ಅರಸಿಕರಲ್ಲೂ ರಸಿಕತೆ ಹುಟ್ಟಿಸಿದ ಕವಿ ಎಂ ಎನ್ ವ್ಯಾಸರಾವ್ ಇನ್ನಿಲ್ಲ
ಖ್ಯಾತ ಗೀತರಚನೆಕಾರ, ಕವಿ, ಕಥೆಗಾರ ಎಂ ಎನ್ ವ್ಯಾಸರಾವ್ ಅಸ್ತಂಗತರಾಗಿದ್ದಾರೆ. ಇವರು ಬರೆದ ಶುಭ ಮಂಗಳ ಚಿತ್ರದ ಸೂರ್ಯಂಗೂ, ಚಂದ್ರಂಗೂ ಬಂದಾರೆ ಮುನಿಸು... ಭಾವಗೀತೆ ‘ನೀನಿಲ್ಲದೇ ನನಗೇನಿದೆ’, ಗಮನ ಸೆಳೆಯುವಂತದ್ದು.
ಬೆಂಗಳೂರು (ಜು. 15): ಖ್ಯಾತ ಗೀತರಚನೆಕಾರ, ಕವಿ, ಕಥೆಗಾರ ಎಂ ಎನ್ ವ್ಯಾಸರಾವ್ ಅಸ್ತಂಗತರಾಗಿದ್ದಾರೆ.
ಇವರು ಬರೆದ ಶುಭ ಮಂಗಳ ಚಿತ್ರದ ಸೂರ್ಯಂಗೂ, ಚಂದ್ರಂಗೂ ಬಂದಾರೆ ಮುನಿಸು.... ಹಾಡು ಗಮನ ಸೆಳೆಯುವಂತದ್ದು. ಅದೇ ರೀತಿ ‘ನೀನಿಲ್ಲದೇ ನನಗೇನಿದೆ’, ‘ಹೃದಯವನೆ ಕಾಣದಾದ ಕನಸುಗಳ ನೂಕಿದೆ’, ‘ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ’ ಮುಂತಾದ ಭಾವಗೀತೆಗಳಿಂದಲೂ, ‘ಇವಳೇ ಅವಳು, ಅವಳೇ ಇವಳು ಮನದಲ್ಲಿ ನಿಂತವಳು’, ‘ಆ ಸೂರ್ಯ ಚಂದ್ರ ನಕ್ಷತ್ರ ಮಾಲೆ ಬಂದಂತೆ ನೀನು’, ‘ನೆನಪಿನ ಕನಸಿನಲಿ ಭಾವನ ಜೀವನ’, ‘ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮಶೃತಿ’, ‘ಚಂದ ಚಂದ ಸಂಗಾತಿ ನೋಟವೆ ಚಂದ’, ‘ನೀನೇ ನನ್ನ ಕಾವ್ಯ ಕನ್ನಿಕೆ’, ‘ಯುಗಯುಗಗಳೆ ಸಾಗಲಿ ನಮ್ಮ ಪ್ರೀತಿ ಶಾಶ್ವತ’ ಮುಂತಾದ ನೂರಾರು ಚಿತ್ರಗೀತೆಗಳಿಂದಲೂ ಎಂ. ಎನ್. ವ್ಯಾಸರಾಯರು ಸಂಗೀತಪ್ರಿಯರಿಗೆ ಆಪ್ತರಾಗಿದ್ದಾರೆ.
ಎಂ.ಎನ್. ವ್ಯಾಸರಾವ್ ಅವರು ಜನವರಿ 27, 1945 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ 34 ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಸಾಹಿತ್ಯ ರಚನೆ ಮತ್ತಿತರ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ವ್ಯಾಸರಾವ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.