ಸುರೇಶ್ ಗೆ 14 ದಿನ ನ್ಯಾಯಾಂಗ ಬಂಧನ
ಸುರೇಶ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕುಣಿಗಲ್ ಸುರೇಶ್ನನ್ನೂ ಎಸ್ ಐಟಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕುಣಿಗಲ್ ಸುರೇಶ್ನನ್ನೂ ಎಸ್ ಐಟಿ ಅಧಿಕಾರಿಗಳು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿವಿಲ್ ಕಂಟ್ರಾಕ್ಟರ್ ಕೂಡ ಆಗಿರುವ ಸುರೇಶ್ ಗೌರಿ ಹಂತಕರಿಗೆ ಮನೆಯನ್ನು ಬಿಟ್ಟುಕೊಟ್ಟಿದ್ದ. ಜತೆಗೆ ಹತ್ಯೆಗೆ ಬಳಸಿದ ಪಿಸ್ತೂಲ್ನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು 15 ದಿನಗಳ ಬಳಿಕ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆಗೆ ಹಸ್ತಾಂತರಿಸಿದ್ದ. ಕೃತ್ಯಕ್ಕೆ ಬಳಸಿದ್ದ ಬೈಕನ್ನೂ ನಾಪತ್ತೆ ಮಾಡುವುದರಲ್ಲಿ ಈತನದ್ದೇ ಕೈವಾಡ ಇದೆ ಎನ್ನುವ ಆರೋಪದ ಮೇಲೆ ಅಧಿಕಾರಿಗಳು ಬಂಧಿಸಿ 8 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.
ಕಸ್ಟಡಿ ಅವಧಿ ಇನ್ನೂ ಒಂದು ದಿನ ಬಾಕಿ ಇದ್ದಾಗಲೇ ವಿಚಾರಣೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಮಂಗಳವಾರ ಸಂಜೆ ಅಧಿಕಾರಿಗಳು ಒಂದನೇ ಎಸಿಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.