ನಂಜನಗೂಡಿನಲ್ಲಿ ಮರ್ಯಾದಾ ಹತ್ಯೆ?
ನಂಜನಗೂಡಿನ ಕೂಗಲೂರು ಗ್ರಾಮದ ಬಳಿ ಮೃತ ಯುವತಿ ದೇಹ ಪತ್ತೆ | ಮರ್ಯಾದಾ ಹತ್ಯೆ ಶಂಕೆ?
ಮೈಸೂರು (ಜ. 18): ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಮರ್ಯಾದಾ ಹತ್ಯೆ ಆಗಿರಬಹುದೆಂಬ ಅನುಮಾನ ಹುಟ್ಟು ಹಾಕಿದೆ.
ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಯುವತಿ ಸವಿತಾ(25) ಮೃತಪಟ್ಟ ಯುವತಿ. ಕೂಗಲೂರು ಗ್ರಾಮದ ಕಾಳನಾಯಕ ಮತ್ತು ನಾಗಮ್ಮ ಎಂಬುವರ ಪುತ್ರಿ. ಕೂಗಲೂರು ಮತ್ತು ಕಸುವಿನಹಳ್ಳಿ ಮುಖ್ಯರಸ್ತೆಯ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಕೂಗಲೂರು ಗ್ರಾಮದವರೇ ಆದ ಅನ್ಯ ವರ್ಗದ ಯುವಕ ಶಂಕರ್ ಎಂಬುವವರನ್ನು ಸವಿತಾ ಪ್ರೀತಿಸುತ್ತಿದ್ದರು. ಇದಕ್ಕೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ. ಜಾತಿ ಅಡ್ಡ ಬಂದ ಕಾರಣ ಮರ್ಯಾದೆ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನಂಜನಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.