ಅಂತಿಮ ಟೆಸ್ಟ್ ಪಂದ್ಯಕ್ಕೆ ಕೊರೋನಾ ಕಾಟ, ಕಲಬುರಗಿಯಲ್ಲಿ ಅಧಿಕಾರಕ್ಕಾಗಿ ಆಟ; ಸೆ.10ರ ಟಾಪ್ 10 ಸುದ್ದಿ!
ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಕೊರೋನಾ ಕಾರಣ ರದ್ದಾಗಿದೆ. ನಿರ್ಬಂಧ ಸಡಿಲಿಕೆ ಎಂದಿದ್ದ ಪಾಲಿಕೆ ಇದೀಗ ಕಠಿಣ ನಿಯಮದಡಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಿದೆ. ಕಲಬುರಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್ ಪಟ್ಟು ಬಿಗಿಯಾಗುತ್ತಿದೆ. ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್, ಫುಟ್ಪಾತ್ನಲ್ಲಿ ಮಾಜಿ ಸಿಎಂ ಪತ್ನಿ ಸಹೋದರಿ ಜೀವನ ಸೇರಿದಂತೆ ಸೆಪ್ಟೆಂಬರ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಫುಟ್ಪಾತ್ನಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ಬಂಗಾಳ ಮಾಜಿ ಸಿಎಂ ನಾದಿನಿ!
ಭಾರತದಲ್ಲಿ ರಾಜಕಾರಣಿಗಳು ಶ್ರೀಮಂತರು. ಅವರ ಕುಟುಂಬಸ್ಥರು, ಮುಂದಿನ ತಲೆಮಾರಿಗೆ ಅಗುವಷ್ಟು ಆಸ್ತಿ ಮಾಡಿಕೊಂಡಿರುತ್ತಾರೆ ಅನ್ನೋದು ಸಾಮಾನ್ಯ ಮಾತು. ಇದಕ್ಕೆ ಕೆಲ ರಾಜಕಾರಣಿಗಳು ಅಪವಾದ. ಇದೀಗ ಮಾಜಿ ಸಿಎಂ, 10 ವರ್ಷಕ್ಕೂ ಹೆಚ್ಚು ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿ ಹತ್ತಿರ ಸಂಬಂಧಿ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿ ಗಣೇಶೋತ್ಸವ ನಿರ್ಬಂಧ ಸಡಿಲಿಕೆ ಇಲ್ಲ: ಪ್ರತಿ ವಾರ್ಡ್ಗೆ ಒಂದೇ ಗಣಪ, 3 ದಿನ ಉತ್ಸವ!
ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಗುರುವಾರ ದಿನವಿಡೀ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿಲ್ಲ.
ಕೊಹ್ಲಿ ಸೈನ್ಯಕ್ಕೆ ಕೊರೋನಾ ಆತಂಕ; ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ರದ್ದು!
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ದಿಢೀರ್ ಅಂತ್ಯಗೊಂಡಿದೆ. ಮೊದಲ ಪಂದ್ಯಕ್ಕೆ ಮಳೆ ಕಾಟ ನೀಡಿದರೆ ಅಂತಿಮ ಪಂದ್ಯಕ್ಕೆ ಕೊರೋನಾ ಶಾಕ್ ನೀಡಿದೆ. ಹೀಗಾಗಿ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿದೆ. ಟೆಸ್ಟ್ ಪಂದ್ಯಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಆತಂಕ ಕಾಡುತ್ತಿದೆ.
ಎಲ್ಲಿ ನೋಡಿದರೂ ರಕ್ಷಿತ್ ಶೆಟ್ಟಿ 'Torture' ಹಾಡಿನ ಹವಾ!
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರದ ಸ್ಪೆಷಲ್ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಶ್ವಾನ ಹೇಗೆ ರಕ್ಷಿತ್ಗೆ ಕಾಟ ಕೊಡುತ್ತದೆ ಎಂದು ಈ ಟಾರ್ಚರ್ ಹಾಡಿನಲ್ಲಿದೆ. ಬೇಗ ಸಿನಿಮಾ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ.
ತನ್ನದೇ ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ಕಿಚ್ಚ ಸುದೀಪ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಸಿನಿಮಾಗಳು ಹಾಗೂ ಕೆರಿಯರ್ನಲ್ಲಿ ಮರೆಯಲಾರದ ಸಿನಿಮಾಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಾಲದಲ್ಲಿದ್ದ ಅನಿಲ್ ಅಂಬಾನಿಗೆ 4,660 ಕೋಟಿ ಬಂಪರ್!\
ಸಾಲದ ಸುಳಿಯಲ್ಲಿ ಸಿಲುಕಿರುವ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ. ಕಂಪನಿಗೆ 4660 ಕೋಟಿ ರು. ಮೊತ್ತದ ಕಾನೂನು ಹೋರಾಟದಲ್ಲಿ ಜಯ ಲಭಿಸಿದೆ. ದೆಹಲಿ ಮೆಟ್ರೋ ಸಂಸ್ಥೆಯ ಜೊತೆ ಈ ಮೊತ್ತದ ಹಣದ ಮೇಲಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್ ಅಂಬಾನಿ ಪರ ಆದೇಶ ನೀಡಿದ್ದು, ನಷ್ಟದಲ್ಲಿದ್ದ ಅವರ ಕಂಪನಿಗೆ ಮರುಜೀವ ಬಂದಂತಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ 500 ಚಾರ್ಜಿಂಗ್ ಕೇಂದ್ರ: ಸುನೀಲ್
ವಿದ್ಯುತ್ ಚಾಲಿತ ವಾಹನಗಳ ಬಳಕೆ ಪ್ರೋತ್ಸಾಹಿಸಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದ್ದು, ಬೆಂಗಳೂರು ನಗರದಲ್ಲೇ 136 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಲಬುರಗಿ ಮೇಯರ್ ಸ್ಥಾನ ನಮಗೆ ಕೊಡಪ್ಪ: ವಿಘ್ನ ನಿವಾರಣೆಗೆ ದಳಪತಿಗಳಿಂದ ಪೂಜೆ
ಕಲಬುರಗಿ ಪಾಲಿಕೆ ವಿಘ್ನ ನಿವಾರಣೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಮಹಾನಗರ ಪಾಲಿಕೆ ಗದ್ದುಗೆಗಾಗಿ ದಳಪತಿಗಳು ಪೂಜೆ ನಡೆಸಿದ್ದಾರೆ. ರೆಸಾರ್ಟ್ನಲ್ಲೇ ಕುಮಾರಸ್ವಾಮಿ ಜೊತೆ ಪಾಲಿಕೆ ಸದಸ್ಯರಿಂದ ಪೂಜೆ ನರವೇರಿಸಲಾಗುತ್ತಿದೆ. ರೆಸಾರ್ಟ್ನಲ್ಲೇ ಗಣೇಶನನ್ನ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕಲಬುರಗಿ ಪಾಲಿಕೆಯಲ್ಲಿ ನಾಲ್ಕು ಸ್ಥಾನಗಳಲ್ಲ ಗೆದ್ದಿರುವ ಜೆಡಿಎಸ್ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿದೆ.