ರು ಸಿದ್ಧಪಡಿಸಿ ಸಲ್ಲಿಸಿದ್ದರು, ಆದ ಕಾರಣ ಈ ಚಳವಳಿಗೆ ಅವರದ್ದೇ ಹೆಸರು ಬಂದಿದೆ. ಡಾ.ರಾಜ್ಕುಮಾರ್ ಕೂಡ ಇತರ ಗಣ್ಯರ ಜೊತೆ ಈ ಚಳವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ 1956 ರಿಂದಲೇ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತ್ತು. 1967 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿದರು. ಆದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ಮುಖ್ಯ ಭಾಷೆಯಾಗಿ ಇರಬೇಕು ಎನ್ನುವ ಸಂಬಂಧದ ಈ ಚಳವಳಿಯನ್ನು ಶುರು ಮಾಡಲಾಗಿತ್ತು. ಈ ಚಳವಳಿ ಬೇರೆಯದ್ದೇ ರೂಪದಲ್ಲಿ ಅರ್ಥೈಸಿಕೊಂಡದ್ದೇ ಡಾ.ರಾಜ್ ಅವರ ಜೀವಕ್ಕೆ ಮುಳುವಾಗಿತ್ತು.
ಅಪ್ಪ ಅವಳನ್ನು ಹಿಡ್ಕೊಂಡಾಗ ನಂಗೆ ಹೊಟ್ಟೆಕಿಚ್ಚಾಗಿತ್ತು: ಶಿವಣ್ಣ ಪುತ್ರಿ ಓಪನ್ ಮಾತು
ಈ ಬಗ್ಗೆ ಸಾ.ರಾ.ಗೋವಿಂದು ಅವರು ಮಾತನಾಡಿದ್ದಾರೆ. 'ಊಟಿಯಲ್ಲಿ ಯಾರಿವನು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಡೆದ ಕಹಿ ಘಟನೆ ಇದು. ತಮಿಳಿಗರನ್ನು ಕರ್ನಾಟಕದಿಂದ ಒಕ್ಕಲೆಬ್ಬಿಸುವ ಕೆಲಸವನ್ನು ಡಾ.ರಾಜ್ಕುಮಾರ್ ಮಾಡುತ್ತಿದ್ದಾರೆ ಎನ್ನುವ ತಪ್ಪು ಸಂದೇಶ ಈ ಗೋಕಾಕ್ ಚಳವಳಿಯ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಪ್ರಸಾರ ಆಗಿಬಿಟ್ಟಿತ್ತು. ಇದು ಕರ್ನಾಟಕದವರಿಗೆ ಯಾರಿಗೂ ತಿಳಿದಿರಲಿಲ್ಲ. ಈ ವಿಷಯ ರಾಜಕೀಯ ತಿರುವು ಪಡೆದುಕೊಂಡು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಪತ್ರಿಕಾಗೋಷ್ಠಿ ನಡೆದು ಅಲ್ಲಿಯ ಪತ್ರಿಕೆಗಳಲ್ಲಿಯೂ ಇದೇ ಸುದ್ದಿ ಬಿತ್ತರವಾಗಿತ್ತು. ತಮಿಳಿಗರನ್ನು ಕರ್ನಾಟಕದಿಂದ ಓಡಿಸಬೇಕು ಎನ್ನುವ ಮುಖ್ಯ ಉದ್ದೇಶ ಈ ಚಳವಳಿಯದ್ದು ಎಂದು ತಿಳಿದುಕೊಂಡು ಬಿಟ್ಟಿದ್ದರು.
ಆದರೆ ನಮಗೆ ಯಾರಿಗೂ ಇದರ ಅರಿವು ಇರಲೇ ಇಲ್ಲ. ತಮಿಳುನಾಡಿನ ಊಟಿಯಲ್ಲಿ ಚಿತ್ರೀಕರಣಕ್ಕೆ ಹೋಗಿದ್ವಿ. ಆದರೆ ಡಾ.ರಾಜ್ಕುಮಾರ್ ಅವರ ಮೇಲೆ ಸಿಟ್ಟುಗೊಂಡಿದ್ದ ವಿದ್ಯಾರ್ಥಿಗಳು, ಅವರ ಹತ್ಯೆಗೆಂದು ದೊಡ್ಡಮಟ್ಟದಲ್ಲಿ ಯೋಜನೆಯನ್ನು ರೂಪಿಸಿದ್ದರು. ಅದಾಗಲೇ ಡಾ.ರಾಜ್ ಅವರ ಮನೆಯ ಮುಂದೆಯೂ ಭಾರಿ ಭದ್ರತೆ ಒದಗಿಸಲಾಗಿತ್ತು. ಆದರೆ ಶೂಟಿಂಗ್ನಲ್ಲಿ ಇರುವ ನಮಗೆ ಅದರ ಮಾಹಿತಿ ಇರದ ಕಾರಣ, ಗಲಾಟೆ ನಡೆಯಿತು. ಡಾ.ರಾಜ್ ಮತ್ತು ರೂಪಾದೇವಿ ಅವರ ಮೇಲೆ ಹಲ್ಲೆ ಮಾಡಿದರು ವಿದ್ಯಾರ್ಥಿಗಳು. ಅದು ಯಾವ ರೀತಿಯ ಭೀಕರ ಹಲ್ಲೆ ಎಂದರೆ ಡಾ.ರಾಜ್ ಅಂದು ಬದುಕಿದ್ದೇ ಹೆಚ್ಚು. ಅವರ ಮೈಮೇಲೆ ಆಗಿದ್ದ ಗಾಯ ನೋಡಿದ್ರೆ, ಭಯಾನಕವಾಗಿತ್ತು. ಚಾಲಕ ಸತೀಶ್ ಬಾಬು ಅವರು ಡಾ.ರಾಜ್ ಅವರನ್ನು ಹೊಡೆಯಬಾರದು ಎನ್ನುವಂತೆ ತಬ್ಬಿಕೊಂಡು ಬಿಟ್ಟರು. ಆ ಸಂದರ್ಭದಲ್ಲಿ ದೊಡ್ಡ ಸೈಜುಗಲ್ಲನ್ನು ಎತ್ತಿ ಹಾಕಿದ್ರು. ಆ ಕಲ್ಲನ್ನು ಸತೀಶ್ ಬಾಬು ಕ್ಯಾಚ್ ಹಿಡಿದು ಸೈಡ್ಗೆ ಬೀಳ್ತಾರೆ. ಸತೀಶ್ ಬಾಬು ಇಲ್ಲದಿದ್ದರೆ, ಅಂದು ಡಾ.ರಾಜ್ ಇರುತ್ತಿರಲಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಇರುವ ಕನ್ನಡಿಗರು ಬಳಿಕ ಗಲಾಟೆ ನಡೆಸಿದ್ದರು, ಬೆಂಗಳೂರು ಬೆಂಕಿ ರೀತಿ ಆಯಿತು ಎಂದು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ಸಾ.ರಾ.ಗೋವಿಂದು.
ಅಪ್ಪು ಕೊನೆಯ ಬಾರಿ ನೇರಪ್ರಸಾರದಲ್ಲಿ ಮಾತನಾಡಿದ ವಿಡಿಯೋ ಪುನಃ ವೈರಲ್: ಅಭಿಮಾನಿಗಳ ಕಣ್ಣೀರು