ಭಾರತ ಯಾವುದೇ ಧರ್ಮ, ಭಾಷೆಗೆ ಸೇರಿದ್ದಲ್ಲ: ಗಡ್ಕರಿ!
ಭಾರತಕ್ಕೆ ಧರ್ಮವಿಲ್ಲ, ಜಾತಿಯಿಲ್ಲ, ಭಾಷೆಯಿಲ್ಲ ಎಂದ ನಿತಿನ್ ಗಡ್ಕರಿ| ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ| ಬಿಜೆಪಿ ಯಾವತ್ತೂ ಜಾತಿ, ಧರ್ಮದ ರಾಜಕಾರಣ ಮಾಡಿಲ್ಲ ಎಂದ ಸಚಿವ| ‘ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮದವರೂ ಸಹಬಾಳ್ವೆ ನಡೆಸುತ್ತಿದ್ದಾರೆ’| ನಮ್ಮ ಏಕತೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಗಡ್ಕರಿ
ನವದೆಹಲಿ(ಜ.19): ಭಾರತವನ್ನು ಹಿಂದು ದೇಶ ಎಂದು ಘೋಷಿಸಬೇಕು ಎಂಬ ಬೇಡಿಕೆ ಕೆಲವೊಮ್ಮೆ ಬಿಜೆಪಿ ನಾಯಕರಿಂದಲೇ ಬರುವುದನ್ನು ಕೇಳಿದ್ದೀವಿ. ಇದಕ್ಕೆ ಅಪವಾದ ಎಂಬಂತೆ ಭಾರತ ಯಾವುದೇ ನಿರ್ಧಿಷ್ಟ ಧರ್ಮ, ಜಾತಿ ಅಥವಾ ಭಾಷೆಗೆ ಸೇರಿದ್ದಲ್ಲ ಎಂಬ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ ಅಚ್ಚರಿ ಮೂಡಿಸಿದೆ.
ಬಿಜೆಪಿ ಯಾವತ್ತೂ ಜಾತಿ, ಧರ್ಮದ ವಿಷಯಗಳನ್ನು ಮುಂದೆ ಮಾಡಿ ರಾಜಕಾರಣ ಮಾಡಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಜಾತಿ ಧರ್ಮದ ಆಧಾರದ ಮೇಲೆ ನಾವು ಎಂದಿಗೂ ರಾಜಕೀಯ ಮಾಡಿಲ್ಲ, ಮಾಡುವುದದೂ ಇಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.
ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲ ಧರ್ಮದವರೂ ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಏಕತೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಬಡವರ ಸೇವೆ ಹಾಗೂ ಅಭಿವೃದ್ದಿ ಮುಖ್ಯ, ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ತಾರತಮ್ಯಮ ಮಾಡುವುದಿಲ್ಲ ಎಂದು ಈ ವೇಳೆ ಕೇಂದ್ರ ಸಚಿವರು ಭರವಸೆ ನೀಡಿದರು.