ಕೆಂಪು ಭಯೋತ್ಪಾದನೆಗೆ ಶೀಘ್ರ ಇತಿಶ್ರೀ: ರಾಜನಾಥ್!
ಮೂರು ವರ್ಷದಲ್ಲಿ ಎಡಪಂಥೀಯ ಭಯೋತ್ಪಾದನೆಗೆ ಇತಿಶ್ರೀ! ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ! ರ್ಯಾಪಿಡ್ ಆ್ಯಕ್ಷನ್ ಫೋರ್ಸ್ 26ನೇ ವಾರ್ಷಿಕೋತ್ಸವ ಕಾರ್ಯಕ್ರಮ! ಎಡಪಂಥೀಯ ಹಿಂಸಾಚಾರ ಮಟ್ಟ ಹಾಕುವಲ್ಲಿ ಪೊಲೀಸ್ ಪಡೆಗಳ ಕಾರ್ಯ ಶ್ಲಾಘನೀಯ
ಲಕ್ನೋ(ಅ.7): ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಎಡಪಂಥೀಯ ಭಯೋತ್ಪಾದನೆಯನ್ನು ಸಂಪೂರ್ಣ ಮಟ್ಟ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರ್ಯಾಪಿಡ್ ಆ್ಯಕ್ಷನ್ ಫೋರ್ಸ್(ಆರ್ ಎಎಫ್)ನ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ಕ್ರೀಯೆ ಕೂಡ ಕ್ಷಿಪ್ರವಾಗಿಬೇಕು ಮತ್ತು ತ್ವರಿತವಾಗಿರಬೇಕು ಎಂದು ಹೇಳಿದ್ದಾರೆ.
ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ 10-12 ಜಿಲ್ಲೆಗಳಿಗಷ್ಟೇ ಸಿಮೀತವಾಗಿದೆ. ಈ ಹಿಂದೆ 126 ಜಿಲ್ಲೆಗಳು ನಕ್ಸಲ್ ಪೀಡಿತವಾಗಿದ್ದವು. ನಿಮ್ಮ ಹಾಗೂ ರಾಜ್ಯ ಪೊಲೀಸ್ ಪಡೆಗಳ ಕಠಿಣ ಶ್ರಮದಿಂದ ಮುಂದಿನ ಎರಡ್ಮೂರು ವರ್ಷಗಳಲ್ಲಿ ಭಾರತ ಸಂಪೂರ್ಣ ನಕ್ಸಲ್ ಮುಕ್ತವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಭದ್ರತಾ ಪಡೆಗಳು ಈ ವರ್ಷ 131 ನಕ್ಸಲರನ್ನು ಮತ್ತು ಉಗ್ರರನ್ನು ಹತ್ಯೆ ಮಾಡಿವೆ ಮತ್ತು ಇದೇ ವೇಳೆ 58 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ದೇಶದಲ್ಲಿ ಎಡಪಂಥೀಯ ಹಿಂಸಾಚಾರವನ್ನು ಮಟ್ಟ ಹಾಕಲು ಕೇಂದ್ರ ಮೀಸಲು ಹಾಗೂ ರಾಜ್ಯ ಪೊಲೀಸ್ ಪಡೆಗಳು ಮಾಡುತ್ತಿರುವ ಅತ್ಯುತ್ತಮ ಕೆಲಸವನ್ನು ಶ್ಲಾಘಿಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದರು.