ಸುದೀಪ್ ಸಿನಿಮಾವನ್ನೂ ಬ್ಯಾನ್ ಮಾಡಿ; ಟಾಲಿವುಡ್ ಟ್ರಾಲ್ ಪೇಜಲ್ಲಿ ನಡೆದಿದೆ ಕಟ್ಟಪ್ಪ ಹಾಟ್ ಡಿಸ್ಕಷನ್
ಟ್ರೋಲ್ ಪೇಜ್'ನಲ್ಲಿ ಹಾಕಿದ ಪೋಸ್ಟ್'ಗಳಲ್ಲಿ ಸಾಕಷ್ಟು ಫೇಸ್ಬುಕ್ ಕನ್ನಡಿಗರು ಕಾಮೆಂಟ್'ಗಳ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಸತ್ಯರಾಜ್'ರನ್ನಷ್ಟೇ ವಿರೋಧಿಸುತ್ತಿರುವುದು; ಬಾಹುಬಲಿಗೆ ತಮ್ಮ ವಿರೋಧವಿಲ್ಲ; ತೆಲುಗು ಭಾಷೆ ಅಥವಾ ತೆಲುಗು ಸಿನಿಮಾ ಬಗ್ಗೆ ಕನ್ನಡಿಗರಿಗೆ ಗೌರವವಿದೆ ಎಂದು ಹಲವು ಮಂದಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಕನ್ನಡ ಹೋರಾಟಗಾರರ ವಿರುದ್ಧ ತಮಿಳು ನಟ ಸತ್ಯರಾಜ್ ಆಡಿದ ಧ್ವೇಷಪೂರಿತ ಮಾತುಗಳು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಸತ್ಯರಾಜ್ ಅಭಿನಯಿಸಿರುವ "ಬಾಹುಬಲಿ-2" ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸದಂತೆ ಹೋರಾಟ ನಡೆಸಿವೆ. ಸತ್ಯರಾಜ್ ಕನ್ನಡಿಗರ ಕ್ಷಮೆ ಕೇಳುವವರೆಗೂ ಬಾಹುಬಲಿ ಚಿತ್ರದ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಹೋರಾಟಗಾರರು ಪಣ ತೊಟ್ಟಿದ್ದಾರೆ. ಆದರೆ, ಕೆಲ ಟಾಲಿವುಡ್ ಫ್ಯಾನ್ ಪೇಜ್'ಗಳಲ್ಲಿ ಈ ವಿಚಾರ ದೊಡ್ಡದಾಗಿ ಟ್ರೋಲ್ ಆಗುತ್ತಿದೆ. ಬಾಹುಬಲಿಯನ್ನು ನಿಷೇಧಿಸಿದರೆ ಕಿಚ್ಚ ಸುದೀಪ್ ಅವರ ಚಿತ್ರಗಳನ್ನೂ ಬ್ಯಾನ್ ಮಾಡಬೇಕು ಟಾಲಿವುಡ್ ಟ್ರಾಲ್ ಪೇಜ್'ವೊಂದು ಹೇಳಿದೆ. ಬಾಹುಬಲಿಯಲ್ಲಿ ಸತ್ಯರಾಜ್ ಜೊತೆ ಸುದೀಪ್ ಕೂಡ ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ ಸುದೀಪ್ ಚಿತ್ರವನ್ನೂ ಬ್ಯಾನ್ ಮಾಡಲಿ. ಅಷ್ಟೇ ಅಲ್ಲ, ಸತ್ಯರಾಜ್ ಅಭಿನಯದ ಚಿತ್ರಗಳನ್ನು ಈ ಮೊದಲು ಬಿಡುಗಡೆ ಮಾಡಲು ಬಿಟ್ಟ ಕೆಲ ಕನ್ನಡಿಗರು ಈಗ ಬಾಹುಬಲಿ ಚಿತ್ರವನ್ನ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆಂದೂ ಪ್ರಶ್ನಿಸಲಾಗಿದೆ.
ಅಷ್ಟೇ ಅಲ್ಲ, ಪ್ರಭಾಸ್ ಅಭಿನಯದ ಬಾಹುಬಲಿ-2 ಚಿತ್ರ 1 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ಇದು ಕನ್ನಡ ಚಿತ್ರೋದ್ಯಮ ಇಡೀ ವರ್ಷದ ಆದಾಯದಷ್ಟು ಮೊತ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಹೋದರೆ ನಷ್ಟವಾಗುವಂಥದ್ದೇನೂ ಇಲ್ಲ. ಅಪರೂಪಕ್ಕೊಮ್ಮೆ ಬಿಡುಗಡೆಯಾಗುವ ಅದ್ಭುತ ಸಿನಿಮಾವನ್ನು ನೋಡುವ ಅವಕಾಶದಿಂದ ಕನ್ನಡಿಗರು ವಂಚಿತರಾಗುತ್ತಾರೆ. ಹಾಗೇನಾದರೂ ಆದರೆ, ಇಡೀ ದೇಶದ ಜನರು ಕನ್ನಡಿಗರನ್ನು ಕ್ಷಮಿಸುವುದಿಲ್ಲ ಎಂದು ಟಾಲಿವುಡ್ ಟ್ರಾಲ್ ಪೇಜ್'ನಲ್ಲಿ ಬರೆಯಲಾಗಿದೆ.
ಟ್ರೋಲ್ ಪೇಜ್'ನಲ್ಲಿ ಹಾಕಿದ ಪೋಸ್ಟ್'ಗಳಲ್ಲಿ ಸಾಕಷ್ಟು ಫೇಸ್ಬುಕ್ ಕನ್ನಡಿಗರು ಕಾಮೆಂಟ್'ಗಳ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಸತ್ಯರಾಜ್'ರನ್ನಷ್ಟೇ ವಿರೋಧಿಸುತ್ತಿರುವುದು; ಬಾಹುಬಲಿಗೆ ತಮ್ಮ ವಿರೋಧವಿಲ್ಲ; ತೆಲುಗು ಭಾಷೆ ಅಥವಾ ತೆಲುಗು ಸಿನಿಮಾ ಬಗ್ಗೆ ಕನ್ನಡಿಗರಿಗೆ ಗೌರವವಿದೆ ಎಂದು ಹಲವು ಮಂದಿ ಸ್ಪಷ್ಟಪಡಿಸಿದ್ದಾರೆ. ಇನ್ನು ಕೆಲವರಂತೂ, ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನವೇ ಅಂತಿಮ. ಕನ್ನಡಿಗರನ್ನು ಕೆಣಕಿದರೆ ಉಳಿಗಾಲವಿಲ್ಲ ಎಂದು ರೋಷಯುಕ್ತವಾಗಿಯೂ ರೇಗಿದ್ದಾರೆ.