ಸಚಿವ ಸಂಪುಟ ವಿಸ್ತರಣೆ: ಗೌಡರ ಲೆಕ್ಕಾಚಾರವೇ ಬೇರೆ
ಸಂಪುಟ ವಿಸ್ತರಣೆಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸ್ವಲ್ಪ ಉತ್ಸಾಹವಿದ್ದರೂ ದೇವೇಗೌಡರದ್ದು ಬೇರೆಯದ್ದೇ ಲೆಕ್ಕಾಚಾರ | ಸಿದ್ದರಾಮಯ್ಯ ಅವರಿಗೆ ಸಂಪುಟ ವಿಸ್ತರಣೆ ಮಾಡುವ ಮನಸ್ಸಿದ್ದರೂ ಗೌಡರ ಕುಟುಂಬಕ್ಕೆ ಎಷ್ಟುದಿನ ಸಾಧ್ಯವೋ ಅಷ್ಟುದಿನ ಮುಂದೂಡುವ ಮನಸ್ಸಿದೆ ಎನ್ನಲಾಗಿದೆ.
ಬೆಂಗಳೂರು (ಅ. 09): ಸಂಪುಟ ವಿಸ್ತರಣೆಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸ್ವಲ್ಪ ಉತ್ಸಾಹವಿದ್ದರೂ ಕೂಡ ದೆಹಲಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ…ರನ್ನು ಕರೆಸಿಕೊಂಡ ಜೆಡಿಎಸ್ನ ಪರಮೋಚ್ಚ ನಾಯಕ ಎಚ್ ಡಿ ದೇವೇಗೌಡರು ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆಗೆ ಕೈ ಹಾಕಬೇಡಿ.
ಬಂಡಾಯ ಆಗೋದು ನಿಶ್ಚಿತ. ಒಂದಿಲ್ಲೊಂದು ಕಾರಣ ನೀಡಿ ಮುಂದೂಡಿ ಎಂದು ಸಲಹೆ ನೀಡಿ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತು ರಾಜ್ಯದಲ್ಲಿ ಉಪ ಚುನಾವಣೆಗಳಲ್ಲಿ ವಿಜಯ ಸಿಕ್ಕ ನಂತರ ವಿಸ್ತರಣೆ ಮಾಡಿದರೆ ಬಿಜೆಪಿ ನೀರು ಕದಡುವ ಪ್ರಯತ್ನ ಮಾಡಲಿಕ್ಕಿಲ್ಲ ಎಂದು ಗೌಡರು ಹೇಳಿದ್ದಾರಂತೆ.
ಮರುದಿನ ಸಂಜೆ ತಾಜ್ ಪ್ಯಾಲೇಸ್ ಹೋಟೆಲ…ನಲ್ಲಿ ಊಟಕ್ಕೆ ಸಿಕ್ಕಿದ್ದ ರಾಹುಲ… ಗಾಂಧಿ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ 10 ನಿಮಿಷ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ತಂದೆ ಹೇಳಿದ್ದನ್ನೇ ಕಾಂಗ್ರೆಸ್ ಅಧ್ಯಕ್ಷರಿಗೆ ಹೇಳಿದ್ದಾರಂತೆ. ಇವೆಲ್ಲದರಿಂದಾಗಿ ಬಹುತೇಕ ಡಿಸೆಂಬರ್ 15ರ ವರೆಗೆ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. ಸಿದ್ದರಾಮಯ್ಯ ಅವರಿಗೆ ಸಂಪುಟ ವಿಸ್ತರಣೆ ಮಾಡುವ ಮನಸ್ಸಿದ್ದರೂ ಗೌಡರ ಕುಟುಂಬಕ್ಕೆ ಎಷ್ಟುದಿನ ಸಾಧ್ಯವೋ ಅಷ್ಟುದಿನ ಮುಂದೂಡುವ ಮನಸ್ಸಿದೆ ಎನ್ನಲಾಗಿದೆ.
-ಪ್ರಶಾಂತ್ ನಾತು
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ