ಹಿಂದೂ ಎಂದು ಹೇಳಿಕೊಳ್ಳಲೂ ನೋವಾಗುತ್ತಿದೆ : ನಟಿ ಜಯಮಾಲ
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣಗಳ ಬಗ್ಗೆ ನಟಿ ಜಯಮಾಲ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾವು ಹಿಂದೂ ಎಂದು ಹೇಳಿಕೊಳ್ಳಲೂ ಕೂಡ ನೋವಾಗುತ್ತದೆ ಎಂದಿದ್ದಾರೆ.
ತುಮಕೂರು : ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಬೆಳಕಿಗೆ ಬಂದ ಅತ್ಯಾಚಾರ ಪ್ರಕರಣಗಳ ಬಗ್ಗೆ ನಟಿ ಜಯಮಾಲ ಕಳವಳ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಯಮಾಲ ಇದೇ ವೇಳೆ ತಾವು ಹಿಂದೂ ಎಂದು ಹೇಳಿಕೊಳ್ಳಲು ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳೇ ಇದಕ್ಕೆಲ್ಲಾ ಕಾರಣವಾಗಿದೆ. ದೇಶದಲ್ಲಿ ಜಾತೀಯತೆ, ಕೋಮುವಾದ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ತಾಂಡವಾಡುತ್ತಿದೆ. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಹಸುಳೆಗಳ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಯುತ್ತಿದೆ.
ದೇವಸ್ಥಾನದ ಗರ್ಭಗುಡಿಯ ಎದುರೇ ಹೇಯ ಕೃತ್ಯ ಎಸಗುತ್ತಿದ್ದಾರೆ. ಹೀಗಾಗಿ ನಾನು ಹಿಂದೂ ಎಂದು ಹೇಳಿಕೊಳ್ಳಲು ನೋವಾಗುತ್ತದೆ. ಈ ಎಲ್ಲಾ ಅತ್ಯಾಚಾರಗಳಿಗೂ ಕೂಡ ನಮ್ಮ ಸಮಾಜ ಕಾರಣ ಅಲ್ಲ. ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಸರ್ಕಾರಗಳೇ ಕಾರಣವಾಗಿದೆ ಎಂದಿದ್ದಾರೆ.
ಇನ್ನು ಹಿಂದುತ್ವ ಮತ್ತು ಕೋಮುವಾದ ಹೆಸರಿನಲ್ಲಿ ಇಂತಹ ದುಷ್ಟ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ನಟಿ ಜಯಮಾಲ ಹೇಳಿದ್ದಾರೆ.