ಮುಂದುವರಿದ ಮಳೆ: 6 ಜಿಲ್ಲೆಯ ಶಾಲಾ,ಕಾಲೇಜುಗಳಿಗೆ ನಾಳೆಯೂ ರಜೆ
ಭಾರಿ ಮಳೆಯ ಕಾರಣ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೊಷಿಸಿದೆ.
ಬೆಂಗಳೂರು[ಆ.13]: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ರಾಜ್ಯದ 6 ಜಿಲ್ಲೆಗಳ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಶಿರಸಿ, ಸಿದ್ದಾಪುರ, ಭಟ್ಕಳ, ಹೊನ್ನಾವರ, ಯಲ್ಲಾಪುರ ತಾಲೂಕುಗಳು,ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ,
ಮೂಡಿಗೆರೆ, ಶೃಂಗೇರಿ, ಎನ್.ಆರ್. ಪುರ ತಾಲೂಕುಗಳು, ದ.ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕುಗಳು, ಉಡುಪಿ ಜಿಲ್ಲೆ ಹಾಗೂ ಹಾಸನದ ಸಕಲೇಶಪುರ ತಾಲೂಕಿಗೆ ಜಿಲ್ಲಾಧಿಕಾರಿಗಳು ರಜೆ ನೀಡಿ ಆದೇಶಿಸಿದ್ದಾರೆ.
ಲಿಂಗನಮಕ್ಕಿಗೆ 1812.75 ಅಡಿ ನೀರು
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಇದ್ದು, ಈಗಾಗಲೇ ಸೋಮವಾರ ಬೆಳಿಗ್ಗೆ 1812.75 ಅಡಿ ಭರ್ತಿಯಾಗಿದೆ. ಜಲಾಶಯದಲ್ಲಿ ಒಳಹರಿವು 41,645 ಕ್ಯೂಸೆಕ್ ಇದ್ದು, ಇದೇ ರೀತಿ ನೀರಿನ ಒಳಹರಿವು ಮುಂದುವರಿದಲ್ಲಿ ಗರಿಷ್ಠ ಮಟ್ಟವನ್ನು ಮೀರುವ ಸಾಧ್ಯತೆ ಇದೆ. ಹೀಗಾಗಿ, ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ನೀರನ್ನು ಹೊರ ಬಿಡಲಾಗುವುದು ಎಂದು ಕೆಪಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ನೀರು ಗೇರುಸೊಪ್ಪ ಜಲಾಶಯಕ್ಕೆ ಹರಿದು ಬರಲಿದೆ. ಆದರೆ, ಈ ಹೊರ ಬಿಡುವ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಅವಕಾಶ ಗೇರುಸೊಪ್ಪದಲ್ಲಿ ಇಲ್ಲದ ಕಾರಣ ಇಲ್ಲಿನ ಅಣೆಕಟ್ಟಿನಿಂದ ಹೊರ ಬಿಡಲಾಗುವುದು ಎಂದು ತಿಳಿಸಿದೆ.