ಬೆಂಗಳೂರಿನಲ್ಲಿ ಚಾರ್ಟೆಡ್ ಆಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನ!
ಉದ್ಯಾನ ನಗರಿಯಲ್ಲಿ ನಡೆಯುತ್ತಿರುವ 2 ದಿನದ ಚಾರ್ಟೆಡ್ ಆಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನದಲ್ಲಿ ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಲಾಗಿದೆ. ಸಮ್ಮೇಳನದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು(ಡಿ.21): ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.. ತಂತ್ರಜ್ಞಾನ ಬದಲಾಗುತ್ತಿದ್ದಂತೆ ಲೆಕ್ಕಪರಿಶೋಧಕರು ಕೂಡ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗ ಉದ್ಯಮ ಮತ್ತು ವ್ಯವಹಾರಗಳಲ್ಲಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಐಐಎಂನ ಮುಖ್ಯಸ್ಥ ಪ್ರೊ. ಕೆ. ಕುಮಾರ್ ಹೇಳಿದರು.
ಇದನ್ನೂ ಓದಿ: ಮಾಹಿತಿ ತಂತ್ರಜ್ಞಾನ, ಜ್ಞಾನಾಧಾರಿತ ಆರ್ಥಿಕತೆ ಉತ್ತೇಜನಕ್ಕೆ ಚಿಂತನೆ: ಸಿಎಂ
ವಸಂತನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮತ್ತು ದಕ್ಷಿಣ ಭಾರತ ಲೆಕ್ಕಪರಿಶೋಧಕರ ವಿದ್ಯಾರ್ಥಿ ಸಂಘ ಬೆಂಗಳೂರು ವತಿಯಿಂದ ನಡೆಯುತ್ತಿರುವ ಎರಡು ದಿನಗಳ ಚಾರ್ಟೆಡ್ ಆಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನ ಅಭ್ಯುದಯ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೆಕ್ಕ ಪರಿಶೋಧಕರು ಆರ್ಧಿಕ ಚಟುವಟಿಕೆಗಳನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಉದ್ಯಮಗಳಲ್ಲಿ ಉಂಟಾಗುವ ಸವಾಲುಗಳನ್ನು ಬಗೆಹರಿಸುವಂತಹ ಜವಾಬ್ದಾರಿ ಕೂಡ ಲೆಕ್ಕ ಪರಿಶೋಧಕರ ಮೇಲಿದೆ ಎಂದರು.
ಇನ್ನು ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿ ಉತ್ತಿರ್ಣರಾಗುವುದಲ್ಲ. ಉತ್ತಮ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಕೂಡ ಮೈಗೂಡಿಸಿಕೊಳ್ಳಬೇಕು. ಇಂತಹ ಶಿಕ್ಷಣವನ್ನು ಪಾಧ್ಯಾಪಕರು ತಮ್ಮ ವೃತ್ತಿ ಬದುಕಿನ ಸವಾಲು ಮತ್ತು ಅನುಭವಗಳನ್ನು ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ ವೃತ್ತಿಪರರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.
ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಗೋಲ್ಡ್ಮ್ಯಾನ್ ಸಾಚ್ಸ್ನ ಎಂ.ಡಿ. ಸಾತಿಯಾ ಪದ್ಮನಾಭನ್ ಅವರು ಸಿಎ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಕಠಿಣ ಶ್ರಮ, ಏಕಾಗ್ರತೆ ಮತ್ತು ಬದ್ಧತೆಯಿಂದ ಓದಿದ್ರೆ ಮಾತ್ರ ಲೆಕ್ಕ ಪರಿಶೋಧಕನಾಗಬಹುದು. ನಾನು ೧೪ನೇ ಪ್ರಯತ್ನದಲ್ಲಿ ಚಾರ್ಟೆಡ್ ಆಕೌಂಟೆಂಟ್ ಪರೀಕ್ಷೆಯನ್ನು ಪಾಸ್ ಮಾಡಿದ್ದೇನೆ ಎಂದರು.
ಲೆಕ್ಕ ಪರಿಶೋಧಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ಇದೆ. ಹಾಗೇ ಬೇರೆ ಬೇರೆ ದೇಶಗಳಲ್ಲಿ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಬೇಡಿಕೆಯೂ ಇದೆ. ಹೀಗಾಗಿ ಸಿಎ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಐಸಿಎಐನ ಮಾಜಿ ಅಧ್ಯಕ್ಷ ಕೆ. ರಘು ಹೇಳಿದ್ರು. ಅಭ್ಯುದಯ ಸಿಎ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಲೆಕ್ಕಪರಿಶೋಧಕರ ಪಾತ್ರ, ಸಿಎ ವೃತ್ತಿ ಭವಿಷ್ಯ ಮತ್ತು ತಂತ್ರಜ್ಞಾನ, ಭಾರತದ ಅರ್ಥಿಕತೆಗೆ ಜಿಎಸ್ಟಿಯ ಪರಿಣಾಮಗಳು, ಲೆಕ್ಕಪರಿಶೋಧಕ ವೃತ್ತಿಯ ಮೌಲ್ಯಗಳು, ಕಂಪೆನಿ ಕಾನೂನು ಮತ್ತು ಇತ್ತೀಚಿನ ಕಾಯ್ದೆಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ.