ಉರಗ ರಕ್ಷಕ ಹಾವು ಕಡಿತಕ್ಕೆ ಬಲಿ: ಜನರಿಂದ ಹಾವಿನ ಹತ್ಯೆ
ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅದೇ ಹಾವು ಕಚ್ಚಿದ್ದರಿಂದ ಉರಗ ತಜ್ಞನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು: ಮನೆಯೊಂದರಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅದೇ ಹಾವು ಕಚ್ಚಿದ್ದರಿಂದ ಉರಗ ತಜ್ಞನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾವನ್ನು ಕಟ್ಟಿಗೆಯಿಂದ ಬಡಿದು, ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾರೆ.
ತಾಲೂಕಿನ ನೇರಳೆ ಗ್ರಾಮದ ನಿವಾಸಿ ಕೃಷ್ಣ (38) ಮೃತ ಉರಗ ತಜ್ಞ. ಕೃಷ್ಣ ಕೆಲ ವರ್ಷಗಳಿಂದ ಸುತ್ತಮುತ್ತಲ ಗ್ರಾಮದಲ್ಲಿ ಹಾವುಗಳು ಕಾಣಿಸಿಕೊಂಡಾಗ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಹಾವುಗಳ ಸಂರಕ್ಷಣೆ ಮಾಡುತ್ತಿದ್ದರು. ಶನಿವಾರ ಗ್ರಾಮದ ನೇರಳೆ ಗ್ರಾಮದ ರಾಮಶೆಟ್ಟಿಅವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ.
ಅದನ್ನು ಹಿಡಿದು ಹೊರವಲಯದ ಕಾಡಿನಲ್ಲಿ ಬಿಡುವ ವೇಳೆ ಅದೇ ಹಾವು ಕೃಷ್ಣ ಅವರನ್ನು ಕಚ್ಚಿದೆ. ಕೂಡಲೇ ಆವರನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ನಂತರ ಕೃಷ್ಣ ಅವರ ಶವವನ್ನು ಗ್ರಾಮಕ್ಕೆ ತಂದು ಮನೆಯಲ್ಲಿ ಇರಿಸಲಾಗಿತ್ತು. ಕೃಷ್ಣನನ್ನು ಬಲಿ ಪಡೆದ ಹಾವು ಮತ್ತೆ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಕೂಡಲೇ ಹಾವನ್ನು ಕಂಡ ಗ್ರಾಮಸ್ಥರು ಆಕ್ರೋಶಗೊಂಡು ಕಟ್ಟಿಗೆ ಮತ್ತು ಕಲ್ಲುನಿಂದ ಜಜ್ಜಿ ಸಾಯಿಸಿದ್ದಾರೆ.