ಶಾಸಕ ಹತ್ಯೆ ಪ್ರಕರಣ: ಬಿಜೆಪಿಯ ಇಬ್ಬರು ಕಾರ್ಯಕರ್ತರ ಅರೆಸ್ಟ್
ಟಿಎಂಸಿಯ ಶಾಸಕ ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಕೋಲ್ಕತ್ತಾ, [ಫೆ.10]: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಶನಿವಾರ ನಡೆದ ಟಿಎಂಸಿಯ ಕೃಷ್ಣಗಂಜ್ ಶಾಸಕ ಸತ್ಯಜಿತ್ ಬಿಸ್ವಾಸ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ಸೇರಿ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಪೈಕಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಬಿಜೆಪಿ ಕಾರ್ಯಕರ್ತರು ಎನ್ನಲಾಗಿದೆ. ತಮ್ಮ ವಿಧಾನಸಭಾ ಕ್ಷೇತ್ರ ಫೂಲ್ಪುರ್ನಲ್ಲಿ ಶನಿವಾರ ಸಂಜೆ ಆಯೋಜನೆಗೊಂಡಿದ್ದ ಸರಸ್ವತಿ ಪೂಜೆ ಕಾರ್ಯಕ್ರಮ ಉದ್ಘಾಟಿಸಲು ಸತ್ಯಜಿತ್ ಬಿಸ್ವಾಸ್ ಆಗಮಿಸಿದ್ದರು.
ರಾಜಕೀಯ ಅಲ್ಲೋಲಕಲ್ಲೋಲ: ಗುಂಡಿಕ್ಕಿ ಶಾಸಕನ ಮರ್ಡರ್!
ಆಗ ಅಪರಿಚಿತರು ತುಂಬಾ ಹತ್ತಿರದಿಂದ ಅವರ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದರು. ಪ್ರಕರಣದಲ್ಲಿ ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ.
ಇನ್ನೂ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಶಾಸಕನ ಹತ್ಯೆಯಲ್ಲಿ ಬಳಸಲಾಗಿದ್ದ ನಾಡಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೋಟೋ: ಹತ್ಯೆಯಾದ ಶಾಸಕ ಸತ್ಯಜಿತ್ ಬಿಸ್ವಾಸ್.