ಪ್ರೀತಿಸಿ ಮದುವೆಯಾದ ಜೊಡಿ ಮೇಲೆ ತಂದೆಯಿಂದಲೇ ಹಲ್ಲೆ
ತೆಲಂಗಾಣದಲ್ಲಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನನ್ನು ಹತ್ಯೆ ಮಾಡಿದ ಬೆನ್ನಲ್ಲೇ ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ಇದೀಗ ನಡೆದಿದೆ.
ಹೈದರಾಬಾದ್: ಅಮೃತ ವರ್ಷಿಣಿ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವಕ ಪ್ರಣಯ್ ಕುಮಾರ್ ಎಂಬ ಯುವಕ ಮರ್ಯಾದಾ ಹತ್ಯೆಗೆ ಬಲಿಯಾದ ಬೆನ್ನಲ್ಲೇ, ಬುಧವಾರ ನವ ಜೋಡಿ ಯೊಂದರ ಮೇಲೆ ಹಲ್ಲೆ ನಡೆದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸಂದೀಪ್ (21) ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಮಾಧವಿ(18) ಅವರು ಕಳೆದೊಂದು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಇದಕ್ಕೆ ಯುವತಿಯ ಮನೆಯವರಿಂದ ಒಪ್ಪಿಗೆಯಿರಲಿಲ್ಲ. ಈ ಕುರಿತು ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದರು.
ಆದರೆ, ಬುಧವಾರ ಬಟ್ಟೆ ಕೊಡಿಸುವುದಾಗಿ ಕರೆಸಿಕೊಂಡ ಯುವತಿಯ ತಂದೆ ಸಂತ್ರಸ್ತರ ಮೇಲೆ ಕುಡುಗೋಲಿನಿಂದ ದಾಳಿ ಮಾಡಿದ್ದಾನೆ. ಇದರಿಂದ ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದ ನವಜೋಡಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.