ಸಚಿವ ಡಿಸಿ ತಮ್ಮಣ್ಣರಿಂದ ಶಾಕಿಂಗ್ ನ್ಯೂಸ್
ಸಾರಿಗೆ ಸಚಿವ ಡಿಸಿ ತಮ್ಮಣ್ಣ ಇದೀಗ ಬಿಗ್ ಶಾಕ್ ಒಂದನ್ನು ನೀಡಿದ್ದಾರೆ. ಸಚಿವರು ಹೇಳಿರುವಂತೆ ಬಿಎಂಟಿಸಿ ಅಧಿಕಾರಿಗಳು ಲಂಚ ಸ್ವೀಕಾರ ಮಾಡಿರುವ ಸಾಧ್ಯತೆ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು : ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ಗಳನ್ನು ಪಡೆಯುವ ಸಂಬಂಧ ಹೈದರಾಬಾದ್ ಮೂಲದ ಕಂಪನಿಯೊಂದಿಗೆ ಅಂತಿಮ ಒಪ್ಪಂದ ಮಾಡಿಕೊಳ್ಳುವಂತೆ ಬಿಎಂಟಿಸಿ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರುತ್ತಿದ್ದು, ಅವರು ಲಂಚ ತೆಗೆದುಕೊಂಡಿರುವ ಅನುಮಾನವಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದಿನ ಸರ್ಕಾರವು 80 ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲು ಟೆಂಡರ್ ಕರೆದು, ಹೈದರಾಬಾದ್ ಕಂಪನಿಗೆ ಗುತ್ತಿಗೆ ನೀಡಿತ್ತು. ಸರ್ಕಾರದ ಮಾರ್ಗದರ್ಶಿ ಮತ್ತು ಬಿಎಂಟಿಸಿ ಸಲಹೆಯಂತೆ ಹೈದರಾಬಾದ್ ಮೂಲದ ಕಂಪನಿಯ 80 ಬಸ್ಗಳ ಪೈಕಿ 15ಕ್ಕೂ ಹೆಚ್ಚು ಬಸ್ಗಳು ಸಿದ್ಧಗೊಂಡಿವೆ. ಇವುಗಳನ್ನು ಬಿಎಂಟಿಸಿ ಸುಪರ್ದಿಗೆ ತೆಗೆದುಕೊಳ್ಳುವ ಸಂಬಂಧ ಅಂತಿಮ ಒಪ್ಪಂದ ಮಾಡಿಕೊಳ್ಳಬೇಕಿದೆ. ಆದರೆ, ಅಧಿಕಾರಿಗಳು ಇದಕ್ಕೆ ಒತ್ತಡ ಹೇರುತ್ತಿದ್ದಾರೆ. ಲಂಚ ತೆಗೆದುಕೊಂಡಿರುವ ಸಾಧ್ಯತೆ ಇರಬಹುದು. ಅಧಿಕಾರಿಗಳನ್ನು ಹೇಗೆ ಕೇಳಲಿ ಎಂದು ಹೇಳಿದರು.
ಬಸ್ ಸಿದ್ಧವಾಗಿದ್ದರೂ ಸಾರಿಗೆ ಇಲಾಖೆ ಅಂತಿಮ ಅನುಮೋದನೆ ನೀಡುತ್ತಿಲ್ಲ. ಇದರ ಹಿಂದೆ ನಿಮ್ಮ (ಸಚಿವರ) ಅಳಿಯನ ಮೇಲೆ ಕಮಿಷನ್ ಆರೋಪ ಕೇಳಿಬಂದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ತಮ್ಮಣ್ಣ, ಯಾವ ಅಳಿಯ ಲಂಚ ಕೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ತೀಕ್ಷ$್ಣವಾಗಿ ಹೇಳಿದರು.
ಗುತ್ತಿಗೆ ಪಡೆಯುವ ಬದಲು ಸರ್ಕಾರವೇ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಿ ಓಡಿಸಲು ಚಿಂತನೆ ನಡೆಸಿದೆ. ಹೀಗಾಗಿ ಬಸ್ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಬಸ್ ಪಡೆದರೆ ಹೈದರಾಬಾದ್ ಕಂಪನಿಗೆ ಬೆಂಗಳೂರಿನ ಶಾಂತಿನಗರ ಬಸ್ ಘಟಕದ ಜಾಗ ಸೇರಿದಂತೆ ಹಲವು ಸೌಲಭ್ಯಗಳನ್ನು ಅವರಿಗೆ ನೀಡಬೇಕಾಗುತ್ತದೆ. ಇದರಿಂದ ರಾಜ್ಯ ಸರ್ಕಾರದ ಅತ್ಯಮೂಲ್ಯ ಜಮೀನು ಖಾಸಗಿ ಪಾಲಾಗಬಹುದು ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ಮಗನಿಗೆ ಮಂಡ್ಯದಲ್ಲಿ ಟಿಕೆಟ್ ಕೇಳಿಲ್ಲ. ಆತ ಲೋಕಸಭೆ ಟಿಕೆಟ್ ಆಕಾಂಕ್ಷಿಯೂ ಅಲ್ಲ. ಸಚಿವ ಪುಟ್ಟರಾಜು ಮತ್ತು ಮಾಜಿ ಸಚಿವ ಚಲುವರಾಯಸ್ವಾಮಿ ಕಿತ್ತಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ. ಇಬ್ಬರ ನಡುವಿನ ಕಿತ್ತಾಟ ಹೊಸತಲ್ಲ.
ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ