'ಪೊಲೀಸ್ರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು, ಬಿಜೆಪಿ ಕಾರ್ಯಕರ್ತರಂತೆ ಅಲ್ಲ'
ಮಧ್ಯ ಪ್ರದೇಶ ಸರ್ಕಾರದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ರಮಡ ರೆಸಾರ್ಟ್ನಲ್ಲಿ ತಂಗಿರುವ ಶಾಸಕರ ಮನವೊಲಿಸಿ ಕರೆದುಕೊಂಡು ಹೋಗಲು ದಿಗ್ವಿಜಯ್ ಸಿಂಗ್ ಬಂದಿದ್ದರು. ದಿಗ್ವಿಜಯ್ ಸಿಂಗ್ ಜೊತೆಗೆ ಡಿಕೆ ಶಿವಕುಮಾರ್ ಕೂಡ ಹೋಟೆಲ್ ಪ್ರವೇಶಕ್ಕೆ ತೆರಳಿದ್ದು, ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು, [ಮಾ.18]: ಮಧ್ಯ ಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರೂ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಯಿತು.
ಮಧ್ಯಪ್ರದೇಶ, ಕಮಲ್ ನಾಥ್ ಸರ್ಕಾರ ಉಳಿಸಲು ಮುಂದಾದ ಈ 13ರ ಪೋರ ಯಾರು?
'ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ರಾಜ್ಯಸಭಾ ಚುನಾವಣೆ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಆ ರಾಜ್ಯದ ಶಾಸಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಶಾಸಕರ ಬಳಿ ಮತ ಕೇಳಲು ಅವರಿಗೆ ಅಧಿಕಾರವಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಆದರೆ ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ತಡೆದು ಅವರ ಹಕ್ಕನ್ನು ಕಸಿದುಕೊಂಡಿದ್ದಾರೆ ಕಿಡಿಕಾರಿದರು.
ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಪೊಲೀಸ್ ಆಯುಕ್ತ, ಡಿಜಿಯನ್ನೂ ಕೇಳಿದ್ದೇವೆ. ಭೇಟಿ ಮಾಡಲು ಅವಕಾಶ ನೀಡದಿರಲು ಏನಾದರೂ ಕಾನೂನು ಇದೆಯೇ? ಮಧ್ಯ ಪ್ರದೇಶ ಶಾಸಕರು ತಮಗೆ ರಕ್ಷಣೆ ಬೇಕು ಎಂದು ಕೇಳಿದ್ದಾರೆ ಹೊರತು, ತಾವು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿಲ್ಲ. ಬರಿ ಬಿಜೆಪಿಯವರು ರೆಸಾರ್ಟ್ ನಲ್ಲಿ ಇರಬಹುದೇ ಎಂದು ಪೊಲೀಸರಲ್ಲಿ ಕೇಳಿದ್ದೇವೆ ಎಂದರು.
ಮಧ್ಯಪ್ರದೇಶದಲ್ಲಿ ಸ್ಪೀಕರ್ ರಾಜ್ಯಪಾಲ ಹೈಡ್ರಾಮಾ!
ಮೊದಲು ಅಲ್ಲಿರುವ ಶಾಸಕರನ್ನು ಖಾಲಿ ಮಾಡಿಸಿ ಎಂದು ನಾವು ಒತ್ತಾಯಿಸಿದ್ದೇವೆ. ಆದರೆ ಈಗ ಒಂದೊಂದೇ ವಿಡಿಯೋ ಬಿಡಲು ಶುರು ಮಾಡಿದ್ದಾರೆ. ರೆಸಾರ್ಟ್ ನಲ್ಲಿರುವ ಶಾಸಕರು ತಮಗೆ ಎಸ್ಕಾರ್ಟ್ ನೀಡುವಂತೆ, ಭದ್ರತೆ ನೀಡುವಂತೆ ಕರ್ನಾಟಕ ಪೊಲೀಸರಿಗೆ ಪತ್ರ ಕೊಟ್ಟಿದ್ದಾರೆ. ಆದರೆ, ನಮಗೆ ರೆಸಾರ್ಟ್ ಒಳಗೆ ಬಿಡುತ್ತಿಲ್ಲ. ಅವರನ್ನು ಅಲ್ಲಿಂದ ವೆಕೇಟ್ ಮಾಡದಿದ್ದರೆ ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಹೇಳಿ ಬಂದಿದ್ದೇವೆ ಎಂದು ಹೇಳಿದರು.
ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬೇಡಿ, ಸಂವಿಧಾನದಲ್ಲಿ ನಿಮಗೆ ಯಾವ ರೀತಿ ನಡೆದುಕೊಳ್ಳಬೇಕೆಂಬುದಿದೆ. ನಾವು ರೆಸಾರ್ಟ್ ಗೆ ಹೋಗಬೇಡಿ ಅನ್ನಲು ಪೊಲೀಸರಿಗೆ ಹಕ್ಕಿಲ್ಲ. ದಿಗ್ವಿಜಯ್ ಸಿಂಗ್ ಅವರನ್ನು ರೆಸಾರ್ಟ್ ಪ್ರವೇಶ ತಡೆಯಲು ಕಾರಣವೇನು? ಅವರೇನು ಶಸ್ತ್ರಾಸ್ತ್ರಗಳೊಂದಿಗೆ ರೆಸಾರ್ಟ್ ಪ್ರವೇಶ ಮಾಡುತ್ತಿದ್ದರೆ? ಎಂದು ಪ್ರಶ್ನಿಸಿದರು.