ಉ.ಪ್ರ. ಮಾದರಿ ಅಲ್ಲ, ಹಂತಕರ ಎನ್ಕೌಂಟರ್ಗೂ ರೆಡಿ: ಸಚಿವ ಅಶ್ವತ್ಥ್
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಕೋರರಿಗೆ ಹಾಗೂ ಮುಂದೆ ಹತ್ಯೆ ಮಾಡಲು ಯೋಚನೆ ಮಾಡುವವರಿಗೆ ನಡುಕ ಹುಟ್ಟಿಸುವಂತಹ ಕ್ರಮ ಕೈಗೊಳ್ಳುತ್ತೇವೆ. ಎನ್ಕೌಂಟರ್ ಮಾಡುವುದಕ್ಕೂ ತಯಾರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ರಾಮನಗರ (ಜು.30): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಕೋರರಿಗೆ ಹಾಗೂ ಮುಂದೆ ಹತ್ಯೆ ಮಾಡಲು ಯೋಚನೆ ಮಾಡುವವರಿಗೆ ನಡುಕ ಹುಟ್ಟಿಸುವಂತಹ ಕ್ರಮ ಕೈಗೊಳ್ಳುತ್ತೇವೆ. ಎನ್ಕೌಂಟರ್ ಮಾಡುವುದಕ್ಕೂ ತಯಾರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹತ್ಯೆಗಳನ್ನು ನಡೆಸಿ ಸರ್ಕಾರದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಸಾಕಷ್ಟುತಾಳ್ಮೆಯನ್ನು ಕಾಯ್ದುಕೊಂಡಿದ್ದಾಗಿದೆ. ಕೊಲೆಗಡುಕರು ಇನ್ನು ಮುಂದೆ ಕನಸು, ಮನ್ಸಸಿನಲ್ಲೂ ಹತ್ಯೆ ಮಾಡಲು ಯೋಚನೆ ಮಾಡಲಾಗದಂತಹ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳು ಎನ್ಕೌಂಟರ್ ಮಾಡುವುದಕ್ಕೂ ತಯಾರಿರುವುದನ್ನು ಹೇಳಿದ್ದಾರೆ ಎಂದರು.
ಉತ್ತರ ಪ್ರದೇಶದ ಮಾದರಿಯನ್ನು ಜಾರಿಗೆ ತರುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅಲ್ಲಿನ ಸರ್ಕಾರಕ್ಕಿಂತ ಇನ್ನು ಐದು ಹೆಜ್ಜೆ ಮುಂದೆ ಹೋಗಿ ಕಠಿಣ ಕ್ರಮ ಜಾರಿಗೆ ತರಲಾಗುವುದು. ಅ್ಯಂಟಿ ಟೆರೆರಿಸ್ವ್ ಸ್ಕ್ವಾಡ್ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಅಮಾಯಕರ ಹತ್ಯೆಗಳು ಮನಸ್ಸಿಗೆ ನೋವು ತರುತ್ತಿವೆ. ಕರ್ನಾಟಕ ಪ್ರಗತಿಪರ ರಾಜ್ಯ, ಉಳಿದ ರಾಜ್ಯಗಳಿಗೆ ಮಾದರಿಯಾದ ರಾಜ್ಯ, ಅಮಾಯಕರ ಜೀವ ರಕ್ಷಣೆ ವಿಚಾರದಲ್ಲಿ ಉತ್ತರ ಪ್ರದೇಶಕ್ಕಿಂತ ಒಳ್ಳೆಯ ಮಾದರಿ ರಾಜ್ಯವಾಗಲಿದೆ ಎಂದು ತಿಳಿಸಿದರು. ಕಾರ್ಯಕರ್ತನ ಸಾವಿನಿಂದ ಎಲ್ಲರಲ್ಲೂ ನೋವಿದೆ. ಆಕ್ರೋಶಕ್ಕೆ ಒಳಗಾಗಿ ಕಾರ್ಯಕರ್ತರು ರಾಜೀನಾಮೆ ನೀಡಿ ಪ್ರತಿಕ್ರಿಯೆ ತೋರುತ್ತಿದ್ದಾರೆ.
ಹತ್ಯೆಯಾದ ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕ 10 ಲಕ್ಷ ರೂ. ನೆರವು ಘೋಷಿಸಿದ ಅಶ್ವತ್ಥ ನಾರಾಯಣ
ಹತ್ಯೆಗಳಾದ ಸಂದರ್ಭಗಳಲ್ಲಿ ತಕ್ಷಣದಲ್ಲೇ ಆರೋಪಿಗಳನ್ನು ಬಂಧಿಸುವ ಕೆಲಸಗಳಾಗಿವೆ. ಪ್ರವೀಣ್ ಸಾವಿನ ಬೆನ್ನಲ್ಲೆ ಕೆಲವರನ್ನು ಬಂಧಿಸಲಾಗಿದೆ. ನಮ್ಮ ಗೃಹ ಇಲಾಖೆ ಉತ್ತಮವಾಗಿ, ಪರಿಣಾಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ ಇನ್ನು ಜನರಲ್ಲಿ ಆಕ್ರೋಶವಿದೆ. ಸರ್ಕಾರ ಇನ್ನಷ್ಟುಕಠಿಣ ಕ್ರಮ ಕೈಗೊಳ್ಳಲಿದೆ ಎಂದರು. ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂಬುದು ನಮ್ಮ ಕಾರ್ಯಕರ್ತರ, ಸಮಾಜದ ಅಪೇಕ್ಷೆ ಇದೆ. ಇದಕ್ಕೆ ಪೂರಕವಾಗಿ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಲಿದೆ. ಇನ್ನು ಮುಂದೆ ತಾಳ್ಮೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರದ ಶಕ್ತಿ ನೋಡುತ್ತೀರಿ ಎಂದು ಹೇಳಿದರು.
ಬಿಜೆಪಿ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಪಿ.ಎಫ್.ಐ, ಎಸ್ ಡಿಪಿಐ ನಿಷೇಧಿಸಲಿ ಎಂದು ಕಾಂಗ್ರೆಸ್ ಸಲಹೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ಪಿ.ಎಫ್.ಐ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದು ಮಾಡಿದ ಕಾಂಗ್ರೆಸ್ಗೆ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದರು. ನೈತಿಕತೆ ಇಲ್ಲದ ಪಕ್ಷವೆಂದರೆ ಅದು ಕಾಂಗ್ರೆಸ್, ಸಮಾಜದಲ್ಲಿ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ತುಷ್ಟೀಕರಣ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರಿಂದ ಕಲಿಯುವುದು ಏನು ಇಲ್ಲ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ ಮುಂತಾದವರು ಹಾಜರಿದ್ದರು.
ಡಿಕೆಶಿ ತಮ್ಮನ್ನು ತಾವೇ ಖೆಡ್ಡಾಕ್ಕೆ ಕೆಡವಿಕೊಂಡಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೇರೆ ಯಾರೂ ಅಲ್ಲ. ತಮ್ಮನ್ನು ತಾವೇ ಖೆಡ್ಡಾಕ್ಕೆ ಕೆಡವಿಕೊಂಡಿದ್ದಾರೆ. ಎಲ್ಲರು ತಮ್ಮ ಕರ್ಮವನ್ನು ಇಲ್ಲಿಯೇ ಅನುಭವಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದರು. ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಬಂದಿದ್ದಾಗ ತಮ್ಮ ಶತ್ರುಗಳ ನಾಶಕ್ಕೆ ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದ್ದಾರಂತೆ ಎಂದು ಸುದ್ದಿಗಾರರು ಗಮನ ಸೆಳೆದರು.
ಸಿದ್ದು ಅವರನ್ನು ಮನೆಗೆ ಕಳಿಸುವ ಉತ್ಸವ ಸಿದ್ದರಾಮೋತ್ಸವ: ಅಶ್ವತ್ಥ್ ನಾರಾಯಣ್
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸಿ.ಎನ್.ಅಶ್ವಥನಾರಾಯಣ, ಎಲ್ಲರಿಗೂ ತಮ್ಮ ತಪ್ಪು ನಡವಳಿಕೆಗಳು, ಚಿಂತನೇಗಳೇ ಶತ್ರುಗಳು. ಡಿ.ಕೆ.ಶಿವಕುಮಾರ್ ಅವರು ಸಹ ಇದನ್ನೇ ಕೇಳಿಕೊಂಡಿದ್ದಾರೆ ಎಂದು ಲೇವಡಿಯಾಡಿದರು. ಇಂದು ಭ್ರಷ್ಟಾಚಾರ ಎಂಬುದು ಹಕ್ಕಾಗಿ ಬಿಟ್ಟಿದೆ. ಈ ಸಂಸ್ಕೃತಿಯನ್ನು ಡಿ.ಕೆ. ಸಹೋದರರು ಬೆಳೆಸಿದರು. ಜಿಲ್ಲೆಯಲ್ಲಿ ಭ್ರಷ್ಟವ್ಯವಸ್ಥೆಯನ್ನು ಕ್ಲೀನ್ ಮಾಡುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಭ್ರಷ್ಟಾಚಾರವನ್ನು ಕಿತ್ತೊಗೆಯಲು ತಾವು ಬದ್ಧವಾಗಿದ್ದೇವೆ. ಕೆಲವರು 75 ವರ್ಷಗಳಾದರು ರಾಜಕಾರಣದಲ್ಲಿ ಇರಲು ಬಯಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧವೂ ಟೀಕಾ ಪ್ರಹಾರ ನಡೆಸಿದರು.