Asianet Suvarna News Asianet Suvarna News

ರಾಮ​ನ​ಗರ: ಡಿಕೆಶಿಗೆ ಅಶೋಕ್‌, ಎಚ್‌ಡಿಕೆಗೆ ಸಿಪಿವೈ ಸವಾಲು..!

ಸಿಎಂ ಕುರ್ಚಿ ಮೇಲೆ ಕಣ್ಣಿ​ಟ್ಟಿ​ರುವ ಮಾಜಿ ಸಿಎಂ ಕುಮಾ​ರ​ಸ್ವಾಮಿ ಹಾಗೂ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಿ, ಮಣಿಸಲು ಬಿಜೆಪಿ ತಂತ್ರ ರೂಪಿಸಿದ್ದು, ಕನಕಪುರದಲ್ಲಿ ಡಿಕೆಶಿ ವಿರುದ್ಧ ಸಚಿವ ಅಶೋಕ್‌ ಅವರನ್ನು, ಚನ್ನಪಟ್ಟಣದಲ್ಲಿ ಎಚ್‌ಡಿಕೆ ವಿರುದ್ಧ ಸಿ.ಪಿ.ಯೋಗೇಶ್ವರ್‌ ಅವರನ್ನು ಕಣಕ್ಕಿಳಿಸಿದೆ.

R Ashok Challenges to DK Shivakumar at Kanakapura Ramanagara grg
Author
First Published Apr 29, 2023, 8:37 AM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ಏ.29):  ರೇಷ್ಮೆ​ನ​ಗರಿ ರಾಮ​ನ​ಗರ ಜಿಲ್ಲೆ ಮೇಲ್ನೋ​ಟಕ್ಕೆ ಜೆಡಿ​ಎಸ್‌ನ ಭದ್ರ​ಕೋ​ಟೆ​ಯಂತೆ ಕಂಡು ಬಂದರೂ, ಬಹು​ತೇಕ ಸ್ಥಳೀಯ ಸಂಸ್ಥೆ​ಗ​ಳಲ್ಲಿ ಕಾಂಗ್ರೆಸ್‌, ತನ್ನ ಹಿಡಿತ ಸಾಧಿ​ಸಿದೆ. ಬಿಜೆಪಿ ಅಸ್ತಿ​ತ್ವ​ಕ್ಕಾಗಿ ತಿಣು​ಕಾ​ಡು​ತ್ತಿದೆ. ಕಳೆದ ವಿಧಾನಸಭಾ ಚುನಾ​ವ​ಣೆ​ಯಲ್ಲಿ 4 ಕ್ಷೇತ್ರ​ಗಳ ಪೈಕಿ ಜೆಡಿ​ಎಸ್‌ 3ರಲ್ಲಿ, ಕಾಂಗ್ರೆಸ್‌ 1ರಲ್ಲಿ ಗೆದ್ದಿತ್ತು. ಈ ಬಾರಿ ಸಿಎಂ ಕುರ್ಚಿ ಮೇಲೆ ಕಣ್ಣಿ​ಟ್ಟಿ​ರುವ ಮಾಜಿ ಸಿಎಂ ಕುಮಾ​ರ​ಸ್ವಾಮಿ ಹಾಗೂ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಿ, ಮಣಿಸಲು ಬಿಜೆಪಿ ತಂತ್ರ ರೂಪಿಸಿದ್ದು, ಕನಕಪುರದಲ್ಲಿ ಡಿಕೆಶಿ ವಿರುದ್ಧ ಸಚಿವ ಅಶೋಕ್‌ ಅವರನ್ನು, ಚನ್ನಪಟ್ಟಣದಲ್ಲಿ ಎಚ್‌ಡಿಕೆ ವಿರುದ್ಧ ಸಿ.ಪಿ.ಯೋಗೇಶ್ವರ್‌ ಅವರನ್ನು ಕಣಕ್ಕಿಳಿಸಿದೆ.

ರಾಮನಗರ:
ಕುಟುಂಬ ರಾಜ​ಕಾ​ರ​ಣಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

ಮೂವರು ಮುಖ್ಯ​ಮಂತ್ರಿ​ಗ​ಳನ್ನು ನಾಡಿಗೆ ಕೊಡು​ಗೆ​ಯಾಗಿ ನೀಡಿದ ರಾಮ​ನ​ಗರ, ಮಾಜಿ ಪ್ರಧಾನಿ ದೇವೇ​ಗೌ​ಡರ ಕುಟುಂಬಕ್ಕೆ ಅದೃ​ಷ್ಟದ ಕ್ಷೇತ್ರ. ಕಳೆದ 22 ವರ್ಷ​ಗ​ಳಿಂದ ಕುಟುಂಬ ರಾಜ​ಕಾ​ರ​ಣಕ್ಕೆ ನೆಲೆಯಾಗಿ ನಿಂತಿದೆ. ತಾತ ದೇವೇ​ಗೌಡ, ಮಗ ಕುಮಾ​ರ​ಸ್ವಾಮಿ, ಸೊಸೆ ಅನಿತಾ ಕುಮಾ​ರ​ಸ್ವಾಮಿ ಬಳಿಕ, ಈಗ ಮೊಮ್ಮಗ ನಿಖಿಲ್‌ ಕುಮಾ​ರ​ಸ್ವಾಮಿಯವರು ತಮ್ಮ ರಾಜ​ಕೀಯ ಭವಿಷ್ಯ ಕಂಡು​ಕೊ​ಳ್ಳಲು ಮುಂದಾ​ಗಿ​ದ್ದಾರೆ. ಈ ಕುಟುಂಬ ರಾಜ​ಕಾ​ರ​ಣಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಪ್ರಯ​ತ್ನಿ​ಸು​ತ್ತಿದೆ. ಇದ​ಕ್ಕೆ ಬಿಜೆಪಿಯೂ ಕೈ ಜೋಡಿ​ಸಿದ್ದು, ಚಕ್ರ​ವ್ಯೂಹ ರಚಿ​ಸಿದೆ.

ಡಿಕೆಶಿಗೆ ಠಕ್ಕರ್‌ ಕೊಡಬಲ್ಲ ವ್ಯಕ್ತಿ ನಾನೇ ಆಗಿದ್ದು, ಕನಕಪುರ ಪಾರು ಮಾಡುವೆ: ಸಚಿವ ಅಶೋಕ್‌

ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಮತ್ತು ಕಾಂಗ್ರೆಸ್‌ ಹುರಿ​ಯಾಳು ಇಕ್ಬಾಲ್‌ ಹುಸೇನ್‌ ನಡುವೆ ನೇರ ಹಣಾ​ಹಣಿ ಏರ್ಪ​ಟ್ಟಿದ್ದು, ಇವ​ರಿ​ಬ್ಬರ ಸೋಲು, ಗೆಲು​ವಿ​ನಲ್ಲಿ ಬಿಜೆಪಿಯ ಗೌತಮ್‌ ಗೌಡ ಅವರು ನಿರ್ಣಾ​ಯಕ ಪಾತ್ರ ವಹಿ​ಸು​ವು​ದ​ರಲ್ಲಿ ಅನು​ಮಾನವಿಲ್ಲ.

ಕ್ಷೇತ್ರ ನಿರೀಕ್ಷಿತ ಅಭಿ​ವೃದ್ಧಿ ಹೊಂದದ ಕಾರಣ ಕುಮಾ​ರ​ಸ್ವಾಮಿ ಬಗ್ಗೆ ಜನ​ರಲ್ಲಿ ಸ್ವಲ್ಪ ಮಟ್ಟಿನ ಬೇಸ​ರವಿದೆ. ಕಳೆದ ಚುನಾ​ವ​ಣೆ​ಯ​ಲ್ಲಿನ ಸೋಲು, ಕೋವಿಡ್‌ ಸಂಕ​ಷ್ಟ​ದಲ್ಲಿ ಜನ​ರಿಗೆ ಸ್ಪಂದಿ​ಸಿ​ದಕ್ಕೆ ಇಕ್ಬಾಲ್‌ ಪರ ಅನು​ಕಂಪವಿದೆ. ಬಿಜೆಪಿ ಅಭಿ​ವೃದ್ಧಿ ಹೆಸ​ರಿ​ನಲ್ಲಿ ಮತ​ದಾ​ರ​ರನ್ನು ​ತ​ನ್ನತ್ತ ಸೆಳೆ​ಯು​ವ ಯತ್ನ ಮಾಡು​ತ್ತಿ​ದೆ. ಇಕ್ಬಾಲ್‌ ಹುಸೇನ್‌ಗೆ ಮುಸ್ಲಿಂ ಸಮು​ದಾ​ಯದ ಮತ​ಗಳು ಬೆನ್ನಿ​ಗಿವೆ. ನಿಖಿಲ್‌ ಮತ್ತು ಗೌತಮ್‌ ಗೌಡ ನಡುವೆ ಒಕ್ಕ​ಲಿಗ ಮತ​ಗಳು ಇಬ್ಭಾಗ​ವಾ​ಗುವ ಸಾಧ್ಯ​ತೆ​ಗ​ಳಿವೆ.

ಚನ್ನಪಟ್ಟಣ:
ಎಚ್‌ಡಿಕೆ-ಸಿಪಿವೈ ನಡುವೆ ಬಿಗ್‌ ಫೈಟ್‌:

ಬೊಂಬೆ​ನ​ಗರಿ ಚನ್ನ​ಪ​ಟ್ಟಣದಲ್ಲಿ ಜೆಡಿ​ಎಸ್‌ ಅಭ್ಯರ್ಥಿ ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಪಿ.​ಯೋ​ಗೇ​ಶ್ವರ್‌ ನಡುವೆ ತೀವ್ರ ಪೈಪೋಟಿಯಿದೆ. ಇಲ್ಲಿ ಕಾಂಗ್ರೆಸ್‌ನ ಗಂಗಾ​ಧರ್‌ ಸ್ಪರ್ಧೆ ಆಟ​ಕ್ಕುಂಟು ಲೆಕ್ಕಕ್ಕಿಲ್ಲ​ ಎನ್ನುವಂತಾಗಿದೆ.

ಕಳೆದ ಬಾರಿ ಚನ್ನ​ಪ​ಟ್ಟಣದಿಂದ ಗೆದ್ದಿದ್ದ ಕುಮಾ​ರ​ಸ್ವಾಮಿ, ಜೆಡಿ​ಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾ​ರ​ದಲ್ಲಿ ಮುಖ್ಯ​ಮಂತ್ರಿಯಾಗಿದ್ದರು. ಸೋಲಿ​ನಿಂದ ಹತಾ​ಶೆ​ಗೊಂಡಿದ್ದ ಯೋಗೇ​ಶ್ವರ್‌, ದೋಸ್ತಿ ಸರ್ಕಾ​ರ​ವನ್ನು ಉರು​ಳಿಸಿ ಸೇಡು ತೀರಿ​ಸಿ​ಕೊಂಡಿ​ದ್ದರು. ಇದೀಗ ಉಭಯ ನಾಯ​ಕರು ಒಬ್ಬ​ರ​ನ್ನೊ​ಬ್ಬರನ್ನು ಹಣಿ​ಯುವ ತವ​ಕ​ದ​ಲ್ಲಿ​ದ್ದಾರೆ. ಇಲ್ಲಿನ ಮತದಾರರು ಪಕ್ಷ​ಕ್ಕಿಂತ ವ್ಯಕ್ತಿಗೆ ಹೆಚ್ಚಿನ ಪ್ರಾಮು​ಖ್ಯತೆ ನೀಡು​ತ್ತಾರೆ. ಹೀಗಾ​ಗಿಯೇ ಯೋಗೇ​ಶ್ವರ್‌ ಅವರು 1999ರಲ್ಲಿ ಪಕ್ಷೇ​ತ​ರ​ರಾಗಿ, 2004, 2008ರಲ್ಲಿ ಕಾಂಗ್ರೆಸ್‌, 2011ರಲ್ಲಿ ಬಿಜೆಪಿ, 2013ರಲ್ಲಿ ಸಮಾಜವಾದಿ ಪಕ್ಷದ ಅಭ್ಯ​ರ್ಥಿ​ಯಾಗಿ ಗೆಲುವು ಸಾಧಿ​ಸಿದರು. ಈಗ 8ನೇ ಬಾರಿಗೆ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ.

ಈ ಮಧ್ಯೆ, ಕ್ಷೇತ್ರ​ದಲ್ಲಿ ಜೆಡಿ​ಎಸ್‌-ಕಾಂಗ್ರೆಸ್‌ ನಡುವೆ ಒಳ​ ಒ​ಪ್ಪಂದವಾಗಿರುವ ವದಂತಿಯಿದೆ. ಒಕ್ಕ​ಲಿಗ ಮತ​ದಾ​ರರ ಪ್ರಾಬಲ್ಯದ ಈ ಕ್ಷೇತ್ರ​ದಲ್ಲಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತ​ಗಳು ನಿರ್ಣಾ​ಯ​ಕ​.

ಮಾಗಡಿ:

ಮೂರನೇ ಬಾರಿಗೆ ಮಂಜುನಾಥ-ಬಾಲ​ಕೃಷ್ಣ ಮುಖಾಮುಖಿ:

ನಾಡ​ಪ್ರಭು ಕೆಂಪೇ​ಗೌ​ಡರ ನೆಲವಾದ ಮಾಗ​ಡಿಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಾಂಪ್ರ​ದಾ​ಯಿಕ ಎದು​ರಾ​ಳಿಗಳು. ಆದರೆ, ಈ ಬಾರಿ ಬಿಜೆಪಿ, ಎರಡೂ ಪಕ್ಷ​ಗಳ ನಿದ್ದೆ​ಗೆ​ಡಿ​ಸಿ​ದೆ. ಜೆಡಿ​ಎಸ್‌ನ ಹಾಲಿ ಶಾಸಕ ಎ.ಮಂಜು​ನಾಥ್‌ ಮರುಆಯ್ಕೆ ಬಯ​ಸಿ​ದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಸಾದ್‌ ಗೌಡ ಅವರು ಯಾರ ಮತಬ್ಯಾಂಕಿಗೆ ಕೈ ಹಾಕು​ತ್ತಾರೊ ಎಂಬ ಆತಂಕ ಕಾಂಗ್ರೆಸ್‌-ಜೆಡಿಎಸ್‌ನ್ನು ಕಾಡು​ತ್ತಿದೆ.
1994ರಲ್ಲಿ ಬಿಜೆಪಿಯಿಂದ ಗೆದ್ದು ರಾಜಕೀಯ ಜೀವನದ ಇನ್ನಿಂಗ್‌್ಸ ಆರಂಭಿಸಿದ ಬಾಲಕೃಷ್ಣ, ನಂತರದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದವರು. ಕಳೆದ ಬಾರಿ ಕಾಂಗ್ರೆಸ್‌ ಸೇರಿ, ಆಡಳಿತ ವಿರೋ​ಧಿ ಅಲೆ​ಯಲ್ಲಿ ಪರಾಭವಗೊಂಡರು. ಈ ಬಾರಿ ಮತದಾರರು ಕೈ ಹಿಡಿಯುವ ವಿಶ್ವಾಸ ಹೊಂದಿ​ದ್ದಾರೆ. ಎ.ಮಂಜುನಾಥ್‌ ಅವರು, 2018ರಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ವಲಸೆ ಬಂದು ಜಯಶಾಲಿಯಾದರು. ಈಗ ಮೂರನೇ ಬಾರಿ ಬಾಲ​ಕೃಷ್ಣ ಅವ​ರಿಗೆ ಮುಖಾಮುಖಿಯಾಗಿದ್ದಾರೆ.

ಕಳೆದ ಮೂರುವರೆ ವರ್ಷ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದಿರುವ ಸಚಿವ ಸಿ.ಎನ್‌.ಅಶ್ವತ್ಥನಾರಾಯಣ, ಮೂಲತ: ಮಾಗಡಿಯವರು. ಹೀಗಾಗಿ ಅವ​ರಿಗೂ ಇದು ಪ್ರತಿ​ಷ್ಠೆಯ ಕಣ. ತವರಿನಲ್ಲಿ ಪ್ರಸಾದ್‌ ಗೌಡಗೆ ಟಿಕೆಟ್‌ ಕೊಡಿ​ಸಿದ್ದು, ಅವರನ್ನು ಗೆಲ್ಲಿಸುವ ಅನಿವಾರ್ಯತೆಯಲ್ಲಿದ್ದಾರೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ದಲಿತರು, ಮುಸ್ಲಿಮರು, ಲಿಂಗಾ​ಯತರು, ಕುರುಬರು ನಿರ್ಣಾ​ಯಕರು.

ಕನ​ಕ​ಪುರ:
ಸಾಮ್ರಾ​ಟ​ನಿಗೆ ಚಕ್ರಾ​ಧಿ​ಪ​ತಿ​ಯನ್ನು ಮಣಿ​ಸುವ ಟಾಸ್ಕ್‌

8ನೇ ಬಾರಿ ವಿಧಾ​ನ​ಸಭೆ ಪ್ರವೇ​ಶಿಸಿ ಮುಖ್ಯ​ಮಂತ್ರಿ ಹುದ್ದೆ ಅಲಂಕ​ರಿ​ಸುವ ಉಮೇ​ದಿ​ನ​ಲ್ಲಿ​ರುವ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಸ್ವ ಕ್ಷೇತ್ರ​ದ​ಲ್ಲಿಯೇ ಕಟ್ಟಿಹಾಕಲು ಬಿಜೆಪಿ, ಕಂದಾಯ ಸಚಿವ ಆರ್‌.ಅ​ಶೋಕ್‌ ಅವ​ರನ್ನು ಕಣ​ಕ್ಕಿ​ಳಿಸಿ ಪ್ರಬಲ ಪೈಪೋಟಿಯೊಡ್ಡುತ್ತಿದೆ. ಸಾಂಪ್ರ​ದಾ​ಯಿಕ ಮತ​ಗ​ಳನ್ನು ಉಳಿ​ಸಿ​ಕೊ​ಳ್ಳಲು ಜೆಡಿ​ಎಸ್‌, ನಾಗ​ರಾಜುಗೆ ಟಿಕೆಟ್‌ ನೀಡಿ​ದೆ.

Karnataka election:ಬೆಳಗಾವಿಯಲ್ಲಿ ಹಾಲಿ, ಮಾಜಿ ಸಿಎಂ ಮುಖಾಮುಖಿ

ಪದ್ಮ​ನಾ​ಭ​ನ​ಗರದಲ್ಲಿ ಅಶೋಕ್‌ ಅವ​ರಂತೆಯೇ ಕನ​ಕ​ಪು​ರ​ದ ಮೇಲೆ ಡಿ.ಕೆ.​ಶಿ​ವ​ಕು​ಮಾರ್‌ ಹಿಡಿತ ಹೊಂದಿ​ದ್ದಾರೆ. ಇವ​ರಿ​ಬ್ಬರೂ ಒಕ್ಕ​ಲಿಗ ಸಮು​ದಾ​ಯದ ಪ್ರಬಲ ನಾಯ​ಕರು. ಇದನ್ನು ಅರಿ​ತಿರುವ ಬಿಜೆಪಿ ವರಿ​ಷ್ಠರು, ಅಶೋಕ್‌ಗೆ ಒಕ್ಕ​ಲಿ​ಗರ ಬಾಹು​ಳ್ಯ​ವುಳ್ಳ ಕ್ಷೇತ್ರ​ದಲ್ಲಿ ತಮ್ಮ ನಾಯ​ಕತ್ವ ನಿರೂ​ಪಿ​ಸುವ ಟಾಸ್‌್ಕ ನೀಡಿ​ದಂತಿ​ದೆ.

ಕನಕಪುರ ನಗರಸಭೆಯಲ್ಲಿ ಒಂದು ಸ್ಥಾನ ಗೆದ್ದಿರುವುದನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಕೇವಲ 6,273 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಕ್ಷೇತ್ರ​ದಲ್ಲಿ ಹಣ-ಜಾತಿ ಬಲ ಮೀರಿ ಮರಾಠ ಸಮು​ದಾ​ಯದ ಪಿಜಿ​ಆರ್‌ ಸಿಂಧ್ಯಾ, ಸತ​ತ​ವಾಗಿ 6 ಬಾರಿ ಗೆಲುವು ಸಾಧಿ​ಸಿ​ದ್ದರು. ಬಳಿಕ, ಸಾತ​ನೂ​ರು ಕ್ಷೇತ್ರ​ದಿಂದ ಕನ​ಪು​ರಕ್ಕೆ ವಲಸೆ ಬಂದ ಡಿಕೆಶಿ, ಏಕಚಕ್ರಾ​ಧಿಪತಿಯಂತೆ ಮೆರೆ​ಯು​ತ್ತಿ​ದ್ದಾರೆ. ಒಕ್ಕಲಿಗರೇ ಕ್ಷೇತ್ರದ ನಿರ್ಣಾಯಕ ಮತದಾರರು. ಪರಿಶಿಷ್ಟಜಾತಿ/ಪಂಗಡದ ಜನಸಂಖ್ಯೆ ನಂತರದ ಸ್ಥಾನದಲ್ಲಿದೆ. ಲಿಂಗಾಯತರು, ಮುಸ್ಲಿಮರು, ಇತರ ಹಿಂದುಳಿದ ಸಮುದಾಯದ ಮತ​ಗಳು ಸಣ್ಣ ಪ್ರಮಾ​ಣ​ದ​ಲ್ಲಿವೆ.

Follow Us:
Download App:
  • android
  • ios