ಯಾರಿಗೆ ಸಚಿವ ಸ್ಥಾನ : ಡಿಕೆಶಿ ಬೆಂಬಲಿಗರಿಗೋ , ಜಾರಕಿಹೊಳಿ ಗುಂಪಿಗೋ..?
ಕರ್ನಾಟಕ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, 6 ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಸಚಿವ ಸ್ಥಾನಕ್ಕಾಗಿ ಲಾಭಿ ಆರಂಭವಾಗಿದೆ.
ಬಳ್ಳಾರಿ : ಸಚಿವ ಸಂಪುಟ ವಿಸ್ತರಣೆಗೆ ಕರ್ನಾಟಕದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆಯಾಗಲಿದ್ದು, ಮತ್ತೆ ಬಳ್ಳಾರಿಯಲ್ಲಿ ಸಚಿವ ಸ್ಥಾನದ ಲಾಭಿ ಆರಂಭವಾಗಿದೆ.
ಕಾಂಗ್ರೆಸ್ ಶಾಸಕ ಆನಂದ ಸಿಂಗ್, ನಾಗೇಂದ್ರ ,ತುಕಾರಾಂ ಸಚಿವ ಸ್ಥಾನದ ರೇಸ್ ನಲ್ಲಿ ಮೊದಲ ಹಂತದಲ್ಲಿದ್ದಾರೆ. ಆನಂದ್ ಸಿಂಗ್ ಅವರಿಗೆ ಡಿ.ಕೆ.ಶಿವಕುಮಾರ್ ಬೆಂಬಲವಿದ್ದರೆ, ನಾಗೇಂದ್ರ ರಮೇಶ್ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಶಾಸಕ ಸಂತೋಷ ಲಾಡ್ ಮೂಲಕ ತುಕಾರಾಂ ಸಿದ್ದರಾಮಯ್ಯ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಜಿಲ್ಲೆಯ 9 ಕ್ಷೇತ್ರದ ಪೈಕಿ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಈವರೆಗೂ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಸಚಿವ ಸ್ಥಾನಕ್ಕಾಗಿ ಪಕ್ಷ ತೊರೆಯಲು ಕೆಲವರು ಸಿದ್ದರಾಗಿದ್ದು, ಇದೀಗ ದೆಹಲಿಗೆ ತೆರಳಿದ ಪಟ್ಟಿಯಲ್ಲಿ ಯಾರ ಹೆಸರಿದೆ ಎನ್ನುವುದು ಕೂತುಹಲಕ್ಕೆ ಕಾರಣವಾಗಿದೆ.
ಎಸ್. ಟಿ. ಕೋಟಾದಡಿ ಬಳ್ಳಾರಿಗೆ ಸಚಿವ ಸ್ಥಾನ ಎನ್ನುವ ಮಾತು ಕೇಳಿ ಬರುತ್ತಿದ್ದು, ಆನಂದ ಸಿಂಗ್ ನಾಗೇಂದ್ರ ಅವರನ್ನು ಸಿದ್ದರಾಮಯ್ಯ ಪಕ್ಷಕ್ಕೆ ಕರೆದುಕೊಂಡು ಬಂದಿದ್ದಾರೆ.
ಇದೀಗ ಸಚಿವ ಸ್ಥಾನಕ್ಕಾಗಿ ಇಬ್ಬರ ಮಧ್ಯೆ ಭಾರಿ ಪೈಪೋಟಿ ನಡೆಯುತ್ತಿದ್ದು, ಬಳ್ಳಾರಿ ಓಟೆ ಯಾರ ಕೈ ವಶವಾಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.