ಬಲಪಂಥೀಯರಲ್ಲಿ ಬುದ್ಧಿಜೀವಿಗಳೇ ಇಲ್ಲ! ಬೆಂಕಿ ಹೊತ್ತಿಸಿದ ಮಟ್ಟು ಹೇಳಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಯಾವ ಸುದ್ದಿಯನ್ನು ಹೇಗೆ ಬಳಸಿಕೊಳ್ಳುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರಾಗಿದ್ದ ದಿನೇಶ್ ಅಮೀನಮಟ್ಟು ಹೇಳಿಕೆ ಸಾಮಾಜಿಕ ತಾಣದಲ್ಲಿ ಯಾವ ಪರಿಯ ಚರ್ಚೆ ಹುಟ್ಟುಹಾಕಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕಡಲ ತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಬಗ್ಗೆ ನೀಡಿದ್ದ ಹೇಳಿಕೆ ಅದಕ್ಕೆ ಸಂಬಂಧಿಸಿ ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ವೈರಲ್ ಆಗುವುದರೊಂದಿಗೆ ಚರ್ಚೆಗೆ ವೇದಿಕೆ ನಿರ್ಮಾಣ ಮಾಡಿದೆ.
ಬೆಂಗಳೂರು[ಆ.13]: ಮಂಗಳೂರಿನ ವಿಚಾರ ಸಂಕಿರಣವೊಂದರಲ್ಲಿ ದಿನೇಶ್ ಅಮೀನಮಟ್ಟು ನೀಡಿದ್ದ ಹೇಳಿಕೆ ಎಡ-ಬಲ ವಿಚಾರಧಾರೆಯ ಸಂಘರ್ಷಕ್ಕೆ ವೇದಿಕೆಯಾಗಿದೆ. ವೇದಿಕೆ ಸಿಕ್ಕಿರುವುದು ಸೋಶಿಯಲ್ ಮೀಡಿಯಾದಲ್ಲಿ ಎನ್ನುವುದು ವಿಶೇಷ.
ಹುಬ್ಬಳ್ಳಿ ಈದ್ಗಾ ಮೈದಾನದ ಪ್ರಕರಣದ ನಂತರ ಶಿವರಾಮ ಕಾರಂತರು ಆರ್ ಎಸ್ ಎಸ್ ಪರ ಹೇಳಿಕೆ ನೀಡಿಲು ಆರಂಭಿಸಿದ್ದರು. ಆಗ ನನಗೆ ಅವರು ಸಾಯುವುದುದೇ ಒಳ್ಳೆಯದು ಅನ್ನಿಸಿತು.. ಎಂಬ ಹೇಳಿಕೆಯೇ ವಿವಾದದ ಕೇಂದ್ರ ಬಿಂದು. ಇನ್ನು ಬಲ ಪಂಥೀಯರಲ್ಲಿ ಒರಿಜಿನಲ್ ಬುದ್ಧಿಜೀವಿಗಳಿಲ್ಲ ಎಂದು ಹೇಳಿಕೆ ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲರಾಗಿದ್ದವರನ್ನು ಕೆರಳಿಸಿತ್ತು.
ಶ್ರೀನಿವಾಸ್ ಪೂಜಾರಿ ಆಕ್ರೋಶ: ದಿನೇಶ್ ಅಮೀನ್ ಮಟ್ಟು ಹುಟ್ಟುವ ಮೊದಲು ಶಿವರಾಮಕಾರಂತರು ಅನ್ಯ ಜಾತಿ ಹುಡುಗಿ ಮದುವೆಯಾಗಿದ್ದರು. ಆ ಮೂಲಕ ಅವರು ಜಾತ್ಯತೀತರಾಗಿದ್ದರು. ಇಂಥ ಶಿವರಾಮ ಕಾರಂತರ ಬಗ್ಗೆ ಹೇಳಿಕೆ ನೀಡಿದವರಿಗೂ ಕೂಡ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.