'ಫ್ಯಾಸಿಸ್ಟ್ ಮೋದಿಯಿಂದ ಕಾಶ್ಮೀರ ಹೋರಾಟ ಹತ್ತಿಕ್ಕಲಾಗಲ್ಲ'!
'ಭಾರತದ ಫ್ಯಾಸಿಸ್ಟ್ ಸರ್ಕಾರ ಕಾಶ್ಮೀರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ'| ಮೋದಿ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್| ಮೋದಿ ಸರ್ಕಾರ ಹಿಂದೂ ಉಗ್ರವಾದಿ ನೀತಿ ಅನುಸರಿಸುತ್ತಿದೆ ಎಂದ ಇಮ್ರಾನ್| 'ಮೋದಿ ಸರ್ಕಾರದಿಂದ ಕಾಶ್ಮೀರ ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ'|ಕಾಶ್ಮೀರ ಕುರಿತ ವಿಶ್ವ ಸಮುದಾಯದ ಮೌನ ಸಲ್ಲ ಎಂದ ಪಾಕ್ ಪ್ರಧಾನಿ|
ಇಸ್ಲಾಮಾಬಾದ್(ಆ.16): ಭಾರತದಲ್ಲಿರುವ ಫ್ಯಾಸಿಸ್ಟ್ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಇದು ಯಶಸ್ವಿಯಾಗುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
"
370ನೇ ವಿಧಿಯನ್ನು ತೆಗೆದು ಹಾಕಿರುವುದು ಉಗ್ರಗಾಮಿ ಕ್ರಮ ಎಂದಿರುವ ಇಮ್ರಾನ್, ಫ್ಯಾಸಿಸ್ಟ್ ಮನೋಭಾವದ ಪ್ರಧಾನಿ ಮೋದಿ ಅವರು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಹಿಂದೂ ಉಗ್ರವಾದಿ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕಾಶ್ಮಿರಿಗರ ಮುಂದೆ ಮಂಡಿಯೂರಲಿದೆ ಎಂದು ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ಮೋದಿ ಅವರ ಫ್ಯಾಸಿಸ್ಟ್ ತಂತ್ರ ವಿಫಲವಾಗಿದ್ದು, ಭವಿಷ್ಯದಲ್ಲಿ ಈ ನಿರ್ಧಾರಕ್ಕೆ ಭಾರತ ತಕ್ಕ ಬೆಲೆ ತೆರಲಿದೆ ಎಂದೂ ಇಮ್ರಾನ್ ತಮ್ಮ ಟ್ವೀಟ್'ನಲ್ಲಿ ಹರಿಹಾಯ್ದಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಕುರಿತ ವಿಶ್ವ ಸಮುದಾಯದ ಮೌನವನ್ನು ಪ್ರಶ್ನಿಸಿರುವ ಇಮ್ರಾನ್, ನಿರ್ದಿಷ್ಟ ಪ್ರದೇಶವೊಂದರ ಜನರ ಅಳಲನ್ನು ಕೇಳಿಸಿಕೊಳ್ಳದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಆರೋಪಿಸಿದ್ದಾರೆ.