ಉತ್ತರದಿಂದ ದಕ್ಷಿಣದತ್ತ ಮಿಡತೆ ಸೇನೆ, ರಾಜ್ಯದಲ್ಲಿ ದೇವರಿಗೆ ಬಿಡುಗಡೆ: ಮೇ. 27ರ ಟಾಪ್ 10 ಸುದ್ದಿ!
ಇತ್ತ ದೇಶವ್ಯಾಪಿ ಕೊರೋನಾ ವೈರಸ್ ಅಪಾರ ಸಾವು ನೋವು ಉಂಟು ಮಾಡುತ್ತಿದ್ದರೆ, ಅತ್ತ ಮಿಡತೆಗಳ ಹಿಂಡು ಜನರನ್ನು ಮತ್ತಷ್ಟು ಭಯ ಬೀತರನ್ನಾಗಿಸಿದೆ. ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೈನಿಕರಿಗೆ ಯುದ್ಧಕ್ಕೆ ಸಜ್ಜಾಗುವಂತೆ ಸೂಚಿಸಿದ್ದು ಮತ್ತೊಂದು ತಲೆ ನೋವಾಗಿ ಪರಿಣಮಿಸಿದೆ. ಇನ್ನು ರಾಜ್ಯದಲ್ಲಿ ಮೇ. 31ರ ಬಳಿಕ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳನ್ನು ತೆರೆಯಲು ಸಿಎಂ ಯಡಿಯೂರಪ್ಪ ಆದೇಶಿಸಿದ್ದು, ಭಕ್ತರಿಗೆ ಕೊಂಚ ನೆಮ್ಮದಿ ನೀಡಿದೆ. ಇವೆಲ್ಲವೂ ಸೇರಿದಂತೆ ಮೇ. 27ರ ಟಾಪ್ 10 ಸುದ್ದಿಗಳು ಇಲ್ಲಿವೆ.
ಕೊರೋನಾ ಎಫೆಕ್ಟ್: ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರ್ಕಾರ, ದೇಶದಲ್ಲಿಯೇ ಮೊದಲ ಪ್ರಯತ್ನ
ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸ್ಥಿತಿಗತಿಯನ್ನು ಸಮೀಕ್ಷೆ ನಡೆಸುವ ಮೂಲಕ ಹೆಲ್ತ್ ರಿಜಿಸ್ಟರ್ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಲ್ತ್ ರಿಜಿಸ್ಟರ್ ಬಗ್ಗೆ ಹದಿನೆಂಟು ವಿಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ ತಜ್ಞರ ಜೊತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಈ ಹೆಲ್ತ್ ರಿಜಿಸ್ಟರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ದೇಶದ ಆರ್ಥಿಕತೆಗೆ ಕೊರೋನಾಘಾತ : 30 ಲಕ್ಷ ಕೋಟಿ ನಷ್ಟ!
ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ದೇಶದ ಆರ್ಥಿಕತೆಗೆ ಎಷ್ಟುನಷ್ಟವಾಗಿದೆ ಎಂಬುದರ ಮೊದಲ ಅಧಿಕೃತ ಅಂದಾಜು ಕೊನೆಗೂ ಹೊರಬಿದ್ದಿದೆ. ಕೋವಿಡ್-19 ಸಮಸ್ಯೆ ಆರಂಭವಾದ ನಂತರ ಒಟ್ಟಾರೆ ಇಲ್ಲಿಯವರೆಗೆ ದೇಶಕ್ಕೆ 30.3 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ಎಸ್ಬಿಐನ ಇಕೋರಾರಯಪ್ ವಿಭಾಗದ ಅಧ್ಯಯನ ವರದಿ ಹೇಳಿದೆ.
ಉತ್ತರ ಭಾರತ ಆಯ್ತು ಈಗ ರಾಜ್ಯಕ್ಕೂ ಮಿಡತೆ ಸೇನೆ ಭೀತಿ!
ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಭಾರಿ ಆರ್ಭಟ ನಡೆಸಿರುವ ಲಕ್ಷಾಂತರ ಮಿಡತೆಗಳಿರುವ ಹಿಂಡು ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಸೋಮವಾರ ಕಾಲಿಟ್ಟಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಗಾಳಿಯು ದಕ್ಷಿಣದತ್ತ ಬೀಸತೊಡಗಿದರೆ ಈ ಮಾರಕ ಮಿಡತೆ ಹಿಂಡು ರಾಜ್ಯದ ಬೀದರ್ಗೆ ಆಗಮಿಸುವ ಆತಂಕ ಹುಟ್ಟಿಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಮಿಡತೆ ದಾಳಿಗೆ ಪೂರ್ವ ಸಿದ್ಧತೆ ಆರಂಭಿಸಿದೆ.
ಚೀನಾ ಅಧ್ಯಕ್ಷ ಯುದ್ಧ ಕಹಳೆ: ಸನ್ನದ್ಧರಾಗುವಂತೆ ಸೇನೆಗೆ ಜಿನ್ಪಿಂಗ್ ಸೂಚನೆ!
ಭಾರತದ ಜೊತೆ ಗಡಿ ಕ್ಯಾತೆ, ಅಮೆರಿಕದ ಜೊತೆ ವ್ಯಾಪಾರ ಹಾಗೂ ಕೊರೋನಾ ಬಿಕ್ಕಟ್ಟು, ತೈವಾನ್ ಮೇಲೆ ಅಧಿಪತ್ಯ ಸ್ಥಾಪಿಸುವ ಯತ್ನ ಮತ್ತು ಹಾಂಕಾಂಗ್ನಲ್ಲಿ ಪ್ರಜಾಪ್ರಭುತ್ವ ಮುಗಿಸುವ ಯತ್ನ ನಡೆಸುತ್ತಿರುವ ಹೊತ್ತಿನಲ್ಲೇ ಚೀನಾ ಇದೀಗ ನೇರಾನೇರ ಯುದ್ಧದ ಮಾತುಗಳನ್ನು ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೇಲ್ಕಂಡ ಎಲ್ಲಾ ವಿಷಯ ಸಂಬಂಧ ಚೀನಾ ಹಲವು ದಿನಗಳಿಂದ ಶೀತಲ ಸಮರ ನಡೆಸಿಕೊಂಡೇ ಬಂದಿತ್ತಾದರೂ, ತಮ್ಮ ಸೇನಾ ನಾಯಕರನ್ನು ಉದ್ದೇಶಿಸಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಡಿರುವ ಮಾತುಗಳು, ಎಲ್ಲಾ ದೇಶಗಳಿಗೂ ಎಚ್ಚರಿಕೆ ಸಂದೇಶ ರವಾನಿಸುವ ಯತ್ನ ಎನ್ನಲಾಗಿದೆ.
ಸಂಸದರ ನಿಧಿ ಬಳಕೆ: ಪ್ರತಾಪ್ ಸಿಂಹ ಫಸ್ಟ್, ಸುಮಲತಾ ದ್ವಿತೀಯ!
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಗೆ ಅಧಿಕಾರ ವಹಿಸಿ ಮೇ 30ಕ್ಕೆ ಒಂದು ವರ್ಷ ತುಂಬುವ ಈ ಸಂದರ್ಭದಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆಯ ವಿಚಾರದಲ್ಲಿ ರಾಜ್ಯದ 28 ಸಂಸದರ ಪೈಕಿ ಮೈಸೂರು-ಕೊಡಗು ಕ್ಷೇತ್ರದ ಪ್ರತಾಪ್ ಸಿಂಹ ಮುಂಚೂಣಿಯಲ್ಲಿ ನಿಂತಿದ್ದಾರೆ. ನಂತರದ ಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಇದ್ದಾರೆ.
ಕೊರೋನಾ ಅಟ್ಟಹಾಸದ ನಡುವೆ ದೇಶಕ್ಕೆ ನೆಮ್ಮದಿಯ ಸುದ್ದಿ ಕೊಟ್ಟ ತಜ್ಞರು!
ದೇಶದಲ್ಲಿ ಕೊರೋನಾ ವೈರಸ್ ಜೂನ್ ಆರಂಭದಿಂದ ಜುಲೈ ಮಧ್ಯಭಾಗದವರೆಗೆ ಗರಿಷ್ಠ ಮಟ್ಟಕ್ಕೆ ಹೋಗಬಹುದು. ಕೇರಳ, ಪಂಜಾಬ್ ಹಾಗೂ ಹರಾರಯಣಗಳು ಈಗಾಗಲೇ ಆ ಗಡಿಯನ್ನು ದಾಟಿರುವಂತೆ ಕಾಣುತ್ತಿದೆ. ಒಂದು ವೇಳೆ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡದಿದ್ದರೆ 80ರಿಂದ 1 ಲಕ್ಷ ಮಂದಿ ಸಾವಿಗೀಡಾಗುವ ಅಪಾಯವಿತ್ತು ಎಂದು ಹೈದರಾಬಾದ್ನಲ್ಲಿರುವ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ನಿರ್ದೇಶಕ ಪ್ರೊ. ಜಿ.ವಿ.ಎಸ್. ಮೂರ್ತಿ ಅವರು ಹೇಳಿದ್ದಾರೆ.
ದೇವರಿಗೆ ಬಿಡುಗಡೆ: ರಾಜ್ಯದಲ್ಲಿ ದೇವಸ್ಥಾನ, ಚರ್ಚ್, ಮಸೀದಿ ತೆರೆಯಲು ಸಿಎಂ ಆದೇಶ!
ಮೇ.31 ರ ಬಳಿಕ ದೇವಸ್ಥಾನ, ಮಸೀದಿ, ಚರ್ಚ್ಗಳನ್ನ ಓಪನ್ ಮಾಡುತ್ತೇವೆ. ದೇವಸ್ಥಾನ, ಚರ್ಚ್ ಮಸೀದಿ ಎಲ್ಲವೂ ಒಂದೇ, ದೇಶದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಹೀಗಾಗಿ ದೇವಸ್ಥಾನ, ಮಸೀದಿ, ಚರ್ಚ್ಗಳನ್ನ ತೆರೆಯುತ್ತಿದ್ದೇವೆ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಸರ್ಕಾರದ ವಿರುದ್ಧ ಮುಗಿಬಿದ್ದ ಮಾಜಿ ಸಿಎಂಗಳು
ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಸರಿಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ನಾಮಕರಣಕ್ಕೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ರಾಜಮೌಳಿ ರಾಮಾಯಣದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು, ಫಸ್ಟ್ ಲುಕ್ ರಿವೀಲ್!
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.ಈ ನಡುವೆ ಅಭಿಮಾನಿಗಳು ರಾಜಮೌಳಿಗೆ ರಾಮಾಯಣ ಮತ್ತು ಮಹಾಭಾರತ ಸಿನಿಮಾ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.ಬಾಹುಬಲಿ ಸಿನಿಮಾ ನಂತರ ರಾಜಮೌಳಿ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಪೌರಾಣಿಕ ಸಿನಿಮಾಗಳನ್ನು ಅದ್ಭುತವಾಗಿ ಕಟ್ಟಿಕೊಡಲಿದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ.
ಭೀಕರ ಅಪಘಾತ; ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ವಿನ್ನರ್ ಮೆಬೀನಾ ದುರ್ಮರಣ
ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4ರ ವಿನ್ನರ್ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹುಟ್ಟೂರು ಕೊಡಗಿಗೆ ತೆರಳಿದ್ದ ವೇಳೆ ಈ ಅಪಘಾತವಾಗಿದೆ.