75ರ ಓಲ್ಡ್ ಮ್ಯಾನ್ ಗೆ ಸಿಎಂ ಆಗುವ ಬಯಕೆ
75 ವರ್ಷದ ಓಲ್ಡ್ ಮ್ಯಾನ್ ಮುಖ್ಯಮಂತ್ರಿಯಾಗಲು ಏಕೆ ಬಯಸುತ್ತಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ವಿರುದ್ಧ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು : ಮುಖ್ಯಮಂತ್ರಿಯಾಗಬೇಕು ಎಂಬ ಕಾತುರದಲ್ಲಿರುವ 75 ವರ್ಷದ ಓಲ್ಡ್ ಮ್ಯಾನ್ ಆಡಳಿತಾವಧಿಯಲ್ಲಿ ರಾಜ್ಯವು ಅತ್ಯಂತ ಭ್ರಷ್ಟವ್ಯವಸ್ಥೆ ಕಂಡಿತ್ತು. ಇಂತಹ ಆಡಳಿತ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಕಪಾಳಮೋಕ್ಷ ಮಾಡಿವೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಮಾಜಿ ಸಚಿವ ಎಚ್.ಎಂ.ರೇವಣ್ಣ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅಕ್ರಮ ಗಣಿಗಾರಿಕೆಯಲ್ಲಿ 1 ಲಕ್ಷ ಕೋಟಿ ರು.ನಷ್ಟುರಾಜ್ಯದ ಸಂಪತ್ತನ್ನು ಲೂಟಿ ಮಾಡಲಾಗಿದೆ. ಮತ್ತೊಮ್ಮೆ ರಾಜ್ಯವನ್ನು ಲೂಟಿ ಮಾಡಲು ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದಾರೆ. ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮತ್ತು ರಾಮಚಂದ್ರಾಪುರ ಮಠದ ಅಧಿಕಾರ ವ್ಯಾಪ್ತಿಗೆ ಗೋಕರ್ಣ ದೇವಸ್ಥಾನವನ್ನು ನೀಡಿರುವ ಬಿಜೆಪಿ ಸರ್ಕಾರದ ಆದೇಶ ಸಂಬಂಧ ಹೈಕೋರ್ಟ್ ಕಪಾಳ ಮೋಕ್ಷ ಮಾಡಿವೆ. ಆದರೂ ಯಾವ ಮುಖ ಇಟ್ಟುಕೊಂಡು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ ಹಾಗೂ 75 ವರ್ಷದ ಓಲ್ಡ್ ಮ್ಯಾನ್ ಮುಖ್ಯಮಂತ್ರಿಯಾಗಲು ಏಕೆ ಬಯಸುತ್ತಿದ್ದಾರೆ ಎಂದು ಕಿಡಿಕಾರಿದರು.
ಶಿವರಾಮ ಕಾರಂತ ಬಡಾವಣೆಗೆ 2008ರಲ್ಲಿ ರೈತರ ಫಲವತ್ತಾದ 4 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತಾದರೂ ಅಂತಿಮ ಅಧಿಸೂಚನೆ ಹೊರಡಿಸಲಿಲ್ಲ. ಅಂತಿಮ ಅಧಿಸೂಚನೆ ಹೊರಡಿಸದೆ 257.50 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಡಲಾಯಿತು. ತರುವಾಯ 498 ಎಕರೆ ಭೂಮಿಯನ್ನು ಅಧಿಕಾರಿಗಳು ಡಿನೋಟಿಫೈ ಮಾಡಿದ್ದರು. ಶಿವರಾಮ ಕಾರಂತ ಬಡಾವಣೆ ವಿವಾದ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಮೀನನ್ನು ಅಧಿಸೂಚನೆಯಿಂದ ಕೈಬಿಟ್ಟಿರುವುದರ ಹಿಂದೆ ಕೆಲವು ಪ್ರಭಾವಿಗಳ ಮತ್ತು ರಾಜಕೀಯ ಕೈವಾಡ ಇದೆ ಎಂಬುದಾಗಿ ಅಭಿಪ್ರಾಯಪಟ್ಟಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿನ ಅಕ್ರಮದ ಕುರಿತು ತನಿಖೆ ನಡೆಸುವಂತೆ ನ್ಯಾ.ಕೆ.ಎನ್. ಕೇಶವ ನಾರಾಯಣ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ ಎಂದರು.
ಇನ್ನು, ಗೋಕರ್ಣ ದೇವಾಲಯವನ್ನು ಸರ್ಕಾರದ ವ್ಯಾಪ್ತಿಗೆ ನೀಡುವ ಬದಲು ರಾಮಚಂದ್ರಾಪುರ ಮಠದ ವ್ಯಾಪ್ತಿಗೆ ಒಪ್ಪಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಗೋಕರ್ಣ ದೇವಾಲಯವನ್ನು ಮತ್ತೆ ಸರ್ಕಾರದ ವ್ಯಾಪ್ತಿಗೆ ನೀಡುವ ಕುರಿತು ತೀರ್ಪು ನೀಡಿದೆ. ಇದೆಲ್ಲಾ ಯಡಿಯೂರಪ್ಪ ಮತ್ತವರ ತಂಡ ಅಧಿಕಾರದಲ್ಲಿದ್ದಾಗ ನಡೆದಿದ್ದು, ಅವರ ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.