ಇಲ್ಲಿ ಜನರಿಗಿಂತ ಹೆಚ್ಚು ದನಕ್ಕೇ ಹೆಚ್ಚು ಪ್ರಾಮುಖ್ಯತೆ: ಶಾ
ಪೊಲೀಸರ ಹತ್ಯೆಗಿಂತ ಇತ್ತೀಚೆಗೆ ಗೋವಿನ ಸಾವು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ ಎನ್ನುವ ಮೂಲಕ ಬಾಲಿವುಡ್ ಪ್ರಸಿದ್ಧ ನಟ ನಾಸಿರುದ್ದೀನ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮುಂಬೈ[ಡಿ.21]: ಇತ್ತೀಚಿನ ದಿನಗಳಲ್ಲಿ ಪೊಲೀಸರ ಹತ್ಯೆಗಳಿಗಿಂತ ಗೋವಿನ ಸಾವಿನ ವಿಚಾರವೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ ಎಂದು ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರು ಹೇಳಿದ್ದಾರೆ. ಈ ಮೂಲಕ ಇತ್ತೀಚೆಗೆ ಉತ್ತರ ಪ್ರದೇಶದ ಬುಲಂದ್ಶಹರ್ ಗೋವುಗಳ ಹತ್ಯೆ ಪ್ರತಿಭಟನೆಯ ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಅಧಿಕಾರಿಯಾದ ಸುಬೋದ್ ಕುಮಾರ್ ಸಿಂಗ್ ಅವರ ಹತ್ಯೆ ಘಟನೆ ಬಗ್ಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ವಾನ್-ಇ-ಮೊಹಬ್ಬಾತ್ ಎಂಬ ಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಎಲ್ಲೆಡೆಯೂ ಈಗಾಗಲೇ ವಿಷ ಹರಡಿಕೊಂಡಿದ್ದು, ಅದನ್ನು ನಿಗ್ರಹಿಸಿ, ಬಾಟಲಿಗೆ ತುಂಬುವುದು ಸುಲಭದ ಕೆಲಸವಲ್ಲ,’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನಾಳೆ ಉದ್ರಿಕ್ತರ ಗುಂಪೊಂದು ನನ್ನ ಮಕ್ಕಳನ್ನು ಸುತ್ತುವರಿದು, ನೀವು ಹಿಂದೂಗಳೇ ಅಥವಾ ಮುಸ್ಲಿಮರೇ ಎಂದು ಪ್ರಶ್ನೆ ಮಾಡುತ್ತಾರೆ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಇಂಥ ಘಟನೆಗಳು ನನ್ನನ್ನು ಆಕ್ರೋಶಕ್ಕೀಡು ಮಾಡುತ್ತವೆಯೇ ಹೊರತೂ, ನನ್ನನ್ನು ಹೆದರಿಸಲು ಸಾಧ್ಯವಿಲ್ಲ,’ ಎಂದು ಇದೇ ವೇಳೆ ಹೇಳಿದ್ದಾರೆ. ಇದು ನಮ್ಮ ಮನೆ, ಇಲ್ಲಿಂದ ನಮ್ಮನ್ನು ಹೊರದಬ್ಬಲು ಯಾರಿಗೆ ಧೈರ್ಯವಿದೆ ಎಂದು ಪ್ರಶ್ನಿಸಿದರು.
ಸದ್ಯ ಇವರ ಈ ಹೇಳಿಕೆ ಉತ್ತರ ಪ್ರದೇಶ ಸರ್ಕಾರವನ್ನು ಕೆರಳಿಸಿರುವುದರಲ್ಲಿ ಅನುಮಾನವಿಲ್ಲ