ಏರುಗತಿಯತ್ತ ತರಕಾರಿ ಬೆಲೆ: ಸೊಪ್ಪು ಬಲು ದುಬಾರಿ
ರಾಜ್ಯದಲ್ಲಿ ಸುರಿದ ಮಳೆ ತರಕಾರಿ, ಸೊಪ್ಪಿನ ಇಳುವರಿ ಮೇಲೆ ಹೊಡೆತ ನೀಡಿದೆ. ಇದರಿಂದ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಿಮಿಸಿದೆ.
ಬೆಂಗಳೂರು : ಮಹಾಲಯ ಅಮಾವಾಸ್ಯೆ ನಂತರ ಸಾಲು ಸಾಲು ಹಬ್ಬಗಳು ಬರುವುದರಿಂದ ಮಾರುಕಟ್ಟೆಯಲ್ಲಿ ಕೆಲವು ತರಕಾರಿ, ಸೊಪ್ಪಿನ ಬೆಲೆ ನಿಧಾನವಾಗಿ ಹೆಚ್ಚಾಗತೊಡಗಿದೆ.
ರಾಜ್ಯದಲ್ಲಿ ಸುರಿದ ಮಳೆ ತರಕಾರಿ, ಸೊಪ್ಪಿನ ಇಳುವರಿ ಮೇಲೆ ಹೊಡೆತ ನೀಡಿದೆ. ಇದರಿಂದ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಿಮಿಸಿದೆ. ಸದ್ಯ ಕೆ.ಆರ್.ಮಾರುಕಟ್ಟೆಯಲ್ಲಿ ಹೂವು-ಹಣ್ಣು ಬೆಲೆ ಸ್ಥಿರತೆ ಕಂಡುಕೊಂಡಿದ್ದರೆ, ತರಕಾರಿ, ಸೊಪ್ಪಿನ ಬೆಲೆ ಗಗನಕ್ಕೇರುತ್ತಿದೆ. ಪ್ರತಿ ಕೆಜಿ ಪಚ್ಚೆಬಾಳೆ 30 ರು., ಏಲಕ್ಕಿ ಬಾಳೆ 80 ರು, ಸೇಬು 80ರು-120, ದಾಳಿಂಬೆ 80 ರು ಇದೆ. ಇನ್ನು ತರಕಾರಿ ಬೆಲೆಯಲ್ಲಿ ಶೇ.10-20ರಷ್ಟುಹೆಚ್ಚಳವಾಗಿದೆ.
ಬೀನ್ಸ್ 30-40 ರು, ಹಿರೇಕಾಯಿ 40 ರು, ಬೆಂಡೆಕಾಯಿ 20-40 ರು., ಕ್ಯಾರೆಟ್ 40-50 ರು. ಏರಿಕೆಯಾಗಿದೆ. ಒಟ್ಟಾರೆ ವಿವಿಧ ತರಕಾರಿ ಬೆಲೆ 40-50 ರು. ಆಸುಪಾಸಿನಲ್ಲಿದ್ದು, ಗ್ರಾಹಕರು ಚಿಂತಿಸುವಂತಾಗಿದೆ.
ಕೆ.ಆರ್.ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಗೌರಿ-ಗಣೇಶ ಹಬ್ಬದಲ್ಲಿ ಏರಿಕೆಯಾಗಿದ್ದ ಹೂವಿನ ಬೆಲೆ ನಂತರ ಬೇಡಿಕೆ ಕಳೆದುಕೊಂಡಿತ್ತು. ಮಲ್ಲಿಗೆ ಮೊಗ್ಗು ಕೆ.ಜಿ.300 ರು, ಕನಕಾಂಬರ ಕೆ.ಜಿ. 200 ರು, ಸೇವಂತಿ ಗುಣಮಟ್ಟದ ಮೇಲೆ 30ರಿಂದ 50 ರು. ವರೆಗೆ ಮಾರಾಟವಾಗುತ್ತಿದೆ. ವಿಜಯದಶಮಿ ಹಬ್ಬಕ್ಕೆ ಬೆಲೆ ಏರಿಕೆಯಾಗುವ ಜತೆಗೆ ಉತ್ತಮ ವ್ಯಾಪಾರವಾಗುವ ನಿರೀಕ್ಷೆ ವ್ಯಾಪಾರಿಗಳದ್ದಾಗಿದೆ.
ಸೊಪ್ಪು ದುಬಾರಿ:
ಮಳೆ ಸೊಪ್ಪಿನ ಬೆಳೆಗೆ ತೀವ್ರ ಹಾನಿಯುಂಟು ಮಾಡಿದ್ದು, ಇಳುವರಿ ನೆಲಕಚ್ಚಿದೆ. ಇದರಿಂದ ಸೊಪ್ಪಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬೆಲೆ ಹೆಚ್ಚಿರುವುದರಿಂದ ಸೊಪ್ಪು ಕೊಳ್ಳುವುದಕ್ಕೆ ಜನರು ಯೋಚಿಸುವಂತಾಗಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ನಾಟಿ ಕೊತ್ತಂಬರಿ 20 ರು ನಿಂದ 50, ಫಾರಂ ಕೊತ್ತಂಬರಿ 10ರಿಂದ 30 ರುಗೆ ಏರಿಕೆಯಾಗಿದೆ. ಪಾಲಾಕ್, ಸಬ್ಬಕ್ಕಿ ಸೊಪ್ಪು 30 ರು, ಮೆಂತ್ಯೆ ಚಿಕ್ಕ ಕಟ್ಟು 20 ರುಗೆ ಮಾರಾಟ ಮಾಡಲಾಗುತ್ತಿದೆ. ಸೊಪ್ಪು ದುಬಾರಿಗೊಂಡಿದ್ದರಿಂದ ಬೇಡಿಕೆ ಕಡಿಮೆಯಾಗಿದೆ. ಇದು ವ್ಯಾಪಾರದ ಮೇಲೆ ಹೊಡೆತ ನೀಡಿದೆ.
ಹಾಪ್ಕಾಮ್ಸ್ ತರಕಾರಿ ದರ (ಪ್ರತಿ ಕೆಜಿ ಗೆ)
ಅವರೆಕಾಯಿ 43 ರು.
ತೊಗರಿಕಾಯಿ 40 ರು.
ಕ್ಯಾರೆಟ್ ನಾಟಿ 52 ರು.
ಡಬಲ್ ಬೀನ್ಸ್ 55 ರು.
ಬೀನ್ಸ್ 36 ರು.
ಬೀಟ್ ರೂಟ್ 20 ರು.
ಟೊಮೊಟೋ 12 ರು.
ಈರುಳ್ಳಿ ಮಧ್ಯಮ 24 ರು.
ಆಲೂಗಡ್ಡೆ 33 ರು.
ಕ್ಯಾಪ್ಸಿಕಂ 32 ರು.
ದಂಟಿನ ಸೊಪ್ಪು 46 ರು.
ಸಬ್ಬಕ್ಕಿ ಸೊಪ್ಪು 108 ರು.
ಪಾಲಾಕ್ ಸೊಪ್ಪು 68 ರು.
ಹಣ್ಣುಗಳು ಬೆಲೆ
ಸೇಬು 118 ರು.
ಗ್ರೀನ್ ಆ್ಯಪಲ್ 240 ರು.
ಚಂದ್ರ ಬಾಳೆ 64 ರು.
ಪಚ್ಚಬಾಳೆ 25 ರು.
ಏಲಕ್ಕಿ ಬಾಳೆ 68 ರು.
ಸಪೋಟ 56 ರು.
ಊಟಿ ಕಿತ್ತಳೆ 70 ರು.