Asianet Suvarna News Asianet Suvarna News

ಸರ್ಕಾರ ಬಂದು 3 ತಿಂಗಳಾದರೂ ನೀರಾವರಿ ಸಲಹಾ ಸಮಿತಿಯ ಸಭೆ ಕರೆದಿಲ್ಲ: ಎಚ್.ಡಿ.ರೇವಣ್ಣ

ನಾಲೆ ವ್ಯಾಪ್ತಿಗಳಲ್ಲಿ ಗದ್ದೆ ನಾಟಿ ಮಾಡಿದ್ದಾರೆ, ಇನ್ನು ನಾಲ್ಕೈದು ದಿನದಲ್ಲಿ ನಾಲೆಗಳಲ್ಲಿ ನೀರು ನಿಲ್ಲಿಸುತ್ತಾರಂತೆ. ಮಳೆ ಹಾಗೂ ನೀರಿಲ್ಲದೇ ಬೆಳೆಗಳು ಒಣಗುತ್ತಿದೆ. ಆದರೆ ಒಟ್ಟು 18 ಟಿಎಂಸಿ ನೀರನ್ನು ಹೇಮಾವತಿ ನದಿಯಿಂದ ಹರಿಯ ಬಿಟ್ಟಿದ್ದಾರೆ.

MLA HD Revanna Slams On Congress Govt At Hassan gvd
Author
First Published Sep 8, 2023, 2:34 PM IST

ಹೊಳೆನರಸೀಪುರ (ಸೆ.08): ನಾಲೆ ವ್ಯಾಪ್ತಿಗಳಲ್ಲಿ ಗದ್ದೆ ನಾಟಿ ಮಾಡಿದ್ದಾರೆ, ಇನ್ನು ನಾಲ್ಕೈದು ದಿನದಲ್ಲಿ ನಾಲೆಗಳಲ್ಲಿ ನೀರು ನಿಲ್ಲಿಸುತ್ತಾರಂತೆ. ಮಳೆ ಹಾಗೂ ನೀರಿಲ್ಲದೇ ಬೆಳೆಗಳು ಒಣಗುತ್ತಿದೆ. ಆದರೆ ಒಟ್ಟು 18 ಟಿಎಂಸಿ ನೀರನ್ನು ಹೇಮಾವತಿ ನದಿಯಿಂದ ಹರಿಯ ಬಿಟ್ಟಿದ್ದಾರೆ. ಜತೆಗೆ ಈ ಸರ್ಕಾರ ಬಂದು 3 ತಿಂಗಳಾದರೂ ನೀರಾವರಿ ಸಲಹಾ ಸಮಿತಿಯ ಸಭೆ ಕರೆದಿಲ್ಲ, ಇವರಿಗೆ ಸಭೆ ಕರೆಯಲು ಕಾಲವಾಕಾಶವಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಟೀಕಿಸಿದರು.

ತಾಲೂಕು ಕಚೇರಿಯಲ್ಲಿ ಇ-ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಈಗಾಗಲೇ ರೈತರ ಗದ್ದೆಗಳಲ್ಲಿ ಪದ್ಧತಿಯಂತೆ ಗೊಬ್ಬರ ಎಲ್ಲಾ ಒದಗಿಸಿ, ನಾಟಿ ಮಾಡಿದ್ದಾರೆ ಮತ್ತು ನೀರಾವರಿ ಇಲಾಖೆಯವರು ನಾಲೆಗಳಲ್ಲಿ ನೀರು ಬಿಡುತ್ತೇವೆ ಅಥವಾ ನಿಲ್ಲಿಸುತ್ತೇವೆ ಎಂದು ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ರೈತರು ನಾಟಿ ಮಾಡಿ ನಷ್ಟ ಅನುಭವಿಸಿದ್ದಾರೆ. ಅವರಿಗೆ ಪ್ರತಿ ಎಕರೆ ಭೂಮಿಗೆ 10 ಸಾವಿರ ರು. ಪರಿಹಾರ ಕೊಡಿ ಎಂದು ಸಲಹೆ ನೀಡಿ, ಜೋಳ, ಭತ್ತ, ರಾಗಿ, ಯಾವುದೇ ಬೆಳೆ ನಾಶವಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ 10 ರಿಂದ 15 ಸಾವಿರ ರು. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಕೃಷಿ ಇಲಾಖೆ ವತಿಯಿಂದ ರೈತರಿಗೆ ಪೈಪ್ ಒಗದಿಸಲು ಹಣ ಪಡೆದಿದ್ದರು, ಆದರೆ ಅವರಿಗೆ ಪೈಪ್ ನೀಡಿಲ್ಲ, ಮೊದಲು ಅವರಿಗೆ ಪೈಪ್ ಒದಗಿಸಬೇಕು ಎಂದರು.

ಬಿಜೆಪಿಯವರು ನಾಥೂರಾಮ್ ಗೋಡ್ಸೆ ವಂಶಸ್ಥರು: ಸಿಎಂ ಸಿದ್ದರಾಮಯ್ಯ

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳನ್ನು ಬರಗಾಲ ಪೀಡಿದ ಕ್ಷೇತ್ರವೆಂದು ಷೋಷಿಸಬೇಕು ಮತ್ತು ಮಳೆ ಅಭಾವದಿಂದ ತೀವ್ರ ಬರಗಾಲ ತಲೆದೋರಿದ್ದು, ಪ್ರತಿ ಕ್ಷೇತ್ರಕ್ಕೆ 10 ಕೋಟಿ ರು. ಹಣ ನೀಡಬೇಕು. ಇದರಿಂದ ಕುಡಿಯುವ ನೀರು, ಬರಗಾಲದ ಕಾಮಗಾರಿ ಹಾಗೂ ಕೂಲಿ ನೀಡುವ ಜತೆಗೆ ರೈತರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಬಹುದು ಎಂದರು. ಜಿಲ್ಲೆಯಲ್ಲಿ ಕೆರೆಗಳ ತೂಬುಗಳು ಹೊಡೆದಿದೆ. ಶಾಲೆಗಳ ದುರಸ್ತಿಗಾಗಿ ಹಣವಿಲ್ಲ, ಯಾವ ಗಳಿಗೆಯಲ್ಲಿ ಶಾಲಾ ಕಟ್ಟಡಗಳು ಶಿಕ್ಷಕರು ಮತ್ತು ಮಕ್ಕಳ ಮೇಲೆ ಬೀಳುತ್ತೊ ಎಂಬುದು ಗೊತ್ತಿಲ್ಲ, ಶಾಲಾ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲ ಅದ್ದರಿಂದ ಮಕ್ಕಳ ಜತೆ ಚೆಲ್ಲಾಟವಾಡದೇ ಕಂದಾಯ, ಕೃಷಿ ಹಾಗೂ ಶಿಕ್ಷಣ ಸಚಿವರು ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಕಂದಾಯ ಇಲಾಖೆಯಲ್ಲಿ ಭೂಮಿ, ಸಕಾಲ, ಜನನ ಮರಣ, ಜಾತಿ ಹಾಗೂ ಆದಾಯ, ರೈತರ ಹಕ್ಕು ಬದಲಾವಣೆ ಹಾಗೂ ಇತರೆ ವಿಭಾಗಗಳಲ್ಲಿ ಉತ್ತಮ ಸೇವೆ ನೀಡುತ್ತಾ, ಮೊದಲ ಸ್ಥಾನ ಪಡೆದಿದ್ದು, ಈ ಸಾಧನೆಗೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಕಾರ್ಯವನ್ನು ಶ್ಲಾಘಿಸಿದರು. ತಾಲೂಕಿನ ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಹಾಗೂ ಇತರೆ ಇಲಾಖೆಗಳಲ್ಲಿ ಶೇ.60 ರಷ್ಟು ಅಧಿಕಾರಿಗಳು ಮತ್ತು ನೌಕರರು ಇಲ್ಲದೇ ಸಾಮಾನ್ಯ ಜನರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಈ ಸ್ಥಾನಗಳ ಭರ್ತಿಗೆ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಟ ಗಣೇಶ್‌ ಜಮೀನಿಗೆ ತೆರಳಲು ರೈತರಿಂದ ಅಡ್ಡಿ: ಮಾತಿನ ಚಕಮಕಿ

ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರು ಇ-ಕಚೇರಿ ಸಂಬಂಧಿಸಿದಂತೆ ಮಾಹಿತಿ ನೀಡಿ, ಸಾರ್ವಜನಿಕರು ತಮ್ಮಗಳ ಅರ್ಜಿ ಕುರಿತಂತೆ ತಮ್ಮ ಬೆರಳ ತುದಿಯಲ್ಲೇ ಮಾಹಿತಿಯನ್ನು ಪಡೆಯಬಹುದಾಗಿದೆ. ಆದರೆ ಕಂದಾಯ ಇಲಾಖೆಯ 32 ವೃತ್ತಗಳಿಗೆ 32 ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಭೂಮಿ ಯೋಜನೆಗೆ 5 ಗ್ರಾಮ ಲೆಕ್ಕಾಧಿಕಾರಿಗಳು ಅಗತ್ಯವಿದ್ದು, ಪ್ರಸ್ತುತ 22 ಗ್ರಾಮ ಲೆಕ್ಕಾಧಿಕಾರಿಗಳು ಇದ್ದಾರೆ. ಜತೆಗೆ ಕೃಷಿ, ತೋಟಗಾರಿಕೆ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಮತ್ತು ಚುನಾವಣೆ ಕೆಲಸ ಕಾರ್ಯಗಳಿಗೂ ಗ್ರಾಮ ಲೆಕ್ಕಾಧಿಕಾರಿಗಳ ಸೇವೆ ಅಗತ್ಯವಾಗಿದೆ. ಇಂತಹ ಸನ್ನಿವೇಶದಲೂ ಕಂದಾಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ, ಆದರೆ ಕೆಲವೊಮ್ಮೆ ಕೆಲಸ ಕಾರ್ಯಗಳಲ್ಲಿ ವಿಳಂಬವಾದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.

Follow Us:
Download App:
  • android
  • ios