ಪರಮೇಶ್ವರ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದು ಹೌದಾ?
ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರು ಎರಡು ಕಡೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿಗೆ ಖುದ್ದು ಪರಮೇಶ್ವರ್ ತೆರೆ ಎಳೆದಿದ್ದು, ತಾವು ಕೊರಟಗೆರೆಯಿಂದ ಮಾತ್ರ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರು ಎರಡು ಕಡೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿಗೆ ಖುದ್ದು ಪರಮೇಶ್ವರ್ ತೆರೆ ಎಳೆದಿದ್ದು, ತಾವು ಕೊರಟಗೆರೆಯಿಂದ ಮಾತ್ರ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪರಮೇಶ್ವರ್ ಎರಡು ಕಡೆ ಸ್ಪರ್ಧಿಸಲು ಬಯಸಿದ್ದಾರೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಆಪ್ತರಿಗೆ ಪರಮೇಶ್ವರ್ ಗುರುವಾರ ಈ ವಿಷಯ ಖಚಿತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಟಿಕೆಟ್ ಕೇಳಿರುವ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಕೊರಟಗೆರೆ ಜತೆಗೆ ಪುಲಕೇಶಿನಗರ ಕ್ಷೇತ್ರದಿಂದಲೂ ಸ್ಪರ್ಧಿಸಬಯಸಿದ್ದು, ಈ ಬಗ್ಗೆ ಹೈಕಮಾಂಡ್ ಬಳಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿತ್ತು.
ಆದರೆ, ಈ ವಿಚಾರವನ್ನು ತಮ್ಮ ಆಪ್ತರ ಬಳಿ ಪರಮೇಶ್ವರ್ ಅಲ್ಲಗಳೆದಿದ್ದು, ಕೊರಟಗೆರೆ ಕ್ಷೇತ್ರದಿಂದ ಮಾತ್ರ ತಾವು ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಪುಲಕೇಶಿನಗರ ಕ್ಷೇತ್ರಕ್ಕೆ ಈ ಹಂತದಲ್ಲಿ ಹೋಗಿ ಕಣ ಸಜ್ಜುಪಡಿಸಲು ಸಾಧ್ಯವಿಲ್ಲ. ಈ ಹಂತದಲ್ಲಿ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು ಎಂದು ಮೂಲಗಳು ಹೇಳಿವೆ.