ಜನರಿಲ್ಲದ ಜಾಗಕ್ಕೆ ಹೋಗಿ ಸಾಮ್ರಾಜ್ಯ ಸ್ಥಾಪಿಸಿದ ಭಾರತೀಯ
ಈ ಭೂಭಾಗವನ್ನು ಈತ ‘ದೀಕ್ಷಿತ್ ಸಾಮ್ರಾಜ್ಯ’ ಎಂದು ಕರೆದುಕೊಂಡಿದ್ದು, ತನ್ನನ್ನು ‘ಸುಯಾಶ್-1’ ಎಂದು ರಾಜರ ಶೈಲಿಯಲ್ಲಿ ಸಂಬೋಧಿಸಿಕೊಂಡಿದ್ದಾನೆ.
ಸುಡಾನ್(ನ.16): ಈಜಿಪ್ಟ್ ಮತ್ತು ಸೂಡಾನ್ ನಡುವೆ ಇರುವ, ಈವರೆಗೆ ಯಾರೂ ಹಕ್ಕು ಸಾಧಿಸದ ಭೂಮಿಯೊಂದನ್ನು ‘ತನ್ನ ವಶಕ್ಕೆ’ ತೆಗೆದುಕೊಂಡಿರುವ ಭಾರತೀಯ ಯುವಕನೊಬ್ಬ, ಆ ದೇಶಕ್ಕೆ ತಾನೇ ಅರಸ. ಇದು ತನ್ನ ಸಾಮ್ರಾಜ್ಯ ಎಂದು ಘೋಷಿಸಿಕೊಂಡಿರುವ ವಿಚಿತ್ರ ಪ್ರಸಂಗ ನಡೆದಿದೆ.
ಸಾಲದ್ದಕ್ಕೆ ಈತ ವಿಶ್ವಸಂಸ್ಥೆಗೂ ಪತ್ರ ಬರೆದಿದ್ದು, ತನಗೆ ಹಾಗೂ ತನ್ನ ‘ಸಾಮ್ರಾಜ್ಯ’ಕ್ಕೆ ಮಾನ್ಯತೆ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದಾನೆ. ಮಧ್ಯಪ್ರದೇಶದ ಇಂದೋರ್ ಮೂಲದ ಸುಯಾಶ್ ದೀಕ್ಷಿತ್ ಎಂಬ 24 ವರ್ಷದ ಉದ್ಯಮಿಯೇ ಈ ಸಾಹಸ ಮಾಡಿದವ. ಬೀರ್ ತಾವಿಲ್ ಎಂದು ಕರೆಯಲ್ಪಡುವ ಈ ಪ್ರದೇಶ ಈಜಿಪ್ಟ್ ಮತ್ತು ಸೂಡಾನ್ ಮಧ್ಯೆ ಇದೆ. ಇದು ಮಾನವರು ವಾಸಿಸಬಹುದಾದ ಹಾಗೂ ಈವರೆಗೂ ಇದು ಯಾವುದೇ ದೇಶಕ್ಕೆ ಸೇರ್ಪಡದ ಜಗತ್ತಿನ ಏಕೈಕ ಸ್ಥಳ ಎನ್ನಿಸಿಕೊಂಡಿದೆ.
ಈ ಭೂಭಾಗವನ್ನು ಈತ ‘ದೀಕ್ಷಿತ್ ಸಾಮ್ರಾಜ್ಯ’ ಎಂದು ಕರೆದುಕೊಂಡಿದ್ದು, ತನ್ನನ್ನು ‘ಸುಯಾಶ್-1’ ಎಂದು ರಾಜರ ಶೈಲಿಯಲ್ಲಿ ಸಂಬೋಧಿಸಿಕೊಂಡಿದ್ದಾನೆ. ‘ಬೀರ್ ತಾವಿಲ್ಗೆ ಹೋಗಲು 319 ಕಿ.ಮೀ. ದುರ್ಗಮ ಮರುಭೂಮಿ ಹಾದಿ ಕ್ರಮಿಸಿರುವೆ. 800 ಚದರ ಮೈಲು ಭೂಭಾಗವನ್ನು ಇದು ಹೊಂದಿದೆ.
ಒಂದು ಸಾಮ್ರಾಜ್ಯ ತನ್ನದು ಎಂದು ಹೇಳಿಕೊಳ್ಳಬೇಕು ಎಂದರೆ ಅಲ್ಲಿ ಒಂದು ಸಸಿ ನೆಟ್ಟು ಅದಕ್ಕೆ ನೀರು ಹಾಕಬೇಕು ಎಂದು ನಾಗರಿಕತೆಗಳ ಇತಿಹಾಸ ಹೇಳುತ್ತದೆ. ಆ ಪ್ರಕಾರ ನಾನೂ ಸಸಿ ನೆಟ್ಟು ನೀರು ಹಾಕಿದ್ದೇನೆ ಎಂದಿದ್ದಾರೆ.