ಹಿಂದೂ ಮಹಾಸಭಾದಿಂದ ವಿವಾದ
- ಹಿಂದೂ ಮಹಾಸಭಾದಿಂದ ವಿವಾದ
- ಹಿಂದೂ ಮಹಾಸಭಾದಿಂಧ ಪರ್ಯಾಯ ಕೋರ್ಟ್ ಆರಂಭ
- ಸ್ವತಂತ್ರ ದಿನಾಚರಣೆ ದಿನ ಪರ್ಯಾಯ ಕೋರ್ಟ್ಗೆ ಚಾಲನೆ
ಮೇರಠ್ (ಆ. 16): ದೇಶವಿಡೀ 72 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ಅಖಿಲ ಭಾರತೀಯ ಹಿಂದೂ ಮಹಾಸಭಾ ಬುಧವಾರ ಪರ್ಯಾಯ ಹಿಂದೂ ನ್ಯಾಯಾಲಯ ಆರಂಭಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮರ ಷರಿಯತ್ ಕೋರ್ಟ್ ಮಾದರಿಯಲ್ಲಿ ಹಿಂದೂ ಕೋರ್ಟ್ಗೆ ಸ್ವಾತಂತ್ರ್ಯ ದಿನಾಚರಣೆಯಂದೇ ಸಂಘಟನೆ ಚಾಲನೆ ನೀಡಿದೆ.
ಸಂಘಟನೆಯ ಮೇರಠ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ನ್ಯಾಯಾಲಯದ ಪ್ರಥಮ ನ್ಯಾಯಾಧೀಶರ ನೇಮಕವೂ ನಡೆದಿದೆ. ‘ಷರಿಯತ್ ಕೋರ್ಟ್ಗಳ ಅಸ್ತಿತ್ವದ ಬಗ್ಗೆ ನಾವು ಕೆಲವು ದಿನಗಳ ಹಿಂದೆ ಪ್ರಶ್ನಿಸಿದ್ದೆವು. ಎಲ್ಲರಿಗೂ ಒಂದೇ ಸಂವಿಧಾನವಿರಬೇಕು, ಆದುದರಿಂದ ಷರಿಯತ್ ಕೋರ್ಟ್ ಇರಬಾರದೆಂದು ಪ್ರತಿಪಾದಿಸಿದ್ದೆವು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ನಮ್ಮ ಬೇಡಿಕೆ ಈಡೇರದಿದ್ದರೆ ಹಿಂದೂಗಳೂ ಅದೇ ಮಾದರಿಯ ಕೋರ್ಟ್ ರಚಿಸುತ್ತೇವೆ ಎಂದಿದ್ದೆವು. ಸರ್ಕಾರ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಪ್ರಥಮ ಹಿಂದೂ ಕೋರ್ಟ್ ಆರಂಭಿಸಿದೆವು’ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ.
ಅಶೋಕ್ ಐವರು ಸದಸ್ಯರ ಹಿಂದೂ ಕೋರ್ಟ್ನ ಸಂಘರ್ಷಕ ಮಂಡಲ್ನ ಮುಖ್ಯಸ್ಥರೂ ಆಗಿದ್ದಾರೆ. ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಿಂದೂ ಕೋರ್ಟ್ನ ಪ್ರಥಮ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಅ.2 ರಂದು ಕೋರ್ಟ್ ಅಳವಡಿಸಿಕೊಳ್ಳುವ ಕಾನೂನು ವಿಧಾನವನ್ನು ಘೋಷಿಸಲಾಗುತ್ತದೆ. ನ.15 ರಂದು ದೇಶದ ವಿವಿಧ ಭಾಗಗಳ ಐವರು ನ್ಯಾಯಾಧೀಶರ ನೇಮಕಾತಿ ಘೋಷಿಸಲಾಗುತ್ತದೆ.