ಜಾರಕಿಹೊಳಿ ಜೊತೆ ನಾವಿದ್ದೇವೆ : ಕಾಂಗ್ರೆಸ್ ಮುಖಂಡ
ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಯ ನಾಪತ್ತೆಯಾಗಿದ್ದಾರೆ. ಅವರಿಗೆ ಅನ್ಯಾಯವಾದಲ್ಲಿ ತಾವು ಅವರ ಜೊತೆಗೆ ಇರುವುದಾಗಿ ಕಾಂಗ್ರೆಸ್ ಮುಖಂಡರೋರ್ವರು ಹೇಳಿದ್ದಾರೆ.
ಬೆಂಗಳೂರು : ಜಾರಕಿಹೊಳಿ ಸಹೋದರರಲ್ಲಿ ಯಾರಿಗೇ ಒಬ್ಬರಿಗೆ ಅನ್ಯಾಯವಾದರೂ ನಾವು ಅವರ ಜತೆಗೆ ಇದ್ದೇವೆ ಎಂದು ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ. ಈ ಮೂಲಕ ಪಕ್ಷದ ವರಿಷ್ಠರ ಜತೆಗೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸುವ ಪರೋಕ್ಷ ಸುಳಿವನ್ನು ಕಮಟಳ್ಳಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ನಾವು ರಮೇಶ್ ಜಾರಕಿಹೊಳಿ ಅವರೊಂದಿಗೆ ಇದ್ದವರು. ಆದರೆ, ಮಾಜಿ ಸಚಿವ ರಮೇಶ ಜಾರಕಿ ಹೊಳಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಇಬ್ಬರೂ ನಮ್ಮ ನಾಯಕರು. ಯಾವುದೇ ಸಂದರ್ಭದಲ್ಲೂ ಈ ಸೋದರರಿಗೆ ಅನ್ಯಾಯ ವಾದರೆ, ಅವರ ಜತೆಗೆ ನಾವು ಇರುತ್ತೇವೆ ಎಂದರು.
ಸಂಪರ್ಕಕ್ಕೆ ಸಿಕ್ಕಿಲ್ಲ: ಹತ್ತು ದಿನಗಳಿಂದ ರಮೇಶ ಜಾರಕಿಹೊಳಿ ಜತೆಗೆ ಸಂಪರ್ಕ ಸಾಧ್ಯವಾಗಿಲ್ಲ. ಅವರು ತೆಗೆದುಕೊಂಡ ನಿರ್ಣಯಗಳ ಬಗ್ಗೆ ಗೊತ್ತಿಲ್ಲ. ಜಾರಕಿಹೊಳಿ ಅವರು ಇಪ್ಪತ್ತು ವರ್ಷದಿಂದ ಕಾಂಗ್ರೆಸ್ನಲ್ಲಿದ್ದು, ಮುಂದೆಯೂ ಕಾಂಗ್ರೆಸ್ನಲ್ಲಿ ಉಳಿಯುತ್ತಾರೆ ಎಂಬ ವಿಶ್ವಾಸ ಇದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ, ಅದು ಪಕ್ಷದ ಹಾಗೂ ಹೈಕಮಾಂಡ್ ವೇದಿಕೆಯಲ್ಲಿ ಪರಿಹಾರ ಕಾಣುವ ವಿಶ್ವಾಸ ಇದೆ ಎಂದರು.