ಇನ್ಫೋಸಿಸ್‌ನ ಸುಧಾಮೂರ್ತಿ ಸರಳತೆ, ಮೌಲ್ಯಯುತ ಜೀವನದಿಂದ ಆದರ್ಶಪ್ರಾಯರಾಗಿದ್ದಾರೆ. ಒಮ್ಮೆ, ಮಗನ ಐದು-ಸ್ಟಾರ್ ಹೋಟೆಲ್ ಹುಟ್ಟುಹಬ್ಬದ ಆಚರಣೆಗೆ ಅವರು ಹಣದ ಮಹತ್ವ ತಿಳಿಸಿದರು. ದುಬಾರಿ ಆಚರಣೆಗಿಂತ, ಆ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಬಳಸುವಂತೆ ಪ್ರೇರೇಪಿಸಿದರು. ಮಕ್ಕಳನ್ನು ಬೆಳೆಸುವಲ್ಲಿ, ದುಬಾರಿ ಶಿಕ್ಷಣಕ್ಕಿಂತ ಮೌಲ್ಯಗಳನ್ನು ಕಲಿಸುವುದು ಮುಖ್ಯವೆಂದು ಅವರು ಪ್ರತಿಪಾದಿಸುತ್ತಾರೆ. ಜೀವನವನ್ನು ಪ್ರೀತಿಸುವಂತೆ, ಸಂತೋಷದಿಂದ ಇರುವಂತೆ ಮಾಡುವುದು ಅವರ ಆದ್ಯತೆ.

ಐಟಿ ಜಗತ್ತಿನಲ್ಲಿ ಹೆಮ್ಮರವಾಗಿ ಬೆಳೆದು ವಿಶ್ವ ನಕಾಶೆಯಲ್ಲಿ ಭಾರತ ತಲೆ ಎತ್ತುವಂತೆ ಮಾಡಿದ ಸಾಧಕ ಸಂಸ್ಥೆಗಳಲ್ಲಿ ಇನ್‌ಫೋಸಿಸ್‌ ಸಹ ಒಂದು. ಈ ಐಟಿ ಜಗತ್ತಿನ ದೈತ್ಯ ಸಂಸ್ಥೆ ಬೆಳೆಯುವಲ್ಲಿ ನಾರಾಯಣ ಮೂರ್ತಿಯಂಥ ಐಕಾನ್‌ಗಳ ಶ್ರಮವಿದೆ. ಆದರೆ ಇನ್‌ಫೋಸಿಸ್‌ನ ಏಳ್ಗೆಯಲ್ಲಿ ಶಕ್ತಿಯಾಗಿ ದುಡಿದ ಸುಧಾಮೂರ್ತಿ ತಮ್ಮ ಸರಳತೆ, ಅರ್ಥಪೂರ್ಣ ಬದುಕಿನಿಂದಲೇ ಎಷ್ಟೋ ಜನರಿಗೆ ಸ್ಫೂರ್ತಿ. ಹಲವರಿಗೆ ಸಹಾಯ ಮಾಡಿದ್ದರೂ, ತಮ್ಮ ಮಾತುಗಳಿಂದ ಸ್ಫೂರ್ತಿ ತುಂಬಿದ್ದರೂ ಅವರಿಗೆ ಆ ಬಗ್ಗೆ ಹೆಮ್ಮೆ ಇಲ್ಲ. ಬದಲಿಗೆ ಇರುವ ಸಮಯದಲ್ಲಿ ಸಾಧ್ಯವಾದಷ್ಟು ಒಳ್ಳೆ ಕೆಲಸವನ್ನೇ ಮಾಡಬೇಕು, ಒಳ್ಳೆ ಮಾತುಗಳಿಂದ ಜನರಲ್ಲಿ ಸ್ಫೂರ್ತಿ ತುಂಬಬೇಕೆಂದೇ ಹಂಬಲಿಸುತ್ತಾರೆ. ಸಾಮಾಜಿಕವಾಗಿ ಇಷ್ಟೆಲ್ಲ ಮಾಡಿರೋ ಸುಧಾಮೂರ್ತಿ ಮನೆಯಲ್ಲಿ ಗಂಡ, ಮಕ್ಕಳ ಜೊತೆ ಹೇಗಿರ್ತಾರೆ? ಹೊರಗೆಲ್ಲ ನೀತಿಪಾಠ ಹೇಳಿ ಒಳಗೆ ಅರ್ಥ ರಹಿತವಾಗಿ ಬದುಕುತ್ತಿದ್ದರೆ ಅದಕ್ಕೆ ಮಹತ್ವ ಇರೋದಿಲ್ಲ. ಆದರೆ ಸುಧಾಮೂರ್ತಿ ಮಕ್ಕಳನ್ನು ಬೆಳೆಸೋದರಲ್ಲೂ ಹೆಣ್ಣು ಮಕ್ಕಳಿಗೆ ಮಾದರಿಯಾದವರು. 

ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಮಧ್ಯಮ ವರ್ಗದ ಆರ್ಥಿಕ ಸ್ಥಿತಿಯನ್ನು ದಾಟಿ ಶ್ರೀಮಂತರೇ ಆಗಿದ್ದರು. ದೇಶದ ಪ್ರತಿಷ್ಠಿತ ಫ್ಯಾಮಿಲಿಯಾಗಿ ಗುರುತಿಸಿಕೊಂಡಿದ್ದರು. ದುಡ್ಡು ಕಾಸು ಬಂದಮೇಲೆ ಅದನ್ನು ಬೇಕು ಬೇಕಾದಂತೆ ಖರ್ಚು ಮಾಡೋ ಖಯಾಲಿಯೇ ನಮ್ಮಲ್ಲಿ ಅಧಿಕ. ಅಪ್ಪ ಅಮ್ಮ ಎಷ್ಟೇ ಕಷ್ಟಪಟ್ಟು ದುಡಿದು ಸಂಪಾದಿಸಿದ್ದರೂ ಮಕ್ಕಳು ಅದನ್ನು ಮೋಜು ಮಸ್ತಿಗೆ ಬಳಸೋದು ಕಾಮನ್. ಸುಧಾಮೂರ್ತಿ ಬದುಕಿನಲ್ಲೂ ಇಂಥದ್ದೊಂದು ಸನ್ನಿವೇಶ ಎದುರಾಗಿತ್ತು.

ಕೋಟಿ ಕೋಟಿ ಒಡತಿಯಾದರೂ 30 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ!... ಕಾರಣ..!?

ಇವರ ಮಗ ಒಮ್ಮೆ ಫೈವ್ ಸ್ಟಾರ್ ಹೊಟೇಲಿನಲ್ಲಿ (Five Star Hotel) ತನ್ನ ಬರ್ತ್ ಡೇ ಪಾರ್ಟಿ ಮಾಡಬೇಕೆಂದು ಹಠ ಹಿಡಿದಿದ್ದನಂತೆ. ಈ ಬಗ್ಗೆ ಹೇಳುವ ಸುಧಾಮೂರ್ತಿ, 'ಮಗ ಫೈವ್‌ಸ್ಟಾರ್‌ ಹೊಟೇಲಿನಲ್ಲಿ ಬರ್ತ್‌ ಡೇ ಸೆಲೆಬ್ರೇಟ್‌ ಮಾಡಬೇಕೆಂದಾಗ ನಾನು ಮತ್ತು ಮೂರ್ತಿ ಯೆಸ್ ಅಥವಾ ನೋ ಅನ್ನೋ ಬದಲಿಗೆ ಮಗನಿಗೆ ಹಣದ ಮೌಲ್ಯ (Value of Money) ತಿಳಿಸಿದೆವು. ಅವನನ್ನು ಕೂರಿಸಿ ಈಗ ಫೈವ್‌ ಸ್ಟಾರ್‌ ಹೊಟೇಲಿನಲ್ಲಿ ಬರ್ತ್ ಡೇ ಸೆಲೆಬ್ರೇಶನ್ ಮಾಡಿದರೆ ಎಷ್ಟು ಖರ್ಚಾಗಬಹುದು ಅಂತ ಯೋಚಿಸೋಣ. ಪ್ರತಿಯೊಬ್ಬರಿಗೆ 1000 ರೂ. ಖರ್ಚು ಬರಬಹುದು ಅಂತಿಟ್ಕೊಳ್ಳೋಣ. ಫ್ರೆಂಡ್ಸ್, ಅವರಿವರೆಲ್ಲ ಸೇರಿ ಐವತ್ತು ಜನರಿಗೆ ಕರೆಯಬಹುದು. ಎಷ್ಟಾಯ್ತು ಅಮೌಂಟ್. ಐವತ್ತು ಸಾವಿರ. ಅಂದರೆ ಒಂದು ಹೊತ್ತಿಗೆ ಐವತ್ತು ಸಾವಿರ ರುಪಾಯಿ ಖರ್ಚಾಯ್ತು. ಆದರೆ ನಮ್ಮ ನಡುವೆ ಎಷ್ಟೋ ಮಕ್ಕಳಿಗೆ ಸರಿಯಾಗಿ ಊಟ ಇಲ್ಲ. ಶಿಕ್ಷಣ ಸಿಗುತ್ತಿಲ್ಲ. ಈ ಒಂದು ಹೊತ್ತಿನ ಮೋಜಿನ ಹಣವನ್ನು ಅಂಥಾ ಮಕ್ಕಳ ಶಿಕ್ಷಣಕ್ಕೆ (Education) ಬಳಸಬಹುದಲ್ವಾ, ನಮ್ಮ ಮನೆಯ ಡ್ರೈವರ್ ಮಕ್ಕಳನ್ನೇ ಈ ಹಣದಲ್ಲಿ ಓದಿಸಬಹುದು. ಫೈವ್ ಸ್ಟಾರ್ ಹೊಟೇಲಿನಲ್ಲಿ ಒಂದು ದಿನಕ್ಕೆ ಖರ್ಚು ಮಾಡುವ ಹಣ ಮಕ್ಕಳ ಜೀವಮಾನಕ್ಕೆ ಸಹಕಾರಿಯಾಗುತ್ತೆ ಅಂದರೆ ಯಾವುದು ಬೆಟರ್‌ ನೀನೇ ನಿರ್ಧರಿಸು ಎಂದೆ.

ಹೀಗೆ ಕಾಸ್ಟ್‌ಲೀ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡೋದಕ್ಕಿಂತ ಸಮೋಸ ಮತ್ತು ಮ್ಯಾಂಗೋ ಜ್ಯೂಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದರೆ ಖುಷಿಯಲ್ಲೇನೂ ವ್ಯತ್ಯಾಸ ಆಗಲ್ಲ. ಖುಷಿಯ ಜೊತೆಗೆ ಕಡಿಮೆ ಬಜೆಟ್‌ನಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ತೃಪ್ತಿ ಇರುತ್ತೆ. ಇದನ್ನು ಇನ್ನೊಂದು ಮಗುವಿನ ವಿದ್ಯಾಭ್ಯಾಸಕ್ಕೆ ವ್ಯಯಿಸಿದ ಸಾರ್ಥಕತೆ ಇರುತ್ತೆ.

ಶಿಕ್ಷಕರಿಗೆ 3 ವರ್ಷಕ್ಕೊಮ್ಮೆ ಪರೀಕ್ಷೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಬಗ್ಗೆ ಸುಧಾ

ಪ್ರತೀ ವರ್ಷ ಬರುವ ಬರ್ತ್ ಡೇ ಪಾರ್ಟಿಗೆ (Birthday party) ನನ್ನ ಮಗ ಅಷ್ಟು ಹಣ ವ್ಯಯಿಸಿದರೆ ಅದು ನನಗೆ ಖುಷಿಯಾಗೋಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಇರಬಹುದು. ಆದರೆ ಪ್ರತೀ ವರ್ಷ ಬರುವ ಬರ್ತ್ ಡೇಯಂಥಾ ನಿರರ್ಥಕ ಸೆಲೆಬ್ರೇಶನ್‌ಗೆ ವೃಥಾ ಹಣ ಪೋಲು ಮಾಡೋದು ನನಗಂತೂ ಹಿಡಿಸೋದಿಲ್ಲ. ನೋಡು ಮಗೂ. ನೀನು ಒಬ್ಬ ಸಾಮಾನ್ಯ ಹುಡುಗ. ನಿನ್ನ ತಂದೆ ಶ್ರೀಮಂತ ಅಥವಾ ನನ್ನಲ್ಲಿ ಹಣವಿದೆ ಎಂದ ಕೂಡಲೇ ನೀನೇನೂ ಎಕ್ಸ್ಟ್ರಾ ಆರ್ಡಿನರಿ (Extra ordinary) ಆಗೋದಿಲ್ಲ..' ಹೀಗೆ ಮಗನಿಗೆ ಹಣದ ಮೌಲ್ಯದ ಬಗ್ಗೆ ಸುಧಾಮೂರ್ತಿ ಮನದಟ್ಟು ಮಾಡಿದರಂತೆ.

ಸುಧಾಮೂರ್ತಿ ಮಗನನ್ನು ಬೆಳೆಸಿದ್ದೂ ಹೀಗೆಯೇ. ಅವರು ಆಗಾಗ ಹೇಳೋ ಮಾತು.. ನಿಮ್ಮ ಮಕ್ಕಳನ್ನು ಎಂಥಾ ಒಳ್ಳೆ ಯೂನಿವರ್ಸಿಟಿಯಲ್ಲಿ(University) ಓದಿಸಿದ್ದೀರಿ ಅನ್ನೋದಕ್ಕಿಂತ ಅವರಿಗೆ ಎಷ್ಟೊಳ್ಳೆ ಮೌಲ್ಯ ಕಲಿಸಿದ್ದೀರಿ, ಅವರು ಎಷ್ಟರಮಟ್ಟಿಗೆ ಬದುಕನ್ನು ಪ್ರೀತಿಸುವಂತೆ, ಬದುಕಲ್ಲಿ ಸಂತೋಷದಿಂದ ಇರುವಂತೆ ಮಾಡಿದ್ದೀರಿ ಅನ್ನೋದೇ ಮುಖ್ಯ. ಯುನಿವರ್ಸಿಟಿಗಳು ಪ್ರತಿಷ್ಠಿತವಾದ ಮಾತ್ರಕ್ಕೆ ಅಲ್ಲಿ ಓದುವ ಮಕ್ಕಳೆಲ್ಲ ಖುಷಿಯನ್ನು (Happy) ಅನಾಯಸವಾಗಿ ಪಡೆಯುತ್ತಾರೆ ಅಂತಲೋ, ಅವರ ಬದುಕು (Life) ಸದಾ ಸಂತೋಷದಿಂದ ಕೂಡಿರುತ್ತದೆ ಅಂತಲೋ ಅರ್ಥ ಅಲ್ಲ. ಇದರ ಬದಲು ಮಾನವೀಯತೆ (Humanity), ಜೀವನದ ಮೌಲ್ಯಗಳನ್ನು (Life Values) ಮಕ್ಕಳಿಗೆ ಕಲಿಸುತ್ತಾ ಹೋದರೆ ಅವರ ಬದುಕು ಅರ್ಥಪೂರ್ಣವಾಗಿರುತ್ತದೆ ಅನ್ನೋದು ಸುಧಾಮೂರ್ತಿ ಅವರ ಮಾತು.