ಸರ್ಕಾರದ ನಿರ್ಧಾರಕ್ಕೆ ಸಚಿವರಿಂದಲೇ ಬಹಿರಂಗ ಅಸಮಾಧಾನ
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಅನೇಕ ಸಚಿವರುಗಳು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬೆಂಗಳೂರು : ಅಧಿವೇಶನ ಮುಗಿದ ಬೆನ್ನಲ್ಲೇ ಸರ್ಕಾರದಿಂದ ನಡೆದ ಐಎಎಸ್ ಅಧಿಕಾರಿಗಳ ವರ್ಗಾವಣೆ ಗೆ ಅನೇಕ ಸಚಿವರುಗಳು ಅಸಮಾಧಾನ ಹೊರಹಾಕಿದ್ದಾರೆ.
ಯಾವುದೇ ಸಚಿವರ ಗಮನಕ್ಕೆ ತಾರದೇ ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಬಳಿ ಸಚಿವ ಯು.ಟಿ. ಖಾದರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಳಿಯೂ ಕೂಡ ಈ ಸಂಬಂಧ ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಿಎಂ ಕುಮಾರಸ್ವಾಮಿ ಜತೆ ಮಾತುಕತೆ ನಡೆಸುವ ಬಗ್ಗೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಭರವಸೆ ನೀಡಿದ್ದಾರೆ.
ಹಿಂದೆ ಕಪಿಲ್ ಮೋಹನ್ ಅವರನ್ನು ನನ್ನ ಗಮನಕ್ಕೆ ತಾರದೇ ವರ್ಗಾವಣೆ ಮಾಡಿದ್ದರು. ಈಗ ನನ್ನ ಗಮನಕ್ಕೆ ತಾರದೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ನೇಮಕ ಮಾಡಿದ್ದಾರೆ. ಹೀಗೆ ವರ್ಗಾವಣೆ ಮುಂದುವರಿದರೆ ಆಡಳಿತದ ಮೇಲಿನ ಹಿಡಿತ ಕೈತಪ್ಪುತ್ತದೆ.
ಇಲಾಖೆಯ ಸಾಧನೆಗೆ ಸಚಿವರೇ ಉತ್ತರದಾಯಿಗಳಾಗಿದ್ದು, ಹೀಗಿರುವಾಗ ಅಧಿಕಾರಿಗಳ ವರ್ಗಾವಣೆ ಮಾಡುವಾಗ ಕನಿಷ್ಠ ಚರ್ಚೆ ಮಾಡದಿದ್ದರೆ ಹೇಗೆ ಎಂದು ಹೇಳಿದ್ದಾರೆ. ಇನ್ನು ಇದೇ ರೀತಿ ಹಲವು ಸಚಿವರಿಂದ ಅಸಮಾಧಾನ ವ್ಯಕ್ತವಾಗಿರುವ ಸುವರ್ಣ ನ್ಯೂಸ್ ಡಾಟ್ ಕಾಂಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.