ಪಕ್ಷದಲ್ಲಿ ಅಧ್ಯಕ್ಷನೇ ಸುಪ್ರೀಂ, ಜನಪ್ರತಿನಿಧಿಯಲ್ಲ: ಕಟೀಲ್
ಪಕ್ಷದಲ್ಲಿ ಅಧ್ಯಕ್ಷನನ ಸುಪ್ರೀಂ, ಜನಪ್ರತಿನಿಧಿಯಲ್ಲ: ಕಟೀಲ್| ಪ್ರತಿಯೊಬ್ಬರೂ ಅಧ್ಯಕ್ಷರಿಗೆ ಸಹಕಾರ ನೀಡಬೇಕು
ಬೀದರ್[ಫೆ.20]: ಪಕ್ಷದೊಳಗೇನಿದ್ದರೂ ಅಧ್ಯಕ್ಷನೇ ಸುಪ್ರೀಂ ಹೊರತು ಜನಪ್ರತಿನಿಧಿಯಲ್ಲ. ಅಧ್ಯಕ್ಷ ಹೇಳಿದ್ದನ್ನು ಜನಪ್ರತಿನಿಧಿ ಕೇಳಲೇಬೇಕು. ಪ್ರತಿಯೊಬ್ಬರೂ ಅಧ್ಯಕ್ಷರಿಗೆ ಸಹಕಾರ ನೀಡಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಜನಪ್ರತಿನಿಧಿಯ ಗೌರವ ಉಳಿಸುವ ಕಾರ್ಯವನ್ನು ಪಕ್ಷ ಮಾಡಬೇಕು. ಅದೇ ರೀತಿ ಜನಪ್ರತಿನಿಧಿ ಮತ್ತು ಅಧ್ಯಕ್ಷ ಪರಸ್ಪರ ಜವಾಬ್ದಾರಿಯಿಂದ ಮುನ್ನಡೆಯಬೇಕು ಎಂದು ಹೇಳಿದರು.
ಒಬ್ಬ ಅಧ್ಯಕ್ಷನ ಆಯ್ಕೆ ಮಾಡುವಾಗ ಹತ್ತಾರು ಅಭಿಪ್ರಾಯಗಳನ್ನು ಕೇಳುತ್ತೇವೆ. ಹತ್ತಾರು ಜನ ಅಧ್ಯಕ್ಷ ಆಕಾಂಕ್ಷಿಗಳಿದ್ದರೆ ತಪ್ಪಲ್ಲ. ಆಕಾಂಕ್ಷಿಗಳು ಇರಲೇಬೇಕು. ಎಲ್ಲರೂ ಸೇರಿ ಒಬ್ಬನನ್ನು ಆಯ್ಕೆ ಮಾಡಿದ ಮೇಲೆ ಎಲ್ಲರೂ ಅವರಿಗೆ ಸಹಕಾರ ಕೊಡಬೇಕು ಎಂದರು.
ಜಿಲ್ಲೆಯ ಅಧ್ಯಕ್ಷ ಹೇಳಿದರೆ ಪ್ರಧಾನ ಕಾರ್ಯದರ್ಶಿ ಅಷ್ಟೇ ಅಲ್ಲ ಪ್ರತಿಯೊಬ್ಬ ಕಾರ್ಯಕರ್ತನೂ ಕೇಳಬೇಕು. ಹೆಗಲಿಗೆ ಹೆಗಲು ಕೊಟ್ಟು ಪಕ್ಷವನ್ನು ಮುನ್ನಡೆಸಬೇಕು. ಮೂರು ವರ್ಷಗಳ ಅವಧಿಯಲ್ಲಿ ಪಂಚಾಯತ್ಗಳಲ್ಲೂ ಬಿಜೆಪಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಬೇಕು ಎಂದರು.
ಪಂಚಾಯತ್ಗಳ ಮನೆ ಮನೆಗಳಿಗೆ ಹೋಗಿ ಪಕ್ಷದ ಬಗ್ಗೆ ಹೇಳಿ. ಮುಂದಿನ ದಿನಗಳಲ್ಲಿ ಮತಗಟ್ಟೆಗಳಲ್ಲಿ ಪೇಜ್ ಪ್ರಮುಖರನ್ನು ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ಇಂದಿನಿಂದಲೇ ಮುಂದಾಗಿ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ. ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.