ಸಾಮರಸ್ಯವೇ ರಾಜ್ಯದ ಧರ್ಮ : ಮುಸ್ಲಿಮರಿಂದ ಅಯ್ಯಪ್ಪ ದೇಗುಲ ಸ್ವಚ್ಛ
ಸ್ವಯಂಸೇವಾ ಸಂಘಟನೆಗಳು ಒಳಗೊಂಡು ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ತಮ್ಮ ರಾಜ್ಯವನ್ನು ಹಿಂದಿನ ಸ್ಥಿತಿಗೆ ಮರಳಿಸಲು ದೃಢ ನಿರ್ಧಾರ ಕೈಗೊಂಡಿದ್ದು ತೊಂದರೆಗೊಳಗಾಗಿರುವ ಪ್ರದೇಶಗಳ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಶಬರಿಮಲೆ[ಆ.24]: ಶತಮಾನದ ಭೀಕರ ಅತೀವೃಷ್ಟಿಗೆ ಒಳಗಾಗಿದ್ದ ಕೇರಳ ರಾಜ್ಯ ನಿಧಾನವಾಗಿ ಸಹಜ ಸ್ಥತಿಗೆ ಮರಳುತ್ತಿದೆ. ದೇವರ ನಾಡು ಪುನರ್ ನಿರ್ಮಾಣಗೊಳ್ಳಲು ರಾಷ್ಟ್ರದ ನಾನಾ ಭಾಗಗಳಿಂದ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ.
ತತ್ತರಿಸಿ ಹೋಗಿರುವ ಕೇರಳ ಮರಳಿ ಪುನಶ್ಚೇತನ ಪಡೆಯಲು ಕೆಲವು ತಿಂಗಳುಗಳೇ ಹಿಡಿಯಬಹುದು. ಸ್ವಯಂಸೇವಾ ಸಂಘಟನೆಗಳು ಒಳಗೊಂಡು ರಾಜ್ಯದ ವಿವಿಧ ಭಾಗದ ಕಾಲೇಜಿನ ವಿದ್ಯಾರ್ಥಿಗಳು ಜಾತಿ,ಧರ್ಮ ಭೇದವನ್ನು ಮರೆತು ತಮ್ಮ ರಾಜ್ಯವನ್ನು ಹಿಂದಿನ ಸ್ಥಿತಿಗೆ ಮರಳಿಸಲು ದೃಢ ನಿರ್ಧಾರ ಕೈಗೊಂಡಿದ್ದು ತೊಂದರೆಗೊಳಗಾಗಿರುವ ಪ್ರದೇಶಗಳ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳಿಂದ ಅಯ್ಯಪ್ಪ ದೇಗುಲ ಸ್ವಚ್ಛ
ರಾಜ್ಯದ ಅತೀ ದೊಡ್ಡ ಮುಸ್ಲಿಂ ಸಂಘಟನೆಯಾದ ಸಂಸ್ಥಾ ಕೇರಳ ಸುನ್ನಿ ವಿದ್ಯಾರ್ಥಿಗಳ ಫೆಡರೇಷನ್ ರಾಜ್ಯದ ವಿವಿಧ ಭಾಗದಲ್ಲಿ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದೆ. ದೇಶದ ಪ್ರತಿಷ್ಟಿತ ದೇಗುಲವಾದ ಶಬರಿಮಲೆ ಅಯ್ಯಪ ದೇಗುಲವನ್ನು ಇದೇ ಸಂಘಟನೆಯ 17 ಮಂದಿಯ ಸದಸ್ಯರು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದು ಭಕ್ತರು ಯಾವುದೇ ತೊಂದರೆಯಿಲ್ಲದೆ ದೇಗುಲ ಪ್ರವೇಶಿಸಬಹುದಾಗಿದೆ.
ಅಯ್ಯಪ್ಪ ದೇಗುಲವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ನಮ್ಮ ತಂಡ ಸ್ವಚ್ಚತಾ ಕಾರ್ಯ ಕೈಗೊಂಡಿದ್ದು ಧಾರ್ಮಿಕ ಸಾಮರಸ್ಯವೇ ನಮ್ಮ ತಂಡದ ಮೂಲ ಉದ್ದೇಶವಾಗಿದೆ ಎಂದು ಪರಿಹಾರ ಕಾರ್ಯದ ನೇತೃತ್ವ ವಹಿಸಿರುವ ಹಬೀಬ್ ಫೈಜೆ ಕೊಟ್ಟಪಾಡಂ ತಿಳಿಸಿದ್ದಾರೆ.