ನಾಳೆಯಿಂದ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ
ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟ್ನಲ್ಲಿ ಕೈಗೊಂಡಿದ್ದ 2ನೇ ಹಂತದ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು, ಭಾನುವಾರ ಸಂಚಾರಕ್ಕೆ ಮುಕ್ತವಾಗಲಿದೆ.
ಮಂಗಳೂರು: ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟ್ನಲ್ಲಿ ಕೈಗೊಂಡಿದ್ದ 2ನೇ ಹಂತದ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು, ಭಾನುವಾರ ಸಂಚಾರಕ್ಕೆ ಮುಕ್ತವಾಗಲಿದೆ.
ಗುಂಡ್ಯ ಬಳಿಯ ಚೌಡೇಶ್ವರಿ ದೇವಸ್ಥಾನದ ಬಳಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ, ಕುಮಾರಸ್ವಾಮಿ ಕಾಮಗಾರಿ ವೀಕ್ಷಣೆ ನಡೆಸಲಿದ್ದು, ಬಳಿಕ ಇಲಾಖೆಯ ಅತಿಥಿಗೃಹದಲ್ಲಿ ಸಚಿವ ರೇವಣ್ಣ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ತದನಂತರ ಮಧ್ಯಾಹ್ನ 2ರ ವೇಳೆಗೆ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಇದು ಕೇವಲ ವಿಧ್ಯುಕ್ತ ಚಾಲನೆಯಾಗಿದ್ದು, ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಶಿರಾಡಿಯಲ್ಲಿ ಗುಡ್ಡ ಕುಸಿತ: ಶಿರಾಡಿ ಘಾಟ್ ಕಾಂಕ್ರಿಟೀಕರಣದ ಹೊರತೂ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿಯನ್ನು ಎದುರಿಸುತ್ತಿದೆ. ಈಗಾಗಲೇ ಮೂರು ಬಾರಿ ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ಆದರೆ, ಹೆದ್ದಾರಿಯನ್ನು ಸಾಕಷ್ಟುಅಗಲಗೊಳಿಸಿರುವ ಹಿನ್ನೆಲೆಯಲ್ಲಿ ಕುಸಿದ ಮಣ್ಣು ಚರಂಡಿಗೆ ಬೀಳುತ್ತಿದೆ. ಸ್ಥಳದಲ್ಲಿ ಗುತ್ತಿಗೆ ಸಂಸ್ಥೆಯ ಕಾರ್ಮಿಕರು ಇರುವುದರಿಂದ ಕೂಡಲೇ ಮಣ್ಣನ್ನು ತೆರವುಗೊಳಿವ ಕಾರ್ಯ ನಡೆಸುತ್ತಾರೆ. ಶುಕ್ರವಾರ ಕೂಡ ಚೌಡೇಶ್ವರಿ ಗುಡಿ ಸಮೀಪ ಗುಡ್ಡ ಜರಿದು ಮಣ್ಣು ಚರಂಡಿ ಸೇರಿದೆ. ಕೆಲವು ಕಡೆಗಳಲ್ಲಿ ಗುಡ್ಡ ಕುಸಿದು ತಡೆಗೋಡೆಗೆ ಹಾನಿಯಾಗಿದೆ.