ಇದೆಂಥಾ ಅವಮಾನ: ಸರ್ದಾರ್ ಪ್ರತಿಮೆ ‘ನಾನ್ಸೆನ್ಸ್’ ಎಂದ ಸಂಸದ!
ಸರ್ದಾರ್ ಪ್ರತಿಮೆಗೆ ಸಂಸದನಿಂದ ಅವಮಾನ! ಸರ್ದಾರ್ ಪ್ರತಿಮೆ ‘ನಾನ್ಸೆನ್ಸ್’ ಎಂದ ಬ್ರಿಟನ್ ಸಂಸದ! ಇಂಗ್ಲೆಂಡ್ ಕನ್ಸರ್ವೆಟೀವ್ ಪಕ್ಷದ ಸಂಸದ ಪೀಟರ್ ಬೋನ್! ಭಾರತಕ್ಕೆ ಇಂಗ್ಲೆಂಡ್ ಆರ್ಥಿಕ ಸಹಾಯ ಬೇಡ ಎಂದ ಬೋನ್! ಮೋದಿ ಪ್ರತಿಮೆ ನಿರ್ಮಾಣದ ನಿರ್ಧಾರ ಪ್ರಶ್ನಿಸಿದ ಪೀಟರ್ ಬೋನ್
ಲಂಡನ್(ನ.7): ಇತ್ತೀಚಿಗಷ್ಟೇ ಗುಜರಾತ್ನಲ್ಲಿ ನಿರ್ಮಾಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣಗೊಂಡಿದೆ. ಸ್ವಾತಂತ್ರ್ಯದ ಬಳಿಕ ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಪಟೇಲ್ ಅವರಿಗೆ ಈ ಮೂಲಕ ಇಡೀ ದೇಶ ನಮನ ಸಲ್ಲಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪಟೇಲ್ ಪ್ರತಿಮೆ ನಿರ್ಮಾಣ ಇಡೀ ಜಗತ್ತಿಗೆ ಮಾದರಿಯಾಗಿ ತಲೆ ಎತ್ತಿದೆ. ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಇದೀಗ ಭಾರತದ ಪಾಲಾಗಿದೆ.
ಆದರೆ ಸರ್ದಾರ್ ಪ್ರತಿಮೆಗೆ ಇಂಗ್ಲೆಂಡ್ ಸಂಸದರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ದಾರ್ ಪ್ರತಿಮೆಯನ್ನು ‘ನಾನ್ಸೆನ್ಸ್’ ಎಂದು ಕರೆಯುವ ಮೂಲಕ ಭಾರತೀಯರಿಗೆ ಅಪಮಾನ ಮಾಡಿದ್ದಾರೆ ಈ ಸಂಸದ.
ಇಂಗ್ಲೆಂಡ್ನ ಕನ್ಸರ್ವೆಟೀವ್ ಪಕ್ಷದ ಸಂಸದ ಪೀಟರ್ ಬೋನ್ ಭಾರತದ ಸರ್ದಾರ್ ಪ್ರತಿಮೆ ನಿರ್ಮಾಣವನ್ನು ಅತ್ಯಂತ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.
ಇಂಗ್ಲೆಂಡ್ನಿಂದ 1.1 ಬಿಲಿಯನ್ ಪೌಂಡ್ ಆರ್ಥಿಕ ಸಹಾಯ ಪಡೆದ ಭಾರತ, 330 ಮಿಲಿಯನ್ ಪೌಂಡ್ ಖರ್ಚು ಮಾಡಿ ಸ್ವಪ್ರತಿಷ್ಠೆಗೆ ಪ್ರತಿಮೆ ನಿರ್ಮಿಸುವುದರಲ್ಲಿ ಅರ್ಥವಿಲ್ಲ ಎಂದು ಬೋನ್ ಗುಡುಗಿದ್ದಾರೆ.
ಭಾರತ ಇತ್ತೀಚಿಗೆ ವಿದೇಶಿ ನೆರವು ಯೋಜನೆಯಡಿಯಲ್ಲಿ ಇಂಗ್ಲೆಂಡ್ ನಿಂದ 1.17 ಬಿಲಿಯನ್ ಪೌಂಡ್(9,492 ಕೋಟಿ ರೂ.) ಹಣಕಾಸು ನೆರವು ಪಡೆದುಕೊಂಡಿತ್ತು.
ಇದನ್ನೇ ಪ್ರಸ್ತಾಪಿಸಿರುವ ಸಂಸದ ಪೀಟರ್ ಬೋನ್, ಸಾಮಾಜಿಕ ಕಾರ್ಯಗಳಿಗೆ ಬಳಸಬಹುದಾಗಿದ್ದ ಹಣವನ್ನು ಪ್ರತಿಮೆ ನಿರ್ಮಾಣಕ್ಕೆ ಬಳಸುವ ಮೂಲಕ ಭಾರತ ಏನು ಸಂದೇಶ ಸಾರಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ.
‘ನಮ್ಮ ದೇಶದ ನಾಗರಿಕರು ನೀಡುವ ತೆರಿಗೆ ಹಣದಿಂದ ಕಳೆದ 56 ತಿಂಗಳಲ್ಲಿ ಭಾರತಕ್ಕೆ ಹತ್ತು ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡಿದ್ದೇವೆ, ಆ ಹಣದಿಂದ ಭಾರತದ ಮಾನವ ಸಂಪನ್ಮೂಲ ಅಭಿವ್ರದ್ಧಿಗೆ, ಸೋಲಾರ್ ಸಿಸ್ಟಮ್ ಅಳವಡಿಸಲು ಮತ್ತು ಇತರೆ ಜನೋಪಕಾರಿ ಕಾರ್ಯಕ್ರಮಗಳಿಗೆ ಬಳಸಲು ನೀಡಿದ್ದೆವು, ಆದರೆ ಒಂದೆ ಒಂದು ಪ್ರತಿಮೆಯ ವೆಚ್ಚಕ್ಕೆ 3 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿರುವ ಭಾರತ ನಮಗೆ ಅತಿ ಶ್ರೀಮಂತ ರಾಷ್ಟ್ರವಾಗಿ ಕಾಣುತ್ತಿರುವುದರಿಂದ ನಾವು ಅನುದಾನ ನೀಡುವ ಅವಶ್ಯಕತೆಯಿಲ್ಲ’ ಎಂದು ಬೋನ್ ಅಭಿಪ್ರಾಯಪಟ್ಟಿದ್ದಾರೆ.