ಬೆಂಗಳೂರಲ್ಲಿ ಮಳೆ: ನೆಲಕ್ಕುರುಳಿದ ಮರ
ಬೆಂಗಳೂರಿನಲ್ಲಿ ಗಾಳಿಯೊಂದಿಗೆ ಬೀಸಿದ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ಮಲ್ಲೇಶ್ವರಮ್ ಮಂತ್ರಿ ಮಾಲ್ ಬಳಿ ಮರ ಮುರಿದು ಬಿದ್ದಿದ್ದರಿಂದ ಕೆಲವು ಕಾಲ ವಾಹನ ಸಂಚಾರಕ್ಕೆ ಅಡೆತಡೆಯಾಗಿತ್ತು.
ಬೆಂಗಳೂರು (ಏ.24): ಬಿಸಿಲಿನ ಝಳ ಹೆಚ್ಚುತ್ತಿದೆ ಎನ್ನುತ್ತಿದೆ ಎನಿಸುತ್ತಿದ್ದಂತೆ, ನಗರದಲ್ಲಿ ಮಳೆಯಾಗುತ್ತಿದೆ. ಏ.24ರಂದೂ ಮಳೆ ಸುರಿದಿದ್ದು, ಅಲ್ಲಲ್ಲಿ ಸಂಚಾರ ಅಸ್ತವ್ಯಸವಾದರೂ, ಇಳೆ ತಂಪಾಗಿದೆ.
ಗಾಳಿಯೊಂದಿಗೆ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಜಾಜಿ ನಗರ 2ನೇ ಬ್ಲಾಕ್ನ ರಸ್ತೆಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಉರುಳಿದ್ದು, ಕಾರು ಚಾಲಕ ಸ್ಪಲ್ಪದಲ್ಲಿಯೇ ಅಪಾಯದಿಂದ ಪಾರಾಗಿದ್ದಾನೆ.
ಮಲ್ಲೇಶ್ವರಮ್ ಮಂತ್ರಿ ಮಾಲ್ ಬಳಿಯೂ ಮರದ ಕೊಂಬೆಗಳು ನೆಲಕ್ಕುರುಳಿದಿದ್ದು, ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣವೇ ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೇ ದೌಡಾಯಿಸಿದ್ದು, ರಸ್ತೆ ಮೇಲೆ ಬಿದ್ದ ರೆಂಬೆ ಕೊಂಬೆಗಳನ್ನು ತೆರವುಗೊಳಿಸಿದರು. ನಂತರವೇ ಸಂಚಾರ ಸಹಜ ಸ್ಥಿತಿಗೆ ಬಂದಿದೆ.
ಸುಂಕದಕಟ್ಟೆ ಮುಖ್ಯ ರಸ್ತೆ ಮೇಲೂ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.