ಹಾಕಿ ಐಂಡಿಯಾ ಸಾಧನೆಗೆ ಮೋದಿ ವಿಶ್, ಕೆಜಿಎಫ್ 2 ರಿಲೀಸ್ ಸುಳಿವು ನೀಡಿದ ಯಶ್; ಆ.5ರ ಟಾಪ್ 10 ಸುದ್ದಿ!
ಒಲಿಂಪಿಕ್ಸ್ನಲ್ಲಿ ಕಳೆದು 4 ದಶಕಗಳಿಂದ ಭಾರತಕ್ಕೆ ಮರೀಚಿಕೆಯಾಗಿದ್ದ ಪದಕ ಇದೀಗ ದಕ್ಕಿದೆ. ಭಾರತದ ಹಾಕಿ ತಂಡದ ಕಂಚಿನ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಆರ್ಟಿಕಲ್ 370 ತೆಗೆದು ಇಂದಿಗೆ 2 ವರ್ಷಗಳು ಉರುಳಿದೆ. ಶಾಸಕ ಜಮೀರ್ ಅಹಮದ್ ಖಾನ್ಗೆ ಐಟಿ ಶಾಕ್ ನೀಡಿದೆ. ಡಿಸೆಂಬರ್ ವೇಳೆಗೆ ಕೆಜಿಎಪ್ 2 ರಿಲೀಸ್ ಸುಳಿವು, ಅರೆ ಬರೆ ಬಟ್ಟೆಯಲ್ಲಿರ್ತಾರಾ ಬಿಗ್ಬಾಸ್ ಸ್ಪರ್ಧಿಗಳು ಸೇರಿದಂತೆ ಆಗಸ್ಟ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಆರ್ಟಿಕಲ್ 370 ತೆಗೆದು 2 ವರ್ಷ: ಶ್ರೀನಗರದಲ್ಲಿ ವೀರ ಯೋಧರಿಗಾಗಿ ವಿಶೇಷ ಕಾರ್ಯಕ್ರಮ
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆರ್ಟಿಕಲ್ 370 ತೆಗೆದು ಇಂದಿಗೆ ಎರಡು ವರ್ಷಗಳಾದ ಪ್ರಯುಕ್ತ ಸಿಂಧೂ ದರ್ಶನ ಯಾತ್ರಾ ಸಮಿತಿ ಹಾಗೂ ಹಿಮಾಲಯ ಪರಿವಾರ ಸಂಘಟನೆ ಶ್ರೀನಗರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.
ಶಾಸಕ ಜಮೀರ್ ಅಹಮದ್ ಖಾನ್ಗೆ ಐಟಿ ಶಾಕ್: ಏಕಕಾಲಕ್ಕೆ ವಿವಿಧೆಡೆ ದಾಳಿ!
ಕಾಂಗ್ರೆಸ್ ನಾಯಕ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ಗೆ ಗುರುವಾರ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ವಿವಿಧ ತಂಡಗಳಲ್ಲಿ ಐಟಿ ಅಧಿಕಾರಿಗಳು ವಿವಿಧ ಕಡೆ ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಹಾಗೂ ಸಿಆರ್ಪಿಎಫ್ ಪಡೆ ಭದ್ರತೆ ಜೊತೆ ಈ ದಾಳಿ ನಡೆದಿದೆ.
ಭಾರತಕ್ಕಿಂದು ಐತಿಹಾಸಿಕ ದಿನ: ಹಾಕಿ ಗೆಲುವನ್ನು ಸುಂದರವಾಗಿ ಬಣ್ಣಿಸಿದ ಪ್ರಧಾನಿ ಮೋದಿ
ಭಾರತೀಯ ಹಾಕಿ ತಂಡದ ಗತವೈಭವ ಮತ್ತೆ ಮರಳಿದೆ. ಜರ್ಮನಿ ಎದುರು 5-4 ಅಂತರದ ಗೆಲುವು ದಾಖಲಿಸುವ ಮೂಲಕ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಬೀಗಿದೆ. ಭಾರತದ ಈ ರೋಚಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಡಿಸೆಂಬರ್ನಲ್ಲಿ ಸ್ಟಾರ್ ವಾರ್: ಅಖಾಡಕ್ಕೆ ಇಳಿದೇ ಬಿಡ್ತಾರಾ ರಾಕಿಂಗ್ ಸ್ಟಾರ್?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಾಗೂ ಅಲ್ಲು ಅರ್ಜುನ್ ಅಭಿನಯನದ ಪುಷ್ಪಾ ಸಿನಿಮಾ ಒಂದೇ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಗೌರಿ- ಗಣೇಶ ಹಬ್ಬಕ್ಕೆ ಬರ್ತಿವಿ ಅಂತ ಹೇಳ್ತಿದ್ದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಡಿಸೆಂಬರ್ನಲ್ಲಿ ರಿಲೀಸ್ ಆಗಬಹುದು.
ವಾಟ್ಸಾಪ್ನಿಂದ ‘ಒಮ್ಮೆ ನೋಡಿ’ ಫೀಚರ್ ಬಿಡುಗಡೆ
ಫೋಟೋ ಅಥವಾ ವಿಡಿಯೋಗಳನ್ನು ಒಂದು ಬಾರಿ ನೋಡಿದ ಬಳಿಕ ಅದು ತಂತಾನೆ ಅಳಿಸಿ ಹೋಗುವ ‘ವ್ಯೂ ಒನ್ಸ್’ (ಒಮ್ಮೆ ನೋಡಿ) ಎಂಬ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇದು ಫೋಟೋ, ವಿಡಿಯೋಗಳು ಗ್ಯಾಲರಿಯಲ್ಲಿ ಸಂಗ್ರಹವಾಗುವ ಸಮಸ್ಯೆ ನಿವಾರಿಸಲಿದೆ. ಸದ್ಯ ಬೇಟಾ ವರ್ಷನ್ನಲ್ಲಿ ಮಾತ್ರ ಇದು ಲಭ್ಯವಿದೆ. ಭಾರತದಲ್ಲಿ ಇದೀಗ ಐಫೋನ್ ಬಳಕೆದಾರರಿಗೆ ಮಾತ್ರವೇ ಈ ಹೊಸ ಫೀಚರ್ ಲಭ್ಯವಿದ್ದು, ಶೀಘ್ರವೇ ಎಲ್ಲಾ ಆ್ಯಂಡ್ರಾಡ್್ಡ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆ ಇದೆ.
ಸೆನ್ಸೆಕ್ಸ್ 546 ಅಂಕ ಏರಿಕೆ: ಮೊದಲ ಬಾರಿ 54,000 ಗಡಿ ದಾಟಿ ದಾಖಲೆ!
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ 546 ಅಂಕಗಳ ಏರಿಕೆ ಕಂಡು 53,369 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್ 54000 ಅಂಕಗಳ ಗಡಿ ದಾಟಿದ್ದು ಇದೆ ಮೊದಲು. ಮತ್ತೊಂದೆಡೆ ನಿಫ್ಟಿಕೂಡಾ 128 ಅಂಕ ಏರಿಕೆ ಕಂಡು 16246ರಲ್ಲಿ ಮುಕ್ತಾಯವಾಯಿತು. ಇದು ಕೂಡಾ ನಿಫ್ಟಿಯ ಸಾರ್ವಕಾಲಿಕ ಮುಕ್ತಾಯದ ದಾಖಲೆಯಾಗಿದೆ.
ದೇಶದಲ್ಲಿ 42,982 ಹೊಸ ಕೊರೋನಾ ಕೇಸ್ ಪತ್ತೆ, ಲಾಕ್ಡೌನ್ ಆತಂಕದಲ್ಲಿ ಜನತೆ!
ಕೊೊರೋನಾ ವೈರಸ್ ಪ್ರಕರಣ ಸಂಖ್ಯೆ ಆತಂಕ ಹೆಚ್ಚಿಸುತ್ತಿದೆ. ಎಲ್ಲವೂ ಶಾಂತವಾಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಕೊರೋನಾ ಆರ್ಭಟ ಆರಂಭಗೊಂಡಿದೆ. ಕೇರಳದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣದಿಂದ ನೆರೆ ರಾಜ್ಯ ಕರ್ನಾಟಕದಲ್ಲೂ ಕೋವಿಡ್ ಹೆಚ್ಚಾಗುತ್ತಿದೆ. ಇದರಿಂದ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 42 ಸಾವಿರಕ್ಕೂ ಅಧಿಕ ಕೊರೋನಾ ಕೇಸ್ ಪತ್ತೆಯಾಗಿದೆ. ಇನ್ನು 562 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ: ವಿಗ್ರಹಗಳು ನುಚ್ಚು ನೂರು!
ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಮತಾಂತರ ಹಾಗೂ ದೇವಾಲಯಗಳ ಧ್ವಂಸ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಸದ್ಯ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನವೊಂದನ್ನು ಮುಸಲ್ಮಾನರ ಗುಂಪೊಂದು ಧ್ವಂಸಗೊಳಿಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇಷ್ಟೇ ಅಲ್ಲದೇ ಉದ್ರಿಕ್ತರು ದೇವಸ್ಥಾನಗೊಳಗಿನ ವಿಗ್ರಹಗಳನ್ನೂ ಸುಟ್ಟಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ದಾಖಲಾಗಿವೆ.
ಓಟಿಟಿಯಲ್ಲಿ ಬಿಗ್ಬಾಸ್: ಅರೆ ಬರೆ ಬಟ್ಟೆಯಲ್ಲಿರ್ತಾರಾ ಸ್ಪರ್ಧಿಗಳು?
ಹಿಂದಿ ಬಿಗ್ ಬಾಸ್ ಸೀಸನ್ 15 ಈ ಬಾರಿ ಓಟಿಟಿಯಲ್ಲಿ ಪ್ರಸಾರವಾಗಲಿದೆ. ನಿರೂಪಕ ಕರಣ್ ಜೋಹಾರ್ ಇರುವ ಪ್ರೋಮೋ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಟಿವಿ ಸಂಚಿಕೆಯನ್ನು ಸಲ್ಮಾನ್ ಖಾನ್ ನಡೆಸಲಿದ್ದಾರೆ. ಓಟಿಟಿ ಬಿಗ್ ಬಾಸ್ ವಯಸ್ಕರಿಗೆ ಮಾತ್ರವಾದ ಕಾರಣ ಮಕ್ಕಳು, ಮನೆಯವರ ಜೊತೆ ನೋಡಲು ಸಾಧ್ಯವಿಲ್ಲ ಎನಿಸುತ್ತದೆ?