ವಾಟಾಳ್ ನಾಗರಾಜ್ ಉರುಳು ಸೇವೆ
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಉರುಳು ಸೇವೆಯನ್ನು ನಡೆಸಿದ್ದಾರೆ. ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಅವರು ಈ ಬಾರಿ ಹಂಪಿ ಉತ್ಸವಕ್ಕಾಗಿ ಉರುಳು ಸೇವೆ ಮೂಲಕ ಪ್ರತಿಭಟಿಸಿದ್ದಾರೆ.
ಹೊಸಪೇಟೆ: ಹಂಪಿ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಶನಿವಾರ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ಸವಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರ ಶೀಘ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಮೈಸೂರು ದಸರಾದಷ್ಟೇ ಹಂಪಿ ಉತ್ಸವ ಪ್ರಖ್ಯಾತಿ ಪಡೆದುಕೊಂಡಿದೆ.
ಮೈಸೂರು ದಸರಾ ಉತ್ಸವ ನಡೆಸಿದಂತೆ ಹಂಪಿ ಉತ್ಸವ ನಡೆಸಲೇಬೇಕು. ಅದೂ ಮೂರು ದಿನ ನಡೆಯಬೇಕು. ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಕಡೆಗಣಿಸುವುದು ಸರಿಯಲ್ಲ. ಒಂದೊಮ್ಮೆ ಕಡೆಗಣಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.