ಚುನಾವಣಾ ಅಖಾಡಕ್ಕಿಳಿಯುತ್ತಾರಾ ದೇವೇಗೌಡ್ರು?
ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ ದೇವೇಗೌಡ್ರು | ರಂಗೇರಿದೆ ಚುನಾವಣಾ ಕಣ | ದೊಡ್ಡಗೌಡ್ರ ಲೆಕ್ಕಾಚಾರವೇ ಬೇರೆ
ಬೆಂಗಳೂರು (ಅ. 16): ಅದೃಷ್ಟದ ಬಲದ ಮೇಲೆ ಮಗನನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿರುವ ದೇವೇಗೌಡರು 2019 ರಲ್ಲಿ 89 ನೇ ವಯಸ್ಸಿನಲ್ಲಿ ದಿಲ್ಲಿಯಲ್ಲಿ ಅದೃಷ್ಟ ಪರೀಕ್ಷೆ ಮಾಡುವ ಮೂಡ್ನಲ್ಲಿ ಇದ್ದಾರಂತೆ. ಗೌಡರ ಕುಟುಂಬದ ಒಬ್ಬ ಸದಸ್ಯರೇ ಹೇಳುವ ಪ್ರಕಾರ ಗೌಡರು ಮೊದಲಿಗೆ ಸ್ಪರ್ಧಿಸೋದಿಲ್ಲ ಎಂದು ಹೇಳುತ್ತಿದ್ದವರು ಈಗ ಸರ್ಕಾರ ಬಂದ ಮೇಲೆ ಮತ್ತೆ ಸ್ಪರ್ಧಿಸುವ ಬಗ್ಗೆ ಖಚಿತಪಡಿಸಿದ್ದಾರೆ.
ಆದರೆ ಎಲ್ಲಿಂದ ಎಂದು ಇನ್ನೂ ಪಕ್ಕಾ ಆಗಿಲ್ಲ. ಬಹುತೇಕ ಹಾಸನವೇ ಮೊದಲ ಆದ್ಯತೆ ಆದರೂ ಮೊಮ್ಮಗ ಪ್ರಜ್ವಲ್ನಿಗೆ ಸೇಫ್ ಕ್ಷೇತ್ರ ಹಾಸನ ಬಿಟ್ಟುಕೊಟ್ಟು ಮಂಡ್ಯಕ್ಕೂ ಶಿಫ್ಟ್ ಆಗಬಹುದಂತೆ. 2019 ರಲ್ಲಿ ದೇವೇಗೌಡರ ಅದೃಷ್ಟ ತುಂಬಾ ಚೆನ್ನಾಗಿದೆ ಎಂದು ದೇವೇಗೌಡರ ಕುಟುಂಬದ ಸದಸ್ಯರು ದಿಲ್ಲಿಯಲ್ಲಿ ಖುಷಿಯಿಂದ ಹೇಳಿಕೊಳ್ಳುತ್ತಿದ್ದರು. 90 ರ ಆಸುಪಾಸಿನಲ್ಲೂ ಗೌಡರ ಪಿಕ್ಚರ್ ಅಭಿ ಬಾಕಿ ಹೈ.
ಈಗ ಸದ್ಯಕ್ಕೆ ಒಂದೋ ಎರಡೋ ಸೀಟು ಗೆಲ್ಲುತ್ತಿರುವ ದೇವೇಗೌಡರ ಮುಖ್ಯ ಲಕ್ಷ್ಯ ಇರುವುದು ೫ಕ್ಕಿಂತ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಬಗ್ಗೆ. ಇದರಿಂದ ಮೊದಲನೆಯದಾಗಿ ಪಾರ್ಲಿಮೆಂಟ್ನಲ್ಲಿ ಭಾಷಣ ಮಾಡಲು ಅವಕಾಶ ಸಿಗುತ್ತದೆ. ಎರಡನೆಯದಾಗಿ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ಸನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆ.
ಆದರೆ ಮುಲಾಯಂಗೆ ವಯಸ್ಸಾಗಿದೆ, ಪಕ್ಷದಲ್ಲೇ ಕಿಮ್ಮತ್ತಿಲ್ಲ. ಲಾಲು ಜೈಲಿನಲ್ಲಿದ್ದಾರೆ. ಮಾಯಾವತಿ, ಮಮತಾ, ಕೇಜರಿವಾಲ್ರನ್ನು ಕಾಂಗ್ರೆಸ್ ಒಪ್ಪೋದಿಲ್ಲ. ರಾಹುಲ್ರನ್ನು ಯಾರೂ ಒಪ್ಪುತ್ತಿಲ್ಲ. ನಿತೀಶ್ ಬಿಜೆಪಿ ಜೊತೆಗಿದ್ದಾರೆ. ಹೀಗಿರುವಾಗ ಶುದ್ಧ ಅದೃಷ್ಟದ ಮೇಲೆ ಏನಾದರೂ ನಡೆದರೆ ಯಾವುದಕ್ಕೂ ಲೋಕಸಭೆಯಲ್ಲಿ ಇರುವುದು ಒಳ್ಳೆಯದು ಎಂದು ಗೌಡರ ಕುಟುಂಬಕ್ಕೆ ದೂರದ ಒಂದು ಆಸೆಯಿದೆ. ಅದೃಷ್ಟದ ಅವಕಾಶ ಮತ್ತು ಗೌಡರ ಕುಟುಂಬ... ಏನೂ ಹೇಳಲು ಸಾಧ್ಯವಿಲ್ಲ ಬಿಡಿ!