‘ಅಯ್ಯಪ್ಪ ಮಾಲೆಯಿಂದ ಜನಸಂಖ್ಯೆ ಕಡಿಮೆ ಆಗುತ್ತೆ’ ಧಾರವಾಡದಿಂದ ಬಂದ ಹೇಳಿಕೆ
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಒಂದಿಲ್ಲೊಂದು ಪ್ರತಿಕ್ರಿಯೆಗಳು ಇನ್ನು ಬರುತ್ತಲೆ ಇವೆ. ಹಂಪಿ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಈಗ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.
ಧಾರವಾಡ[ಜ.14] ಎಲ್ಲಾ ಗಂಡು ಮಕ್ಕಳೂ ಬದುಕಿನುದ್ದಕ್ಕೂ ಮಾಲೆ ಹಾಕಿಕೊಂಡು ಅಯ್ಯಪ್ಪನ ಕಪ್ಪು ಬಟ್ಟೆ ಹಾಕಿಕೊಂಡು ಬಿಡಲಿ. ಆಗ ನಮ್ಮ ಹೆಣ್ಣು ಮಕ್ಕಳು ಅವರ ಸಮೀಪವೇ ಹೋಗುವುದಿಲ್ಲ. ಆಗ ನಮ್ಮ ದೇಶದ ಜನಸಂಖ್ಯೆ ಕೂಡ ತಾನಾಗಿಯೇ ಕಡಿಮೆ ಆಗುತ್ತದೆ ಎಂದು ಹಂಪಿ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ನಡೆದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವದಲ್ಲಿ ಮಾತನಾಡಿದ ಮಲ್ಲಿಕಾ ಘಂಟಿ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಪ್ರತಿಕ್ರಿಯೆ ನೀಡಿದರು.
ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ
ನಮ್ಮತನವನ್ನು ಅಲಿಖಿತ ಸಂವಿಧಾನಕ್ಕೆ ಒತ್ತೆ ಇಡಬೇಕಾದ ಸ್ಥಿತಿ ಇಂದು ಬಂದಿದೆ. ಮಂದಿರ ಪ್ರವೇಶ ತೀರ್ಪು ಒಪ್ಪಿಕೊಳ್ಳುವ ಮಟ್ಟಿಗೆ ಸ್ವಾತಂತ್ರ್ಯ ಬಂದರೂ ನಮ್ಮಮನಸ್ಸು ಒಪ್ಪುತ್ತಿಲ್ಲ ಯಾಕೆ? ಎಲ್ಲ ಗಂಡಸರನ್ನು ಗಂಡಸರು ಅಂತಾ ಕರೆಯೋಕೆ ಆಗುವುದಿಲ್ಲ. ಅನೇಕ ಗಂಡಸರ ಮಧ್ಯೆ ತಾಯಿ ಇದ್ದಾರೆ. ಮಹಿಳೆ ಅಯ್ಯಪ್ಪದೇವಾಲಯ ಪ್ರವೇಶ ಮಾಡಿದ್ದಕ್ಕೆ ಶುದ್ಧಿ ಮಾಡಿದ್ದಾರೆ ಅಂತಾರೆ ಆದರೆ ಇದು ಮೊದಲಲ್ಲ ಎಂದು ಹೇಳಿದರು.
ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ
ಈ ಹಿಂದೆಯೂ ಶುದ್ಧಿ ಕಾರ್ಯ ನಡೆದಿದೆ. ಹಿಂದೆ ಜಗಜೀವನರಾಮ್ ಮಂದಿರ ಪ್ರವೇಶ ಮಾಡಿದಾಗಲೂ ಶುದ್ಧಿ ಕಾರ್ಯ ಆಗಿತ್ತು. ಮಹಿಳೆ ಮಂದಿರ ಪ್ರವೇಶ ವಿರೋಧಿಸುವವರಲ್ಲಿ ನಾನೊಂದು ಕೇಳ ಭಯಸುತ್ತೇನೆ. ಇಡೀ ಬದುಕಿನುದ್ದಕ್ಕೂ ಮಾಲೆ ಹಾಕಿಕೊಂಡು ಅಯ್ಯಪ್ಪನ ಕಪ್ಪು ಬಟ್ಟೆ ಹಾಕಿಕೊಂಡು ಬಿಡಲಿ, ಆಗ ದೇಶದ ಜನಸಂಖ್ಯೆಯೂ ನಿಯಂತ್ರಣಕ್ಕೆ ಬರುತ್ತದೆ, ಕುಡಿತದ ಚಟಗಳು ಕೂಡ ದೂರ ಹೋಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.