8 ದುಬಾರಿ ಕಾರು ಖರೀದಿಗೆ ಮುಂದಾದ ಕರ್ನಾಟಕ ಸರಕಾರ
ವಿವಿಧ ರೀತಿಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಬೆಂಗಳೂರು : ಆಡಳಿತದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವೆಚ್ಚ ಕಡಿವಾಣ ಸೂತ್ರಕ್ಕೆ ಅಧಿಕಾರಿಗಳು ಕ್ಯಾರೆ ಎನ್ನುವ ಲಕ್ಷಣ ಕಂಡುಬಂದಿಲ್ಲ. ಏಕೆಂದರೆ, ಅಬಕಾರಿ ಇಲಾಖೆಗಾಗಿ ಅಧಿಕಾರಿಗಳಿಂದ ದುಬಾರಿ ಕಾರುಗಳ ಖರೀದಿ ಭರಾಟೆ ಮುಂದುವರೆದಿದೆ.
ಅಬಕಾರಿ ಇಲಾಖೆಯ ಎಂಟು ಮಂದಿ ಜಂಟಿ ಆಯುಕ್ತರಿಗೆ ತಲಾ 10.64 ಲಕ್ಷ ಮೌಲ್ಯದ ಎಂಟು ಕಾರು ಖರೀದಿಗೆ ಅಬಕಾರಿ ಇಲಾಖೆ ಪ್ರಸ್ತಾವನೆ ಕಳುಹಿಸಿದ್ದು, ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಮಹೀಂದ್ರ ಎಕ್ಸ್ಯುವಿ ಡಬ್ಲ್ಯೂ4 ಎಫ್ಡಬ್ಲ್ಯೂಡಿ ಮಾದರಿಯ ವಾಹನಗಳ ಖರೀದಿಗೆ 85.13 ಲಕ್ಷ ಮೊತ್ತದ ಪ್ರಸ್ತಾವನೆಗೆ ಅಂಗೀಕಾರ ನೀಡಲಾಗಿದೆ.
ಆದರೆ, ಪ್ರತಿ ಕಾರಿಗೆ 6.50 ಲಕ್ಷ ರು. ಮಿತಿ ಹಾಗೂ ಹಳೆಯ ವಾಹನ ಬದಲಿಸುವ ಮಾರ್ಗಸೂಚಿ ಪಾಲಿಸುವ ಮೂಲಕ ಖರೀದಿ ಮಾಡುವಂತೆ ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.