ಅವನು ಪೆದ್ದ, ತಲೆಯಲ್ಲಿ ಮೆದುಳಿಲ್ಲ ಹೀಗೆ ಸಿದ್ದರಾಮಯ್ಯ ತೆಗಳಿದ್ದು ಯಾರಿಗೆ..?
ಸ್ವಯಂ ಘೋಷಿತ ಅಹಿಂದ ನಾಯಕ, ಭಂಡ ಎಂಬ ಮಾಜಿ ಉಪಮುಖ್ಯಮಂತ್ರಿ ಎಂದು ಕೆ.ಎಸ್ ಈಶ್ವರಪ್ಪ ವಾಗ್ದಾಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಗದಗ : ಸಿದ್ದರಾಮಯ್ಯ ಒಬ್ಬ ಸ್ವಯಂ ಘೋಷಿತ ಅಹಿಂದ ನಾಯಕ, ಭಂಡ ಎಂಬ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ ಪೆದ್ದ, ಅವನ ತಲೆಯಲ್ಲಿ ಮೆದುಳಿಲ್ಲ ಎಂದು ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎನ್ನುವುದು ಫಲಿತಾಂಶದಿಂದಲೇ ಸ್ಪಷ್ಟವಾಗುತ್ತದೆ. ಲಕ್ಷಾಂತರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ಸಾಕಲ್ಲವೇ ಎಂದು ಪ್ರಶ್ನಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಶ್ನೆಗೆ, ಇದು ಪಕ್ಷದ ಹೈಕಮಾಂಡ್ಗೆ ಬಿಟ್ಟವಿಚಾರ. ಆದರೂ ಈ ವಿಷಯದಲ್ಲೂ ನಾನು ಸದ್ಯದಲ್ಲಿಯೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುತ್ತೇನೆ ಎಂದರು.
ಜನಾರ್ದನ ರೆಡ್ಡಿ, ಬಿಜೆಪಿ ವರ್ಚಸ್ಸು ಹಾಳು ಮಾಡಲು ನನ್ನ ಮೇಲೆ ಹೀಗೆಲ್ಲಾ ನಡೆಯುತ್ತಿದೆ ಎನ್ನುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನೇನೂ ರಿಯಾಕ್ಟ್ ಮಾಡಲ್ಲ. ಆದರೆ, ಯಡಿಯೂರಪ್ಪ ಅವರು ಹೇಳಿಕೆ ಗಮನಿಸಿದ್ದೀರಾ? ಯಡಿಯೂರಪ್ಪ ಅವರೇ ಹೇಳಿದ್ದಾರೆ ರೆಡ್ಡಿ ಬಿಜೆಪಿಯಲ್ಲಿಯೇ ಇಲ್ಲ ಎಂದು. ಹಾಗಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.