ಬಿಜೆಪಿ ಶಾಸಕಗೆ ಎದುರಾದ ಸಂಕಷ್ಟ : ಬಂಧನ ಭೀತಿ..?
ಬಿಜೆಪಿ ಶಾಸಕರೋವ್ರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ಗೆ ವಾರಂಟ್ ಜಾರಿ ಮಾಡಿದೆ.
ಬೆಂಗಳೂರು : ಮಾಜಿ ಶಾಸಕ ಶಾಮಘಾಟಗೆ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ಗೆ ವಾರಂಟ್ ಜಾರಿ ಮಾಡಿದೆ.
2016ರಲ್ಲಿ ಶಾಸಕರಾಗಿದ್ದ ರಾಜೀವ್ ಸಕ್ಕರೆ ಕಾರ್ಖಾನೆಗಳಿಂದ ಹಣ ಪಡೆದು ರೈತರ ಪರ ನಿಲ್ಲುವುದನ್ನು ಬಿಟ್ಟು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಮಾಜಿ ಶಾಸಕ ಶಾಮಘಾಟಗೆ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜೀವ್ ಅವರು ಶಾಮಘಾಟಗೆ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಶಾಮಘಾಟಗೆ ಮನೆಯಲ್ಲಿಲ್ಲದಿದ್ದರೂ ಅವರ ಕುಟುಂಬದವರೊಂದಿಗೆ ವಾಗ್ದಾದ ನಡೆಸಿದ್ದರು. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು ಎಂಬ ಆರೋಪ ಮಾಡಲಾಗಿದೆ.
ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ರಾಜೀವ್ ವಿರುದ್ಧ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ದೂರು ದಾಖಲು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿದೆ. ನ್ಯಾಯಾಲಯವು ವಾರಂಟ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಪಿ.ರಾಜೀವ್, ಬಂಧನ ಭೀತಿ ಎಂಬ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗಿದ್ದು, ಯಾವುದೇ ಬಂಧನ ಭೀತಿ ಇಲ್ಲ.
ಪ್ರಕರಣದ ಮರುತನಿಖೆಗೆ ಆದೇಶವಾಗಿದ್ದು, ಮರುತನಿಖೆ ನಡೆಯುತ್ತಿದೆ. ನ್ಯಾಯಾಲಯವು ಯಾವ ದಿನ ಹಾಜರಾಗಬೇಕು ಎಂದು ಸೂಚಿಸಿದರೆ ಆ ದಿನ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.