ಮಲ್ಯ ಚತುರ ಎಂದು ಹೊಗಳಿದ ಕೇಂದ್ರ ಸಚಿವ
ಬ್ಯಾಂಕುಗಳಿಂದ 9 ಸಾವಿರ ಕೋಟಿ ರು. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ‘ಮದ್ಯದ ದೊರೆ’ ವಿಜಯ್ ಮಲ್ಯ ಅವರನ್ನು ಚತುರ (ಸ್ಮಾರ್ಟ್) ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಓರಂ ಹೊಗಳಿದ್ದಾರೆ.
ನವದೆಹಲಿ: ಬ್ಯಾಂಕುಗಳಿಂದ 9 ಸಾವಿರ ಕೋಟಿ ರು. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ‘ಮದ್ಯದ ದೊರೆ’ ವಿಜಯ್ ಮಲ್ಯ ಅವರನ್ನು ಚತುರ (ಸ್ಮಾರ್ಟ್) ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಓರಂ ಹೊಗಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣ ವಾಗುತ್ತಿದ್ದಂತೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಅವರು, ಮಲ್ಯ ಅವರನ್ನು ತಾವು ಆ ರೀತಿ ಕರೆದಿದ್ದು ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ.
ಹೈದರಾಬಾದ್ನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಆದಿವಾಸಿ ಉದ್ಯಮಿಗಳ ಶೃಂಗಸಭೆಯಲ್ಲಿ ಮಾತನಾಡಿದ್ದ ಅವರು, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಉದ್ಯಮಿಗಳಾಗಬೇಕು. ಬುದ್ಧಿವಂತರಾಗಬೇಕು. ಚತುರರಾಗಬೇಕು. ನೀವೆಲ್ಲಾ ವಿಜಯ್ ಮಲ್ಯ ಅವರನ್ನು ಟೀಕಿಸುತ್ತೀರಿ. ಆದರೆ ವಿಜಯ್ ಮಲ್ಯ ಯಾರು? ಅವರೊಬ್ಬ ಸ್ಮಾರ್ಟ್ (ಚತುರ) ವ್ಯಕ್ತಿ. ಬುದ್ಧಿವಂತ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಮಲ್ಯ ಅವರು ಅಲ್ಲಿ-ಇಲ್ಲಿ ಬ್ಯಾಂಕರ್ಗಳು, ರಾಜಕಾರಣಿಗಳು ಹಾಗೂ ಸರ್ಕಾರಕ್ಕೇ ಏನನ್ನೋ ಮಾಡಿ ಹೋದರು’ ಎಂದು ಹೇಳಿದ್ದರು.
ಇದು ವಿವಾದಕ್ಕೆ ಈಡಾಗುತ್ತಿದ್ದಂತೆ ಶನಿವಾರ ಸ್ಪಷ್ಟನೆ ನೀಡಿರುವ ಅವರು,ಮಲ್ಯ ಅವರ ಹೆಸರನ್ನು ಆಕಸ್ಮಿಕವಾಗಿ ತೆಗೆದುಕೊಂಡಿದ್ದೆ. ಅದು ತಪ್ಪು. ನಾನು ಬೇರೆಯವರ ಹೆಸರನ್ನು ಪ್ರಸ್ತಾಪಿಸಬೇಕಿತ್ತು ಎಂದು ಹೇಳಿ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ.