ಎಣ್ಣೆ ಬ್ಯಾನ್.. ಹೊಸವರ್ಷಾಚರಣೆ ವೇಳೆ ಸರ್ಕಾರಕ್ಕೆ ಸಂಕಟ!
ಹೊಸ ವರ್ಷದ ಸಂದರ್ಭ ಮದ್ಯ ನಿಷೇಧದ ವಿಚಾರ/ ಬಿಹಾರಕ್ಕೆ ಪ್ರವಾಸ ಮಾಡಿ ಅಧ್ಯಯನ ನಡೆಸಿದ ತಂಡ/ ರಾಜಸ್ಥಾನದ ಸರ್ಕಾರಕ್ಕೆ ಉಭಯ ಸಂಕಟ
ಜೈಪುರ(ಡಿ. 28) ಹೊಸ ವರ್ಷದ ಸಂದರ್ಭ ರಾಜಸ್ಥಾನ ಸರ್ಕಾರ ಮದ್ಯ ಬ್ಯಾನ್ ವಿಚಾರದಲ್ಲಿ ಒಂದು ಸಂಕಟಕ್ಕೆ ಸಿಲುಕಿದೆ. ರಾಜಸ್ಥಾನದ ಅಧಿಕಾರಿಗಳ ಒಂದು ತಂಡ ಬಿಹಾರಕ್ಕೆ ಪ್ರವಾಸ ಮಾಡಿ ಅಲ್ಲಿ ಮದ್ಯ ನಿಷೇಧದ ನಂತರದ ಪರಿಣಾಮಗಳು ಹೇಗಿವೆ ಎಂದು ಅಧ್ಯಯನ ಮಾಡಿಕೊಂಡು ಬಂದಿದೆ.
ಹೆಚ್ಚುವರಿ ಅಬಕಾರಿ ಆಯುಕ್ತ ಸಿಆರ್ ದೆವ್ಸಾಯ್ ಅವರ ನೇತೃತ್ವದ ತಂಡ ವರದಿ ಸಿದ್ಧಮಾಡಿ ಸರ್ಕಾರಕ್ಕೆ ಕೆಲವೇ ದಿನದಲ್ಲಿ ಸಲ್ಲಿಸಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ರಾಜಸ್ಥಾನ ಸಿಎಂ ಅಶೋಖ್ ಗೆಹ್ಲೋಟ್ ಸರ್ಕಾರ ಮದ್ಯ ನಿಷೇಧದ ಪರವಾಗಿ ಇದೆ ಎಂದು ಹೇಳಿದ್ದಾರೆ. ಜನರ ಸಹಕಾರ ಇಲ್ಲದೆ ಇದು ಸಾಧ್ಯವಿಲ್ಲ. ಜನರು ಈ ಕೆಲಸಕ್ಕೆ ಸಹಕಾರ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
ಎಣ್ಣೆ ಕುಡಿದ್ರೂ, ಮಾರಿದ್ರೂ ಭಾರೀ ದಂಡ
ಎರಡು ರಾಜ್ಯಗಳ ನಡುವೆ ಬಹಳಷ್ಟು ವ್ಯತ್ಯಾಸವಿದೆ. ರೆವೆನ್ಯೂ ಸಂಗ್ರಹದ ವಿಚಾರದಲ್ಲಿಯೂ ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿಸಿದೆ.
ಮದ್ಯ ನಿಷೇಧಕ್ಕೂ ಮುನ್ನ ಬಿಹಾರ 300 ರಿಂದ 400 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹಣೆ ಮಾಡುತ್ತಿತ್ತು. ಆದರೆ ರಾಜಸ್ಥಾನದ ವಿಚಾರಕ್ಕೆ ಬಂದರೆ ಇದು 11 ಸಾವಿರ ಕೋಟಿ ರೂ. ಇದೆ. ರಾಜಸ್ಥಾನ ಪ್ರವಾಸಿ ತಾಣ ಎಂದು ಹೆಸರು ಪಡೆದುಕೊಂಡಿದ್ದು ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ ಆಗದೇ ಇರಲು ಸಾಧ್ಯವೇ ಇಲ್ಲ.
ಇದರೊಂದಿಗೆ ಪಕ್ಕದ ರಾಜ್ಯದಿಂದ ಕಳ್ಳದಾರಿಯಲ್ಲಿ ಬರುವ ಮದ್ಯ ತಡೆಯಬೇಕಾಗಿದೆ. ಪಕ್ಕದ ಹರ್ಯಾಣ ಮತ್ತು ಗುಜರಾತ್ ನಲ್ಲಿ ಮದ್ಯ ಸಿಗುತ್ತದೆ. ಒಂದು ವೇಳೆ ನಿಷೇಧ ಮಾಡಿದರೆ ಈ ದಿಕ್ಕಿನಿಂದ ಒಳನುಸುಳುವ ಸಾಧ್ಯತೆ ಹೆಚ್ಚಿದ್ದು ಅದನ್ನು ತಡೆಯಬೇಕಾಗಿದೆ ಎಂದು ಟೀಮ್ ಹೇಳಿದೆ.