ಫ್ಲೈಟ್ನಲ್ಲೇ ಕ್ಯಾಬಿನೆಟ್ ಸರ್ಕಸ್: ಸಂಪುಟ ವಿಸ್ತರಣೆಗೆ ಶಾ ಗ್ರೀನ್ ಸಿಗ್ನಲ್..!
ತೀವ್ರ ಕುತೂಹಲ ಮೂಡಿಸಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇವತ್ತು ರಾಜ್ಯಕ್ಕೆ ಬಂದ ಅಮಿತ್ ಶಾ ಜತೆ ಬಿಎಸ್ ವೈ ವಿಮಾನದಲ್ಲಿಯೇ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುವರೆಗೂ ಕ್ಯಾಬಿನೆಟ್ ಬಗ್ಗೆ ಚರ್ಚಿಸಿದರು. ಅಷ್ಟಕ್ಕೂ ಆ 40 ನಿಮಿಷ ವಿಮಾನದಲ್ಲಿ ನಡೆದ ಮಾತುಕತೆ ಏನು..? ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಹೇಳಿದ್ದೇನು..?
ಬೆಂಗಳೂರು, [ಜ.18]: ಸಿಎಂ ಬಿಎಸ್ ಯಡಿಯೂರಪ್ಪನವರು ಹೇಳಿದಂತೆಯೇ ರಾಜ್ಯಕ್ಕೆ ಆಗಮಿಸಿದ ಅಮಿತ್ ಶಾ ಜತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದರು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಸಂದರ್ಭದಲ್ಲಿ ವಿಮಾನದಲ್ಲಿ ಬಿಎಸ್ ಯಡಿಯೂರಪ್ಪ ಅವರು ಅಮಿತ್ ಶಾ ಜತೆಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದ್ದಾರೆ.
ಸುಮಾರು 40 ನಿಮಿಷಗಳ ಪ್ರಯಾಣದುದ್ದಕ್ಕೂ ವಿಮಾನದಲ್ಲಿ ಬಿಎಸ್ ವೈ ಹಾಗೂ ಶಾ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಸುದಿರ್ಘವಾಗಿ ಚರ್ಚೆ ನಡೆಸಿದರು. ಈ ವೇಳೆ ಸಂಪುಟ ವಿಸ್ತರಣೆಗೆ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ಶಾಕ್ ಕೊಟ್ಟ ಹೈಕಮಾಂಡ್: ಸಚಿವರಾಗ್ಬೇಕೆಂದು ಬಿಜೆಪಿಗೆ ಹೋದವರಿಗೆಲ್ಲ ಇಲ್ಲ ಮಂತ್ರಿಗಿರಿ?
ಸಂಪುಟ ವಿಸ್ತರಣೆಗೆ ಅಸ್ತು ಎಂದಿರೋ ಅಮಿತ್ ಶಾ, ಉಪಚುನಾವಣೆಯಲ್ಲಿ ಗೆದ್ದವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೆ, ಕಥೆಯೇನೂ ಅನ್ನೋದನ್ನ ದೆಹಲಿ ಬನ್ನಿ ಚರ್ಚಿಸೋಣ ಎಂದಿದ್ದಾರಂತೆ.
ಸೋತವರನ್ನ ಏನು ಮಾಡೋಣ..? ಸೋತವರಿಗೆ ಮಂತ್ರಿಗಿರಿ ಕೊಡದಿದ್ರೆ ಅಸಮಾಧಾನ ಹೊರಹಾಕ್ತಾರೆ ಎಂದು ಬಿಎಸ್ ವೈ, ಶಾಗೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿರುವ ಶಾ, ಸೋತವರನ್ನ ಮಂತ್ರಿ ಮಾಡುವ ಬಗ್ಗೆ ದೆಹಲಿಯಲ್ಲಿ ತೀರ್ಮಾನಿಸೋಣ. ಜೆ ಪಿ ನಡ್ಡಾ ಜೊತೆ ಚರ್ಚೆ ಮಾಡಿ. ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಎಸ್ ವೈ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಎಸ್ ವೈಗೆ ಒಂದು ಕಡೆ ಸಿಹಿಯಾದ್ರೆ ಮತ್ತೊಂದೆಡೆ ಕಹಿಯೊಂದಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಾಪಸ್ಸಾದರು. ನಾಳೆ [ಭಾನುವಾರ] ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ. ಇದರಿಂದ ಸಂಪುಟ ವಿಸ್ತರಣೆ ಏನಿದ್ರೂ ಅಲ್ಲಿಂದ ಬಂದ ನಂತರವೇ.
ಸಂಪುಟ ವಿಸ್ತರಣೆ ಈ ವಾರವಾಗುತ್ತೆ. ಮುಂದಿನ ವಾರವಾಗುತ್ತೆ ಎಂದು ಬಿಎಸ್ ವೈ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದ ನೂತನ ಶಾಸಕರಿಗೆ ಕೊನೆಗೂ ಸಚಿವರಾಗಿ ಸಂಪುಟ ಸೇರುವ ಸಮಯ ಹತ್ತಿರವಾದಂತಾಗಿದೆ. ಮತ್ತೊಂದೆಡೆ ಉಪ ಚುನಾವಣೆಯಲ್ಲಿ ಸೋತವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.