Asianet Suvarna News Asianet Suvarna News

ಶಬರಿಮಲೆ ಅಯ್ಯಪ್ಪನಿಂದಾಯ್ತು ಲಾಭ ದರ್ಶನ

ಶಬರಿಮಲೆ ಅಯ್ಯಪ್ಪನಿಂದ ಕರ್ನಾಟಕಕ್ಕೆ ಲಾಭದ ದರ್ಶನವಾಗಿದೆ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ದೇವರ ದರ್ಶನಕ್ಕೆ ತೆರಳುವ ಭಕ್ತರಿಗಾಗಿ KSRTC ಆರಂಭಿಸಿದ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. 

KSRTC Volvo Bus Service Bangalore To Sabarimala Gets Good Response
Author
Bengaluru, First Published Jan 2, 2019, 9:42 AM IST

ಬೆಂಗಳೂರು :  ಈ ಬಾರಿ ಕೇರಳದ ಶಬರಿಮಲೆಗೆ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಪ್ರಥಮ ಬಾರಿಗೆ ಬೆಂಗಳೂರು- ಶಬರಿಮಲೆ ಮಾರ್ಗದಲ್ಲಿ ಕಾರ್ಯಾ ಚರಣೆ ಮಾಡುತ್ತಿರುವ ವೋಲ್ವೋ ಬಸ್ ಸೇವೆಗೆ ಅಯ್ಯಪ್ಪ ಭಕ್ತಾದಿಗಳು ಹಾಗೂ ಪ್ರಯಾಣಿಕರಿಂದ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗಮಕ್ಕೆ ಉತ್ತಮ ಆದಾಯವೂ ಬರುತ್ತಿದೆ.

ಈ ವೋಲ್ವೋ ಬಸ್ ಸೇವೆಗೆ ಭಕ್ತಾದಿಗಳು ಹಾಗೂ ಪ್ರಯಾಣಿಕರ ಆಸಕ್ತಿ ಮತ್ತು ಬೇಡಿಕೆಯಿಂದ ಉತ್ತೇಜಿತವಾಗಿರುವ ಕೆಎಸ್ಸಾರ್ಟಿಸಿ, ಮುಂದಿನ ವರ್ಷದಿಂದ ಬೆಂಗಳೂರು-ಶಬರಿಮಲೆ ಮಾರ್ಗದಲ್ಲಿ ವೋಲ್ವೋ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಚಿಂತಿಸಿದೆ. ಕೆಎಸ್ಸಾರ್ಟಿಸಿ ಹಲವು ವರ್ಷಗಳಿಂದ ಬೆಂಗಳೂರು- ಶಬರಿಮಲೆ ಮಾರ್ಗದಲ್ಲಿ ರಾಜಹಂಸ ಮತ್ತು ಸಾಮಾನ್ಯ ಬಸ್(ಕೆಂಪು ಬಸ್) ಕಾರ್ಯಾಚರಣೆ ಮಾಡುತ್ತಿದ್ದರೂ ವೋಲ್ವೋ ಬಸ್ ಸೇವೆ ಆರಂಭಿಸಿರಲಿಲ್ಲ. 

ಈ ಬಾರಿ ಪ್ರಾಯೋಗಿಕ ಎಂಬಂತೆ ಡಿ.1ರಿಂದ  43 ಆಸನ ದ ಒಂದು ವೋಲ್ವೋ ಬಸ್ ಕಾರ್ಯಾಚರಣೆ  ಆರಂಭಿಸಿದೆ. ಹವಾನಿಯಂತ್ರಿತ ಹಾಗೂ ಸುಸಜ್ಜಿತ ಆಸನಗಳು ಸೇರಿದಂತೆ ಹಲವು ಸೌಲಭ್ಯ ಇರುವ ವೋಲ್ವೋ ಬಸ್‌ಗೆ ಅಯ್ಯಪ್ಪ ಭಕ್ತಾದಿಗಳು, ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದಾರೆ.

ಕೇರಳದ ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಘಟ್ಟಪ್ರದೇಶಗಳು ಹೆಚ್ಚಿದ್ದು, ತಿರುವಿನ ರಸ್ತೆಗಳು ಎದುರಾಗುತ್ತವೆ. ಈ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಕಷ್ಟವಾಗುತ್ತದೆ. ಹಾಗಾಗಿ ಈ ಮಾರ್ಗದಲ್ಲಿ ವೋಲ್ವೋ ಬಸ್ ಕಾರ್ಯಾಚರಣೆ ಆರಂಭಿಸಿರಲಿಲ್ಲ. ಈ ಬಾರಿ ಧೈರ್ಯ ಮಾಡಿ ಸಿಂಗಲ್ ಆಕ್ಸೆಲ್‌ನ ಒಂದು ವೋಲ್ವೋ ಬಸ್ ಕಾರ್ಯಾಚರಣೆ ಆರಂಭಿಸಿದ್ದು, ಪ್ರಯಾಣಿಕರಿಂದ ನಿರೀಕ್ಷೆಗೂ ಮೀರಿದು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಶೇಷ ಅನುಮತಿ: ಕೇರಳ ರಾಜ್ಯ ಸಾರಿಗೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ನಡುವಿನ ಅಂತರ್ ರಾಜ್ಯ ಸಾರಿಗೆ ಒಪ್ಪಂದ ಪ್ರಕಾರ ಈ ಬಾರಿ ಶಬರಿಮಲೆ ಮಾರ್ಗದಲ್ಲಿ ಒಂದೂವರೆ ತಿಂಗಳ ಕಾಲ ಬಸ್ ಕಾರ್ಯಾಚರಣೆ ಮಾಡಲು ವಿಶೇಷ ಅನುಮತಿ ಸಿಕ್ಕಿದೆ. ಹಾಗಾಗಿ ಜ. 16ರವರೆಗೂ ವೋಲ್ವೋ ಬಸ್ ಸೇವೆ ಮುಂದುವರಿಯಲಿದೆ. ಈ ಬಸ್ ನಗರದ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಮೈಸೂರು, ಸುಲ್ತಾನ್ ಬತ್ತೇರಿ, ಕ್ಯಾಲಿಕಟ್, ತ್ರಿಶೂರು, ಕೊಟ್ಟಾಯಂ ಮಾರ್ಗದಲ್ಲಿ ಶಬರಿಮಲೆ ತಲುಪಲಿದೆ. ಮತ್ತೆ ಅದೇ ಮಾರ್ಗದಲ್ಲಿ ಬೆಂಗಳೂರು ತಲುಪಲಿದೆ.

ವರದಿ : ಮೋಹನ್ ಹಂಡ್ರಂಗಿ

Follow Us:
Download App:
  • android
  • ios